ಹಲಾಲ್ ವಿಚಾರದಲ್ಲಿ ಭುಗಿಲೆದ್ದಿರುವ ಗಲಾಟೆಯನ್ನು ಮಧ್ಯಸ್ಥಿತಿಕೆ ವಹಿಸಿಕೊಂಡು ಸರಿಪಡಿಸಿ. ಈ ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ, ಬೊಮ್ಮಾಯಿಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದರು.
ಚನ್ನಪಟ್ಟಣದ ಚಕ್ಕೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ, ಸಿಎಂ ಬಸವರಾಜ ಬೊಮ್ಮಾಯಿಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು. ಸಮಾಜ ಒಡೆಯುವ ಶಕ್ತಿಗಳು ಹ್ಯಾಂಡ್ ಬಿಲ್ ಹಂಚುತ್ತಿದ್ದಾರೆ. ನೀವು ಯಾವ ಸಂವಿಧಾನವನ್ನು ಗೌರವಿಸುತ್ತಿದ್ದೀರಾ, ಯಾಕೆ ಅಂಬೇಡ್ಕರ್ ಜಯಂತಿ ಆಚರಿಸುತ್ತೀರಿ ಎಂದು ತಿಳಿದುಕೊಳ್ಳಿ ಎಂದು ಕೆಂಡಕಾರಿದ್ದಾರೆ.
ನನಗೆ ಓಟ್ ಮುಖ್ಯವಲ್ಲ, ಈ ನಾಡು ಶಾಂತಿಯಿಂದ ಬದುಕಬೇಕು. ಹಾಗಾಗಿ ನಾನು ಮೌನವಾಗಿರಲು ಸಾಧ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್ನವರಿಗೆ ಮಾತನಾಡಲು ತಾಕತ್ತಿಲ್ಲ. ಹಿಂದೂಗಳು ಓಟ್ ಹಾಕುತ್ತಾರೋ, ಇಲ್ಲವೋ ಎಂಬ ಭಯದಲ್ಲಿದ್ದಾರೆ ಎಂದರು
ಇಷ್ಟು ವರ್ಷನಾವೆಲ್ಲರೂ ಹಲಾಲ್ ತಿಂದಿದ್ದೇವೆ, ನಮಗೆ ಏನಾಗಿದೆ ಚೆನ್ನಾಗಿದ್ದಿವಲ್ಲ. ಈಗ ಹಲಾಲ್ ತಿಂದರೆ ತೊಂದರೆ ಆಗುತ್ತಾ, ನಮ್ಮ ದೇವರು ಮೆಚ್ಚಲ್ವಾ, ಹೀಗಂತ ನಮ್ಮ ಹಿಂದೂ ದೇವರು ಕನಸಲ್ಲಿ ಬಂದು ಹೇಳಿಲ್ಲವಲ್ಲ. ಹಲಾಲ್ ಈಗಿನಿಂದಲ್ಲ, ಹಲವಾರು ವರ್ಷಗಳಿಂದಲೂ ನಡೆಯುತ್ತಿದೆ. ಎಂದರು.
ಇದೇ ವೇಳೆ ಕೊರೊನಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರು. ಆಗ ವಿಶ್ವ ಹಿಂದೂ ಪರಿಷತ್ – ಭಜರಂಗದಳದವರು ಎಲ್ಲಿ ಹೋಗಿದ್ದರು? ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಆಗಲಿಲ್ಲ ಎಂದು ವ್ಯಂಗ್ಯವಾಡಿದರು
ವಿಶ್ವ ಹಿಂದೂ ಪರಿಷತ್, ಭಜರಂಗದಳದವರು ಕಿಡಿಗೇಡಿಗಳು, ಸಮಾಜಘಾತುಕರು. ಅವರಿಗೆ ರೈತರ ಬದುಕು ಗೊತ್ತಿದೆಯಾ? ನಮ್ಮ ರೈತರು ಕಟ್ ಮಾಡುವ ಮಾಂಸ ಕ್ಲೀನ್ ಮಾಡಲು ಅದೇ ಸಮಾಜದವರೇ ಬರಬೇಕು. ಈಗ ಹಲಾಲ್ – ಜಟ್ಕಾ ಕಟ್ ಅಂತಿದ್ದಾರೆ. ನಿಮ್ಮ ಜಟ್ಕಾ ಮಾಡುವುದಕ್ಕೆ, ಇನ್ನೊಂದು ಮಾಡುವುದಕ್ಕೂ ಅವರೇ ಬರಬೇಕು.
ರೇಷ್ಮೆ, ಮಾವು ಬೆಳೆ ಮಾರಾಟಕ್ಕೆ ಈ ಪೋಲಿಸರು ಬರ್ತಾರಾ? ಅಕಾಲಿಕ ಮಳೆಯಿಂದಾಗಿ ಮಾವು ನಷ್ಟವಾಗಿದೆ. ಅದನ್ನು ಖರೀದಿ ಮಾಡಲು ಆ ಸಮಾಜದವರೇ ಬರಬೇಕು. ವಿಶ್ವ ಹಿಂದೂ ಪರಿಷತ್ನವರು ಭಜರಂಗದಳದವರು ಇವರ ಹೊಟ್ಟೆ ಮೇಲೆ ಹೊಡೆಯಲು, ದೇಶ ಹಾಳು ಮಾಡುವುದಕ್ಕೆ ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ. ಇದಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.