ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ನಿರಾಶೆಯ ವಾತಾವರಣದಿಂದ ಹೊರಗೆ ತಂದು ಪ್ರಗತಿಯ ದಾರಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ಈ ಮೂಲಕ “ವಿಶ್ವನಾಯಕ” ಆಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಣ್ಣಿಸಿದ್ದಾರೆ.
ಸರ್ಕಾರದ ಮುಖ್ಯಸ್ಥರಾಗಿ ಮೋದಿ (ಗುಜರಾತಿನಲ್ಲಿ 13 ವರ್ಷಗಳು ಮುಖ್ಯಮಂತ್ರಿಯಾಗಿದ್ದು ಸೇರಿ) ಸಾರ್ವಜನಿಕ ಸೇವೆಗೆ ಪ್ರವೇಶಿಸಿ ಅಕ್ಟೋಬರ್ 7 ಕ್ಕೆ 20 ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ಅವರ ನಾಯಕತ್ವದ ಗುಣಗಳನ್ನು ಶ್ಲಾಘಿಸಿದ್ದಾರೆ. ಮೋದಿ ಅವರು ಕರ್ಮಯೋಗಿಯಂತೆ ಕೆಲಸ ಮಾಡುತ್ತಿದ್ದಾರೆ. ನವ ಭಾರತ ನಿರ್ಮಾಣದ ಬಗ್ಗೆ ಜನತೆಯಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
30 ವರ್ಷಗಳಿಂದ ಮೋದಿಯವರ ಆಪ್ತರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದ ಪ್ರಗತಿಗಾಗಿ ಪ್ರಧಾನಿಯವರು ಹಗಲು ರಾತ್ರಿ ದುಡಿಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
2001 ರಂದು ಇದೇ ದಿನ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದಿನಿಂದಲೂ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಪಯಣವು ಅಡೆತಡೆಯಿಲ್ಲದೆ ಸಾಗಿದೆ ಎಂದು ಸಂತಸದಿಂದ ಹೇಳಿದ್ದಾರೆ.
ಮೋದಿಯವರು ಈ 20 ವರ್ಷಗಳನ್ನು ಕಳಂಕರಹಿತವಾಗಿ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಶ್ಲಾಘಿಸಿದ್ದಾರೆ.