ಗುರು ಸೇವೆ ಸ್ಮರಿಸಿದ ಚಿಕ್ಕಮಂಡ್ಯ ಶಾಲೆಯ ಹಳೆಯ ವಿದ್ಯಾರ್ಥಿಗಳ ತಂಡ

Team Newsnap
2 Min Read
Team of Alumni of Chikkamandya School commemorated Guru Seva ಗುರು ಸೇವೆ ಸ್ಮರಿಸಿದ ಚಿಕ್ಕಮಂಡ್ಯ ಶಾಲೆಯ ಹಳೆಯ ವಿದ್ಯಾರ್ಥಿಗಳ ತಂಡ

ಮಂಡ್ಯ: 39 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಲೋಕೇಶ್ ಅವರಿಗೆ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.

ಶಿಕ್ಷಕ ಲೋಕೇಶ್ ಅವರ ಕುವೆಂಪುನಗರದಲ್ಲಿನ ನಿವಾಸಕ್ಕೆ ತೆರಳಿದ ಚಿಕ್ಕಮಂಡ್ಯ ಸರಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿಯ ಮೊದಲ ತಂಡದ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕನಿಗೆ ಪ್ರೀತಿ, ಗೌರವದಿಂದ ಸನ್ಮಾನಿಸಿ ಅಭಿನಂದಿಸಿದರು. 27 ವರ್ಷಗಳ ಹಿಂದಿನ ಶಾಲೆಯ ದಿನಗಳನ್ನು ಮೆಲುಕು ಹಾಕುತ್ತಾ ನೆನಪಿನಂಗಳಕ್ಕೆ ಜಾರಿದರು.

ಶಾಲೆಗಳಲ್ಲಿ ನಡೆಯುತ್ತಿದ್ದ ಪಾಠ-ಪ್ರವಚನ, ಮೂಲಸೌಕರ್ಯಗಳ ಕೊರತೆಯಿಂದ ಎದುರಿಸಿದ ಸವಾಲುಗಳು, ವಿದ್ಯಾರ್ಥಿಗಳ ಹಿಂದಿನ ನಡವಳಿಕೆಗಳು, ಪರೀಕ್ಷಾ ದಿನಗಳು, ಕಲಿಕಾ ಸಾಮರ್ಥ್ಯ, ಶಾಲಾ ದಿನಗಳ ತುಂಟತನ… ಹೀಗೆ ಹತ್ತಾರು ಸಂಗತಿಗಳೊಂದಿಗೆ ನೆನಪಿನ ಪುಟಗಳನ್ನು ತಿರುವು ಹಾಕಿದರು.

ವಿಜ್ಞಾನ, ಗಣಿತದ ವಿಷಯಗಳು, ಪವಾಡ ರಹಸ್ಯ ಬಯಲು, ವಿಜ್ಞಾನ ಮಾದರಿಗಳ ಪ್ರದರ್ಶನದ ಬಗ್ಗೆ ತರ್ಕಬದ್ಧ ಚರ್ಚೆ ನಡೆಸಿದರು.
ಈ ವೇಳೆ ನಿವೃತ್ತ ಶಿಕ್ಷಕ ಎಸ್.ಲೋಕೇಶ್ ಅವರು ಮಾತನಾಡಿ, ಶಾಲಾ ದಿನಗಳಲ್ಲಿ ನಿಮಗೆ ಸಾಧ್ಯವಾದಷ್ಟು ಕಲಿಸುವ ಪ್ರಯತ್ನವನ್ನು ನಾವೆಲ್ಲಾ ಶಿಕ್ಷಕರು ಮಾಡಿದ್ದೇವೆ. ಈಗ ನಿಮ್ಮಗಳ ಸರದಿ. ನಿಮ್ಮ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ತಿಳಿಸಿ. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿ. ಒಳ್ಳೆಯ ಶಿಕ್ಷಣ ಕೊಡಿ. ಸಮಯಕ್ಕೆ ಆದ್ಯತೆ ಕೊಡಿ. ಸಮಯಪಾಲನೆ ಮಾಡಿ. ನಿಮ್ಮ ಮಕ್ಕಳಿಗೂ ಅದನ್ನು ಕಲಿಸಿ ಎಂದು ಸಲಹೆ ನೀಡಿದರು.

ಶಿಕ್ಷಕ ಲೋಕೇಶ್ ಅವರ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಅಭಿಮಾನದಿಂದ ಮಾತನಾಡಿದರು. ಅಂತಿಮವಾಗಿ ನೆನಪಿನ ಕಾಣಿಸಿ ನೀಡಿ, ಹಾರ-ಶಾಲು ಹೊದಿಸಿ ಗೌರವ ಸಮರ್ಪಣೆ ಮಾಡಿ ಗುರುವಂದನೆ ಸಲ್ಲಿಸಿದರು. ಕೇಕ್ ಕತ್ತರಿಸಿ ಹಂಚಿ ತಿನ್ನುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಕೇಶವ, ಸಿ.ಎಸ್.ದೇವರಾಜು, ಸಿ.ಡಿ.ರಾಜೇಶ್, ನವೀನ್, ಸತೀಶ್, ಸಿ.ಎಚ್.ಶಿವಕುಮಾರ್, ಸಿ.ಎಸ್.ಉಮೇಶ್, ಸಿ.ಕೆ.ಜ್ಯೋತಿ, ಎಚ್.ಎನ್.ಲತಾಮಣಿ, ಸಿ.ಕೆ.ನಾಗಮಣಿ, ರತ್ನಮ್ಮ, ತಾಯಮ್ಮ ಪ್ರತಿಭಾ, ಸಿ.ಪಿ.ಶಿಲ್ಪ, ಸುನೀತಾ ಇತರರು ಭಾಗವಹಿಸಿದ್ದರು.ಬೆಂಗಳೂರು ಮೈಸೂರು ದಶಪಥ ಹೆದ್ದಾರಿ 2ನೇ ಟೋಲ್ ಜುಲೈ 1 ರಿಂದ ಆರಂಭ

ನನ್ನ ಮನೆಯ ಬಡತನ ನನಗೆ ಸಾಕಷ್ಟು ಕಲಿಸಿತು, ಸೇವಾ ಮನೋಭಾವ ಹೆಚ್ಚಿಸಿತು. ಬದುಕು ಎಲ್ಲಕ್ಕಿಂತ ಮುಖ್ಯ ಮತ್ತು ದೊಡ್ಡದು. ಅದನ್ನು ನೀವು ಅನುಭವಿಸಿ. ನಿಮ್ಮ ಜೀವನ ಪ್ರತಿ ಹಂತದಲ್ಲೂ ನಾನು ನಿಮ್ಮೊಂದಿಗಿರುತ್ತೇನೆ. ನನ್ನ ಪುಣ್ಯ, ನನಗೆ ನಿಮ್ಮ ಪ್ರೀತಿ ಸಿಕ್ಕಿದೆ. ಇದು ಎಲ್ಲರಿಗೂ ಸಿಗಲ್ಲ. ನಿಮ್ಮ ಪ್ರೀತಿ ಹೀಗೆಯೇ ಇರಲಿ. ಎಲ್ಲರಿಗೂ ಬದುಕಿನಲ್ಲಿ ಅವಕಾಶ ಸಿಗಬೇಕು, ಸಿಗುತ್ತವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿ.
ಎಸ್.ಲೋಕೇಶ್, ನಿವೃತ್ತ ಶಿಕ್ಷಕರು, ಮಂಡ್ಯ

Share This Article
Leave a comment