ದೊಡ್ಡವರಲ್ಲಿ ಇರದ ಸಂಸ್ಕಾರವನ್ನು ಮಕ್ಕಳಿಗೆ ಏಕೆ ಕಲಿಸಬೇಕೆಂಬ ಹಂಬಲ ?

Team Newsnap
2 Min Read

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ.
ಮಾಧ್ಯಮಗಳಲ್ಲೂ ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ.

ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ , ಸಮಾಜದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಅಥವಾ ಮುಖವಾಡಗಳಾಗಿ ಬದಲಾಗುತ್ತಿರುವ ನಿಜವಾದ ಮೌಲ್ಯಗಳನ್ನು ಅದರ ಮೂಲ ಸ್ವರೂಪದಲ್ಲಿಯೇ ಮಕ್ಕಳಲ್ಲಿ ಕಾಣಬೇಕೆಂಬ ಹಂಬಲ ಪೋಷಕರದು.ಇದರಿಂದಾಗಿ ಒಳ್ಳೆಯ ಭವಿಷ್ಯ ರೂಪಗೊಳ್ಳುತ್ತದೆ ಎಂದು ಆಸೆಪಡುತ್ತಿದ್ದಾರೆ.

ಆಪೇಕ್ಷೆ ಏನೋ ಒಳ್ಳೆಯದು.
ಆದರೆ ವಾಸ್ತವ.

ವಿಚಿತ್ರವೆಂದರೆ,
ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಯಾವ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಕೆಟ್ಟದ್ದನ್ನು ಹೇಳಿಕೊಡುವುದಿಲ್ಲ. ತಾವು ಕಳ್ಳರಾದರೂ ತಮ್ಮ ಮಕ್ಕಳು ಮಾತ್ರ ಉತ್ತಮ ದಾರಿ ಹಿಡಿಯಲಿ ಎಂದೇ ಇಚ್ಚಿಸುತ್ತಾರೆ.

ಆದರೆ ಬಹಳಷ್ಟು ಮಕ್ಕಳು ತಮ್ಮ ನಡವಳಿಕೆಗಳಲ್ಲಿ ನಾವು ಹೇಳುವುದನ್ನು ಮಾಡುವುದು ಕಡಿಮೆ ಅಥವಾ ಮಾಡಿದಂತೆ ನಟಿಸುತ್ತಾರೆ.
ವಾಸ್ತವದಲ್ಲಿ ಅವರು ಗ್ರಹಿಸುವುದು ನಾವು ಹೇಳುವುದನ್ನಲ್ಲ ಮಾಡುವುದನ್ನು.
ದೊಡ್ಡವರನ್ನು ಅನುಕರಿಸುವದೇ ಅವರ ಮೊದಲ ಮತ್ತು ಸುಲಭ ಆಯ್ಕೆ. .

ಮನೆಯಲ್ಲಿ ನಾವು ಹಾಡು ಹೇಳಿದರೆ, ನೃತ್ಯ ಮಾಡಿದರೆ, ಯೋಗ ವ್ಯಾಯಾಮ ಮಾಡಿದರೆ, ಸಿಗರೇಟ್ ಸೇದಿದರೆ ಅದನ್ನು ಅನುಕರಿಸಲು ಪ್ರಯತ್ನಿಸುತ್ತಾರೆ.
ನಾವು ಮೊಬ್ಯೆಲ್ ನಲ್ಲಿ ಮಾತನಾಡುವಾಗ ಯಾರನ್ನಾದರು ಕೆಟ್ಟ ಮಾತಿನಲ್ಲಿ ಬೈದರೆ ಅಥವಾ ಕಾಣುವಂತ ಸುಳ್ಳು ಹೇಳಿದರೆ ತಕ್ಷಣಕ್ಕಲ್ಲದಿದ್ದರೂ ಅವಶ್ಯಕತೆ ಒದಗಿ ಬಂದಾಗ ಅದನ್ನು ಶಾಲೆಯೋ ಅಥವಾ ಇನ್ನೆಲ್ಲಾದರೂ ಪ್ರಯೋಗಿಸುತ್ತಾರೆ.

ಅವರನ್ನು ಶಾಲೆಗೆ ಕರೆದೊಯ್ಯುವ ಬಸ್ಸು ಆಟೋ ವ್ಯಾನುಗಳ ಡ್ರೈವರುಗಳ, ಆಯಾಗಳ ಮಾತು ಚಟುವಟಿಕೆ ಅವರನ್ನು ಹೆಚ್ಚು ಸೆಳೆಯುತ್ತದೆ.
ಶಾಲೆ ಮತ್ತು ಮನೆಯ ಸುತ್ತಲಿನ ವಾತಾವರಣದ ಅದರಲ್ಲೂ ಆಕ್ರಮಣಕಾರಿ ವರ್ತನೆಗಳು ಅವರನ್ನು ಬೇಗ ಆಕರ್ಷಿಸುತ್ತದೆ. ಇನ್ನು ಟಿವಿ ಸಿನಿಮಾ ಇಂಟರ್ನೆಟ್ ಗಳ ಅತಿರೇಕದ ಪ್ರಭಾವದಿಂದ ಅವರು ತಪ್ಪಸಿಕೊಳ್ಳುವುದು ಕಷ್ಟ.

ಇದರ ಅರ್ಥ,
ಮೂಲಭತವಾಗಿ ಸಂಸ್ಕಾರಗಳನ್ನು ಹೇಳಿಕೊಡುವುದರಿಂದ ಹೆಚ್ಚನ ಪ್ರಯೋಜನವಿಲ್ಲ.
ವಾಹನ ಚಲಾಯಿಸಲು ಪುಸ್ತಕದಲ್ಲಿ ನೋಡಿ ಕಲಿತಷ್ಟೇ ಪ್ರಯೋಜನ. ನಿಜವಾದ ಪರಿಣಾಮ ಸಮಾಜದ ಈಗಿನ ನಡವಳಿಕೆಗಳೇ ಅವರನ್ನು ರೂಪಿಸುತ್ತವೆ.
ನಮ್ಮಂತ ದೊಡ್ಡವರಿಗೇ ಇನ್ನು ಸರಿಯಾದ ಸಂಸ್ಕಾರ ಇಲ್ಲದಿರುವಾಗ ಪುಟ್ಟ ಮಕ್ಕಳಿಗೆ ಅದನ್ನು ಕಲಿಸುವುದು ಹೇಗೆ.

ನಿಜವಾದ ಸಂಸ್ಕಾರ ಬೇಕಾಗಿರುವುದು ದೊಡ್ಡವರಿಗೆ.
ಏಕೆಂದರೆ, 0/15 ವರ್ಷದ ಮಕ್ಕಳು ದೊಡ್ಡ ತಪ್ಪು ಮಾಡುವುದು ತುಂಬಾ ಕಡಿಮೆ. 18/20 ತುಂಬುತ್ತಿದ್ದಂತೆ ಸಮಾಜಕ್ಕೆ ತೆರೆದುಕೊಳ್ಳುವ ಅವರು ತಮ್ಮ ವಯೋಸಹಜ ಬದಲಾವಣೆಗಳಿಂದ ಇಲ್ಲಿನ ನಡವಳಿಕೆಗಳನ್ನೇ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಒಂದು ವೇಳೆ ಸಮಾಜದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಸಮಾನತೆ ಇದ್ದರೆ,
ಕುಡಿತದ ಬಗ್ಗೆ ಅಸಹ್ಯವಿದ್ದರೆ,
ಲಂಚದ ಬಗ್ಗೆ ಕೆಟ್ಟ ಅಭಿಪ್ರಾಯವಿದ್ದರೆ, ಶ್ರಮ ಸಂಸ್ಕೃತಿಯ ಬಗ್ಗೆ ಗೌರವವಿದ್ದರೆ, ಒಳ್ಳೆಯತನಕ್ಕೆ ಬೆಲೆಯಿದ್ದರೆ,
ಪ್ರತಿಭೆಗೆ ತಕ್ಕ ಮಾನ್ಯತೆ ಇದ್ದರೆ,
ಮಕ್ಕಳೂ ಅದನ್ನೇ ಒಪ್ಪಿಕೊಳ್ಳಲು ಪ್ರಯತ್ನಿಸುತ್ತಾರೆ.

ಅಥವಾ,

ಇಲ್ಲಿ ಹೆಂಗಸರನ್ನು ಚುಡಾಯಿಸುವವನು ಮಹಾನ್ ಗಂಡಸೆಂತಲೂ,
ಬೈಕ್ ವೀಲಿಂಗ್ ಮಾಡುವವನನ್ನು
ಧೀರನೆಂತಲೂ,
ಕಾನೂನು ಉಲ್ಲಂಘಿಸುವವನನ್ನು ಶೂರನೆಂತಲೂ,
ಮೋಸದಿಂದಾರೂ ಹಣ ಮಾಡುವವನನ್ನು ಯಶಸ್ವಿ ವ್ಯಕ್ತಿಯಂತಲೂ ಬಿಂಬಿಸಿದರೆ ಮಕ್ಕಳೂ ಇದೇ ಪ್ರಭಾವಕ್ಕೆ ಒಳಗಾಗುತ್ತಾರೆ.

ಆದ್ದರಿಂದ, ಬದಲಾಗಬೇಕಾಗಿರುವುದು ಏನೂ ಅರಿಯದ ಮಕ್ಕಳಲ್ಲ. ಎಲ್ಲವನ್ನೂ ಅರಿತಿದ್ದೇವೆಂದು ಭಾವಿಸಿರುವ ನಾವು. ಜವಾಬ್ದಾರಿಯುತ ನಾಗರಿಕರು. ನೆಪಗಳನ್ನು ಹುಡುಕದೇ ಈ ಕ್ಷಣವೇ ಕನಿಷ್ಠ ಮಟ್ಟದ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳೋಣ. ಇದೇನು ಬಾರಿ ಬಾರಿ ಕಷ್ಟವಲ್ಲ. ಮನಸ್ಸು ಮಾಡಿದರೆ ಸುಲಭ ಮತ್ತು ಸರಳ.


ವಿವೇಕಾನಂದ ಹೆಚ್ ಕೆ

Share This Article
Leave a comment