ಮೈಸೂರು ದಸರಾಗೆ ಟೂರಿಸಂ ಸರ್ಕೀಟ್ ಸ್ಪರ್ಶ: ಬೊಮ್ಮಾಯಿ ಭರವಸೆ

Team Newsnap
1 Min Read

ವಿಶ್ವದಲ್ಲಿ ಬೇರೆ ಬೇರೆ ಹಬ್ಬಗಳ ಆಚರಣೆಗೆ ಟೂರಿಸಂ ಸರ್ಕೀಟ್ ಮಾಡಿರುವಂತೆ ಮೈಸೂರು ದಸರಾ ಆಚರಣೆಗೂ ಅಂತರಾಷ್ಟ್ರೀಯ ಸರ್ಕೀಟ್ ಸ್ಪರ್ಶ ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.


ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಗುರುವಾರ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ 2021 ರ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ದಸರಾ ಮಹೋತ್ಸವ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು. ಇದನ್ನ ಟೂರಿಸಂ ಸರ್ಕೀಟ್ ಮಾಡಬೇಕು ಎನ್ನುವ ಅಭಿಪ್ರಾಯವನ್ನು ಇಲ್ಲಿನ ಜನಪ್ರತಿನಿಧಿಗಳು ಹಾಗೂ ವಿಶೇಷವಾಗಿ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ವ್ಯಕ್ತಪಡಿಸಿದ್ದಾರೆ. ಖಂಡಿತವಾಗಿಯೂ ಇದಾಗಬೇಕು ಎಂದರು.


ವಿಶ್ವದಲ್ಲಿ ಬೇರೆ ಬೇರೆ ಹಬ್ಬಗಳನ್ನ ಆಚರಣೆ ಮಾಡಲು ವಿಶೇಷವಾಗಿ ಟೂರಿಸಂ ಸರ್ಕೀಟ್ ಮಾಡಿರುತ್ತಾರೆ. ಅದಕ್ಕೆ ಬಹಳಷ್ಟು ಪ್ರಚಾರ ಕೊಡುತ್ತಾರೆ. ಜನರ ಆಕರ್ಷಣೆ ಮಾಡುತ್ತಾರೆ. ಪ್ಯಾರೀಸ್, ರೋಮ್, ಮತ್ತಿತರ ಕಡೆ ಹಲವಾರು ಆಚರಣೆಗಳು ಇರುತ್ತವೆ. ಅದೇ ಮಾದರಿಯಲ್ಲಿ ಅಂತರಾಷ್ಟ್ರೀಯ ಸರ್ಕೀಟ್ ಅನ್ನ ದಸರಾಗೆ ನಾವು ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು. ಈ ವಿಷಯದಲ್ಲಿ ಹೆಸರು ಮಾಡಿರುವ ಸಂಸ್ಥೆಗಳು, ವ್ಯಕ್ತಿಗಳ ಜತೆ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸುತ್ತೇವೆ ಎಂದರು.


ಮೈಸೂರು ಭಾಗ ಪ್ರತಿಷ್ಠೆಯ ಭಾಗ. ಮೈಸೂರು ನಮ್ಮ ಪ್ರತಿಷ್ಠೆ. ಈ ಭಾಗದ ಎಲ್ಲ ರೀತಿಯ ಅಬಿüವೃದ್ಧಿಗೆ ಯೋಜನೆ ರೂಪಿಸಲಾಗುತ್ತದೆ. ಮಂಡಕಳ್ಳಿಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗುವುದು. ದಸರಾ ಅಂತರಾಷ್ಟ್ರೀಯ ಟೂರಿಸಂ ಆಗಬೇಕಾದರೆ ವಿಮಾನ ನಿಲ್ದಾಣದ ವಿಸ್ತರಣೆಯ ಅವಶ್ಯಕತೆ ಇದೆ ಎಂದೂ ತಿಳಿಸಿದರು.


ನಮ್ಮ ಮುಂದೆ ದೊಡ್ಡಸವಾಲು ಇವೆ. ಕೋವಿಡ್‌ನ ಮಹಾಮಾರಿ, ಆರ್ಥಿಕ ಹಿಂಜರಿತ ಜತೆಗೆ ಇತರ ರಾಜ್ಯಗಳ ಜತೆ ನಾವು ಅಭಿವೃದ್ಧಿಹೊಂದಬೇಕು ಎನ್ನುವ ಚಿಂತನೆ. ಹಲವಾರು ಬದಲಾವಣೆಗಳ ಜತೆಗೆ ಆರ್ಥಿಕ ಸಬಲತೆ ತಂದು ಈ ನಾಡಿನ ಸಮಗ್ರ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿ ಎಂದೂ ಮುಖ್ಯಮಂತ್ರಿಗಳು ನುಡಿದರು.

Share This Article
Leave a comment