ಮಹಿಳಾ ದಿನಾಚರಣೆ ಬಂತೆಂದರೆ ಸಾಕು ಮಹಿಳೆಗೆ ಶುಭಾಶಯಗಳ ಸುರಿಮಳೆ,ಕಾರ್ಯಕ್ರಮಗಳ ಮೂಲಕ ಸನ್ಮಾನ ಮಾಡುವುದರ ಮೂಲಕ ಅಭಿನಂದಿಸುವುದು.ಭಾಷಣಗಳ ಮೂಲಕ ಹೆಣ್ಣನ್ನು ಬಣ್ಣಿಸುವುದು ಜೋರಾಗಿರುತ್ತದೆ.ಆದರೆ ಮರುದಿನ ಮತ್ತೆ ಪತ್ರಿಕೆಯಲ್ಲಿ ಅತ್ಯಾಚಾರ,ವಿಕೃತಭಾವದಂತ ಘೋರ ಕೃತ್ಯಗಳನ್ನು ನೋಡಿ ನಿಜಕ್ಕೂ ಬೇಸರವಾಗುತ್ತದೆ.
ಮಹಿಳಾ ದಿನಾಚರಣೆ ಆಡಂಬರಕ್ಕೆ ಸೀಮಿತವಾಗಬಾರದು ಪ್ರತಿ ವ್ಯಕ್ತಿ ಹೆಣ್ಣೆಂದರೇನು ಅಂತ ಅರಿತು ಪ್ರತಿ ಮನೆಯ ಹೆಣ್ಣನ್ನು ಸಮಾನದಿ ಕಂಡಾಗಲೇ ಮಹಿಳಾ ದಿನಾಚರಣೆಕ್ಕೆ ಅರ್ಥ ಬರುವುದು.ಮಾರ್ಚ್ 8 ಮಾತ್ರಕ್ಕೆ ಮಹಿಳೆಯನ್ನು ಹೊಗಳಿ ಅಟ್ಟಕ್ಕೇರಿಸಿ ಗೌರವಿಸುವುದಲ್ಲ .ಪ್ರತಿದಿನ ಕಾರ್ಯ ಶ್ಲಾಘಿಸುತ ಕೃತಜ್ಞತೆ ಸಲ್ಲಿಸಿದಾಗಲೇ ಮಹಿಳೆಗೆ ಸಂತಸ ಹುಟ್ಟಿದ್ದಕ್ಕೂ ಸಾರ್ಥಕತೆ ಎಂದು ಸಂಭ್ರಮಿಸುವಳು..
ಹೆಣ್ಣು ಜೀವಸಂಕುಲದ ಉಸಿರು ಪ್ರತಿ ಜೀವವ ಪೊರೆಯುವ ನಿಸ್ವಾರ್ಥ ಜೀವಿ,ಗಂಧದಂತೆ ಬದುಕನು ಸವೆಸುತ ಸಂಸಾರದ ಬಂಡಿ ಮುನ್ನಡೆಸುವ ಸಾರಥಿ,ಬೆಳಗಾದರೆ ಸಾಕು ಭಾಸ್ಕರನಂತೆ ದಿನಚರಿ ಆರಂಭಿಸುತ ರಾತ್ರಿವರೆಗೂ ಬಸವಳಿದರೂ ಬೇಸರಿಸದೆ ಮನೆ ಕಾರ್ಯ ನಿರ್ವಹಿಸುವ ಗೃಹಿಣಿ,ಭೂಮಿ ತೂಕದಷ್ಟೇ ಸಹನೆ ತಾಳ್ಮೆಯ ಹೊಂದಿರುವ ಸಹನಾಮೂರ್ತಿ.ಮನೆಯ ಪ್ರತಿ ಸದಸ್ಯರ ಹಿತವನು ಕಾಪಾಡುತ ಎಲ್ಲರ ಹಸಿವನು ನೀಗಿಸುವ ಸಾಕ್ಷಾತ್ ಅನ್ನಪೂರ್ಣೆ.ತಾನು ಒಂದು ಜೀವವಾಗಿ ಮತ್ತೊಂದು ಜೀವಕ್ಕೆ ಜೀವ ನೀಡುವ ಶಕ್ತಿ ಇರುವ ಏಕೈಕ ಜೀವಿ ಎಂದರೆ ಸ್ತ್ರೀ.
ಶಂಕರಭಟ್ಟರು ಹೆಣ್ಣಿನ ಕುರಿತು ಅರ್ಥಪೂರ್ಣವಾಗಿ ತಮ್ಮ ಕವನದಲ್ಲಿ ಬಣ್ಣಿಸಿದ್ದಾರೆ.
ಅವಳ ಹೆಸರು ಹೇಳಬೇಡ
ಊರನರಸಿ ದಣಿಯಬೇಡ
ಹೆಣ್ಣೇ ಅವಳ ಹೊತ್ತ ಹೆಸರು
ಹೆಣ್ಣೇ ಅವಳ ಬತ್ತ ಉಸಿರು
ಅದೆಷ್ಟು ಅದ್ಭುತವಾಗಿ ನಾಲ್ಕು ಸಾಲುಗಳಲ್ಲಿ ಹೆಣ್ಣನ್ನು ವರ್ಣಿಸಿದ್ದಾರೆ.ಬದುಕಿನ ಪ್ರತಿ ಹಂತದಲ್ಲಿ ಬರುವ ಎಲ್ಲ ಕಷ್ಟಗಳನ್ನು ಸಹಿಸುತ ಪರಿಹಾರ ಕಂಡುಕೊಳ್ಳುತ ಮುನ್ನಡೆವ ದಿಟ್ಟತೆಯ ಪ್ರತೀಕ.ಪುರುಷನಿಗೆ ಸರ್ವರೂಪಗಳಲಿ ಬಾಂಧವ್ಯ ಬೆಸೆಯುತ ಎಲ್ಲ ರೀತಿಯಲ್ಲಿ ಪ್ರೀತಿಯ ಧಾರೆ ಎರೆಯುವವಳು.ಮನೆತನದ ಕಣ್ಣಾಗಿ ಜವಾಬ್ದಾರಿಗೆ ಹೆಗಲಾಗಿ ಎಲ್ಲವನ್ನು ನಿಷ್ಠೆಯಿಂದ ನಿಭಾಯಿಸುವಳು.ಆದರೆ ತನ್ನ ಕುಟುಂಬಕ್ಕೊಸ್ಕರ ತನ್ನೆಲ್ಲ ಆಸೆಗಳನ್ನು ಕನಸುಗಳನ್ನು ಮರೆತು ಮನೆ ಸದಸ್ಯರ ಕನಸುಗಳು ನನಸಾದಾಗ ತನ್ನ ಕನಸುಗಳೇ ಈಡೇರಿದವು ಏನೋ ಅನ್ನುವಷ್ಟು ಖುಷಿಪಟ್ಟು ಸಂಭ್ರಮ ಪಡುವಳು.
ಅದೆಷ್ಟೋ ನೋವುಗಳು ಮನದಲ್ಲಿದ್ದರೂ ನುಂಗಿ ಏನು ಆಗಿಲ್ಲ ಎಂಬಂತೆ ಸದಾ ನಗುತಲಿರುವಳು.ಮನೆಯ ಪ್ರತಿಯೊಂದು ಕಾರ್ಯವನು ಶ್ರದ್ಧೆಯಿಂದ ನಿರ್ವಹಿಸುತ್ತಾ ಯಾವುದೇ ವಸ್ತುಗಳನ್ನು ಇತಿಮಿತಿಯಲ್ಲಿ ಹೇಗೆ ಉಪಯೋಗಿಸಿ ಉಳಿತಾಯ ಮಾಡಿ ಸಮತೋಲಿತವಾಗಿ ಮನೆ ಹೇಗೆ ನಡೆಸಬೇಕೆಂಬ ಜಾಣತನ, ಚಾಣಾಕ್ಷತನವು ಅಗಾಧವಾಗಿದೆ.
ಸ್ತ್ರೀ ಎಂದರೆ ಪೂಜ್ಯನೀಯ ಭಾವದಿ ದೇವತೆಯಂತೆ ಪೂಜಿಸುತ್ತೇವೆ.ನಮಗೆಲ್ಲ ತಾಯಿಯಾಗಿ ಸಹೋದರಿಯಾಗಿ ಇತರ ಎಲ್ಲ ರೂಪಗಳಲ್ಲಿ ಮಮತೆ ತೋರುತ ಮನೆ ಮನಗಳ ದೀಪ ಬೆಳಗಿಸಿ ಮನೆತನದ ವಂಶ ಬೆಳೆಸಿ ಸದಾ ಪೋಷಿಸುವ ವಾತ್ಸಲ್ಯಮಯಿ ಆದರೆ ಇಂದೂ ಅವಳ ಮೇಲೆ ಊಹಿಸಲಾರದಂತ ಕೃತ್ಯಗಳು ನಡೆಯುತ್ತಿರುವುದು ನೋವಿನ ಸಂಗತಿ.ಹೆಣ್ಣೆಂದರೆ ಸರಕಲ್ಲ ಹೆಣ್ಣು ಪ್ರತಿ ಜೀವಿಯ ಉಸಿರು ಎಂಬುದನ್ನು ಅರಿಯಬೇಕು.ನಮ್ಮನ್ನೆಲ್ಲ ಪೊರೆವ ದೇವತೆಯ ಪ್ರತಿರೂಪ ಎಂಬ ಮನುಷ್ಯತ್ವವು ಪ್ರತಿ ಜೀವಿಗಳಲ್ಲಿ ಬೇರೂರಬೇಕು. ಅವಳಿಗೂ ಪ್ರಾಶಸ್ತ್ಯವಾದ ಸ್ಥಾನಮಾನ ನೀಡುತ ಗೌರವ ನೀಡಬೇಕು.
ಯಾವುದೇ ಕಟ್ಟುಪಾಡು ವಿಧಿಸದೆ ಸಮಾನತೆ ಧ್ಯೇಯದಲಿ ಸ್ವತಂತ್ರವಾಗಿ ಪ್ರತಿ ಕ್ಷೇತ್ರದಲ್ಲಿ ಮುನ್ನಡೆಯಲು ಅಗಾಧ ಪ್ರಾಶಸ್ತ್ಯ ನೀಡಬೇಕು.ಹೆಣ್ಣನು ನೋಡುವ ದೃಷ್ಟಿಕೋನ ಬದಲಾಗಬೇಕು.ಮನಸ್ಥಿತಿಗಳಲ್ಲಿ ಜಿಡ್ಡುಗಟ್ಟಿರುವ ವಿಕೃತ ಭಾವವು ಅಳಿದೋಗಿ ದೇವತೆ ಎಂಬ ಭಾವ ಮೂಡಬೇಕು.ಸ್ಟ್ರಿಯೆಂದರೆ ಮನುಕುಲ ಮುನ್ನಡೆಸುವ ತ್ಯಾಗಮಯಿ ಪ್ರೀತಿ,ವಾತ್ಸಲ್ಯ,ಕರುಣೆ ತೋರುವ ಪ್ರೇಮಮಯಿ,.ಒಬ್ಬ ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಎಂದು ಗಾಂಧೀಜಿ ಹೇಳಿದ ಮಾತು ಅಕ್ಷರಶಃ ಸತ್ಯವಾಗಿದೆ.ಇಡೀ ಕುಟುಂಬದ ಆಧಾರಸ್ತಂಭವೆ ಹೆಣ್ಣು ಪ್ರತಿ ಮನೆ ಮನದ ಕಣ್ಣು.
ಸ್ಟ್ರಿಯೆಂದರೆ ಒಡಲಲಿ ಅಗಮ್ಯ ನೋವುಗಳ ಬಚ್ಚಿಟ್ಟು ನಗುವಾಕೆ,ಸಹಬಾಳ್ವೆ ಪ್ರೀತಿಯಿಂದ ಸಲಹುವಾಕೆ. ಕುಟುಂಬಕೆ ಬೆನ್ನೆಲುಬಾಗಿ ಎಲ್ಲವನ್ನು ನಿಭಾಯಿಸುವ ಸಂಜೀವಿನಿ.ಪ್ರತಿಯೊಬ್ಬರು ಒಳ್ಳೆಯ ಭಾವದಿಂದ ಕಾಣುತ ಸ್ತ್ರೀಯನು ಗೌರವಿಸೋಣ.ಮಾನವೀಯತೆ ದೃಷ್ಟಿಯಿಂದ ನಯ ವಿನಯದಿಂದ ಕಂಡಾಗಲೇ ಹೆಣ್ಣಿಗೂ ಸಾರ್ಥಕತೆ ಅವಳ ಬದುಕಿಗೂ ಅರ್ಥಪೂರ್ಣತೆ.ಹೆಣ್ಣಿನಿಂದಲೇ ನಾವು ಇಲ್ಲದಿರೆ ನಮಗೆಲ್ಲಿ ಜೀವವು ಎನ್ನುವುದನ್ನು ಅರ್ಥಮಾಡಿಕೊಂಡು ಹೆಣ್ಣನ್ನು ದೇವತೆಯಂತೆ ಕಾಣುತ ಆದರದಿಂದ ಸದಾ ರಕ್ಷಿಸಿರಿ ಹೆಣ್ಣಿನ ಜೀವಕೆ ಸಂಜೀವಿನಿಯಾಗಿರಿ.

ಅವಿನಾಶ ಸೆರೆಮನಿ
ಬೈಲಹೊಂಗಲ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು