ಗೌರಿ ಹಬ್ಬ ತಂದ ಆನಂದ

Team Newsnap
4 Min Read
gowri festival
sarojadevi ninnekar 1
ಸರೋಜಾದೇವಿ ನಿನ್ನೆಕರ್

ಹೆಣ್ಣು ಹುಟ್ಟಿದ ಮನೆ ತಣ್ಣಗೆ ಇರುವುದೆಂದು ಅನಾದಿ ಕಾಲದಿಂದಲೂ ಹೇಳುತ್ತ ಬಂದಿದ್ದಾರೆ.ಇದು ನಿಜವೂ ಕೂಡ ಹೌದು.ಮನೆ ಬೆಳಗುವ ಆರತಿ ಇವಳು.ಬಾಲ್ಯದಲ್ಲಿ ತಂದೆ ತಾಯಿಗಳ ಕಣ್ಮಣಿಯಾಗಿ,ಅವರ ಪ್ರೀತಿಯ ಸೆಲೆಯಲ್ಲಿ ಬೆಳೆದು,ಸಹೋದರರ ಒಡನಾಟದಲ್ಲಿ ಸ್ವಚ್ಛಂದ ವಾಗಿ ಕಾಲ ಕಳೆಯುತ್ತ,ಇದು ನನ್ನ ಮನೆ ನನ್ನ ಕುಟುಂಬ ಎಂಬ ಅತಿಯಾದ ಕಾಳಜಿಯಿಂದ ಖುಷಿ ಖುಷಿಯಾಗಿ ಮನೆ ಮಗಳಾಗಿ ಓಡಾಡಿಕೊಂಡು ಅಪ್ಪ ಅಮ್ಮನ ಎತ್ತರಕ್ಕೆ ಬೆಳೆದದ್ದು ಗೊತ್ತಾಗದೆ ಮದುವೆ ವಯಸ್ಸಿಗೆ ಬಂದೆ ಬಿಡುತ್ತಾಳೆ ಮುದ್ದಿನ ಮಗಳು.

ನಮ್ಮ ಭಾರತೀಯ ಸಂಪ್ರದಾಯದಂತೆ ಒಳ್ಳೆಯ ವರ ಹುಡುಕಿ ಶುಭ ಮೂಹೂರ್ತದಲ್ಲಿ ಮದುವೆ ಮಾಡಿಕೊಟ್ಟು ಅವಳನ್ನು ಗಂಡನ ಮನೆಗೆ ಕಳಿಸುವಾಗ ತಂದೆ ತಾಯಿ ಸಹೋದರರ ಕರಳು ಕಿತ್ತು ಬರುತ್ತೆ.ಮದುವೆ ಹೆಣ್ಣು ತನ್ನ ಮನೆ,ತಂದೆ ತಾಯಿ,ಸಹೋದರರನ್ನು,ಕುಟುಂಬದವರನ್ನು ಇನ್ನು ಬಿಟ್ಟು ಹೋಗಬೇಕಲ್ಲ ಎಂದು ಅಸಹನೆಯ ದುಃಖ ಮನದಲ್ಲಿ. ಕಣ್ಣಿರ ಕಟ್ಟೆ ಒಡೆದು ತನ್ನ ತವರು ಮನೆಯ ಅಗಲಿಕೆಯ ಭಾರವನ್ನು ತನ್ನ ಹೃದಯದಲಿ ತುಂಬಿಕೊಂಡು,ತಾನು ಆಡಿ ಬೆಳೆದ ಮನೆ ಸದಾ ಹಸಿರಾಗಿರಲಿ ಎಂದು ಹಾರೈಸುತ್ತಾ ಗಂಡನ ಮನೆಕಡೆಗೆ ಹೆಜ್ಜೆ ಹಾಕುತ್ತಾಳೆ.

ಗಂಡನ ಮನೆ ಎಷ್ಟೆ ಶ್ರೀಮಂತವಾಗಿದ್ದರು ತನ್ನ ತವರಿಗಿಂತ ಬೇರೆ ಅರಮನೆಯಿಲ್ಲ ಎನ್ನುವುದೆ ಪ್ರತಿ ಹೆಣ್ಣಿನ ಮನದ ಮಾತು.ಆ ತವರಲ್ಲಿ ಸಿಗುವಂತಹ ನೆಮ್ಮದಿ,ಶಾಂತಿ ಸಂತೋಷ,ಸಂತೃಪ್ತಿ,ಆನಂದ ಬೇರೆಲ್ಲೂ ಸಿಗಲ್ಲ ಎಂದು ತವರು ಮನೆಗೆ ಬರಲು ಕಾರಣ ಹುಡುಕಿ ಹಾತೊರೆಯುತ್ತಾಳೆ.ಹೆಣ್ಣಿನ ಅಂತರಾಳದ ವೇದನೆ ಅರಿತೊ ಏನೊ ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ಕೆಲವೊಂದು ಹಬ್ಬ ಹರಿದಿನಗಳು ಆಚರಣೆಯಲ್ಲಿವೆ.ನಾಗರ ಪಂಚಮಿ ಹಬ್ಬವಿರಬಹುದು,ರಾಖಿ ಹಬ್ಬವಿರಬಹುದು,ದೀಪಾವಳಿ ಇರಬಹುದು,ಗೌರಿ ಹಬ್ಬವಿರಬಹುದು ಹೀಗೆ ಹಲವಾರು ಹಬ್ಬಗಳು ಹೆಣ್ಣು ಮಕ್ಕಳನ್ನು ತವರಿಗೆ ಕರೆಸಿಕೊಂಡು ಆತ್ಮಸುಖ ಕೊಡುವುದರಲ್ಲಿ ಎರಡು ಮಾತಿಲ್ಲ…

ಈಗ ಅಂತಹುದೇ ಒಂದು ಹಬ್ಬ ಹೆಣ್ಣಿನ ಮೊಗದಲಿ ನಗು ಅರಳಿಸಿ ತವರಿಗೆ ಹೋಗುವ ಸೌಭಾಗ್ಯ ಕಲ್ಪಿಸಿ ಕೊಟ್ಟು ಸಂಭ್ರಮಿಸಲು ಅನುವು ಮಾಡಿಕೊಟ್ಟಿದೆ.ಅದೆ ಎಲ್ಲ ಹೆಣ್ಣು ಮಕ್ಕಳು ತವರಿಗೆ ಹೋಗಲು ಸಂತಸದಿಂದ ಸಿದ್ಧರಾಗಿ ನಿಂತಿರುವ ಗೌರಿ ಹಬ್ಬ…ಅಬ್ಬಾ ಅಂತೂ ಇಂತೂ ಬಂತೂ ವಿಶಿಷ್ಟ ಕಳೆ ಹೆಣ್ಣಿನ ಮೊಗದಲಿ.ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮಂದಿರ ಜೊತೆಯಲ್ಲಿ ಆಚರಿಸಿ ಸಂಭ್ರಮಿಸಲು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಮನ ಕುಣಿದು ಸಂತಸಗೊಳುತ್ತದೆ.

ಹಿಂದೂ ಸಂಪ್ರದಾಯದಲ್ಲಿ ಅತಿ ಮುಖ್ಯವಾದ ಹಬ್ಬವಿದು.ಭಾದ್ರಪದ ಮಾಸದ ಮೊದಲ ಹಬ್ಬ.ಹುಟ್ಟಿದ ಮನೆ ಮತ್ತು ಕೊಟ್ಟ ಮನೆಯನ್ನು ಭಾವನಾತ್ಮಕ ನೆಲೆಯಲ್ಲಿ ಬಂಧಿಸಿ,ಬಂಧು ಬಾಂಧವರನ್ನು ಭಾವೈಕ್ಯತೆಯಲ್ಲಿ ಬೇಸೆಯುತ್ತದೆ.
ಸಂತೋಷ ಹಾಗೂ ಸಮೃದ್ಧಿಯ ಸಂಕೇತವಾದ ಈ ದಿನ ದೇವಿ ಗೌರಿ ಶಿವನ ಪತ್ನಿ ಗಣೇಶ ಮತ್ತು ಸುಬ್ರಹ್ಮಣ್ಯ ನ ತಾಯಿ ಪಾರ್ವತಿದೇವಿಯು ತನ್ನ ಹೆತ್ತವರ ಮನೆಗೆ ಕೈಲಾಸದಿಂದ ಇಳಿಯುತ್ತಾಳೆ ಎಂಬ ನಂಬಿಕೆ.ಆಗ ಗೌರಿ ದೇವಿಯ ಮೂರ್ತಿಯನ್ನು ಗಣೇಶ ಚತುರ್ಥಿಯ ಹಿಂದಿನ ದಿನ ತಂದು ವಿಧಿ ವಿಧಾನಗಳ ಪ್ರಕಾರ ಆಹ್ವಾನಿಸಿ ಮನೆಯ ಹೆಣ್ಣು ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಗೌರಿಯನ್ನು ಸರ್ವ ಅಲಂಕೃತ ಭೂಷಿತಳಾಗಿ ಪೂಜಿಸಿ,ಮೊರದ ಬಾಗಿನ ಕೊಟ್ಟು ಶ್ರದ್ಧೆ ಭಕ್ತಿಯಿಂದ ನಮಿಸಿ ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯಕ್ಕಾಗಿ ಹಾಗೂ ಅವಿವಾಹಿತ ಮಹಿಳೆಯರು ಉತ್ತಮ ಪತಿಯನ್ನು ಪಡೆಯುದಕ್ಕಾಗಿ ಪ್ರಾರ್ಥಿಸಿ,ಸ್ವರ್ಣ ಗೌರಿ ವ್ರತವನ್ನು ಆಚರಿಸಿ ಪಾರ್ವತಿಯ ಅನುಗ್ರಹ ಪಡೆಯುತ್ತಾರೆ.


ಮರುದಿನ ಗಣೇಶ ತನ್ನ ತಾಯಿ ಗೌರಿಯನ್ನು ಶಿವನ ನಿವಾಸ ಕೈಲಾಸಕ್ಕೆ ಕರೆದುಕೊಂಡು ಹೋಗಲು ಬಂದು ಕಡುಬು ಮೋದಕ ತಿಂದು ಸರ್ವರನ್ನು ಆಶೀರ್ವದಿಸಿ ತನ್ನ ತಾಯಿಯೊಡನೆ ತೆರಳುತ್ತಾನೆ ಎಂಬ ಪ್ರತೀತಿಯಿದೆ.
ಒಟ್ಟಿಗೆ ಈ ಹಬ್ಬವನ್ನು ಗೌರಿ ಗಣೇಶ ಹಬ್ಬವೆಂದು ನಾಡಿನಾದ್ಯಂತ ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ. ಮುತ್ತೈದೆಯರಿಗೆ ಸೌಭಾಗ್ಯ ನೀಡುವ ಗೌರಿ ಹಬ್ಬ ಬಡವ ಶ್ರೀಮಂತರ ಭೇದವಿಲ್ಲದೆ ಎಲ್ಲರೂ ತಮ್ಮ ಹೆಣ್ಣು ಮಕ್ಕಳನ್ನು ತವರಿಗೆ ಕರೆದು ಒಗ್ಗೂಡಿ ಆಚರಣೆ ಮಾಡಿ ಬಾಗಿನ ಕೊಡುವ ಸಂಪ್ರದಾಯ ರೂಢಿಯಲ್ಲಿದೆ.ಹೆಣ್ಣು ತವರಿನ ಈ ಅಮೂಲ್ಯ ಉಡುಗೊರೆಯನ್ನು ಪಡೆದು ಖುಷಿಯಿಂದ ಹಬ್ಬದ ಸವಿ ಉಂಡು ಹರಸಿ ಹಾರೈಸಿ ಸಂತೃಪ್ತಿಗೊಂಡು ಗೌರಿ ಹಬ್ಬದ ನಿಮಿತ್ಯ ತವರಿಗೆ ಬರಲು ಅನುವು ಮಾಡಿ ಕೊಟ್ಟ ಪಾರ್ವತಿದೇವಿಗೆ ಧನ್ಯತಾ ಭಾವದಿಂದ ಪನ್ನಿರ ಹನಿಯ ಅಭಿಷೇಕ ಮಾಡಿ ಕೊಟ್ಟ ಮನೆಯ ಕಡೆ ಪಯಣ ಬೆಳೆಸುತ್ತಾಳೆ ಹೆಣ್ಣು..


ಪ್ರತಿವರ್ಷ ಗೌರಿ ಹಬ್ಬ ಹೆಣ್ಣಿನ ಬಾಳಲ್ಲಿ ಬೆಳಕು ತುಂಬಿ ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಶ್ರೇಯಸ್ಸನ್ನು ಕರುಣಿಸುವ ವರ ಪ್ರಸಾದವಾಗಿದೆ.ಹೆಣ್ಣಿನ ಬಾಳಲ್ಲಿ ಹರುಷದ ಹೊನಲು ಹರಿಸುವುದು. ಈ ಹಬ್ಬ ಪ್ರತಿ ಹೆಣ್ಣು ಮಕ್ಕಳಿಗೆ ತುಂಬಾ ಅಚ್ಚು ಮೆಚ್ಚು ಹಾಗೂ ಪ್ರೀಯವಾಗಿದೆ ಏಕೆಂದರೆ ತವರಿಗೆ ಹೋಗುವ ದಾರಿ ಸುಗಮಗೊಳಿಸುತ್ತದೆ.ಈ ನೆಪದಲ್ಲಾದರು ತನ್ನ ತವರು ಮನೆಯವರನ್ನು ನೋಡಿ ಅವರೊಂದಿಗೆ ಕೂಡಿ ಇರುವ ಭಾಗ್ಯ ಒದಗಿಸುತ್ತದೆ ಎಂಬ ಕಾರಣಕ್ಕೆ.ಹೆಣ್ಣಿಗೆ ಗಂಡನ ಮನೆಯಲ್ಲಿ ಅಮೃತವಿದ್ದರು ತವರು ಮನೆಯ ಗಂಜಿಯೇ ಹೆಚ್ಚು ರುಚಿಸುತ್ತದೆ.ತವರು ಎಂದರೆ ಮನ ತಣಿಯುವ ತಾಣ..ಮನ ತಣಿಯಲು ಗೌರಿ ಹಬ್ಬವೇ ಕಾರಣ.ರಾಜ್ಯದಲ್ಲಿ ಮತ್ತೆ 23 ಡಿವೈಎಸ್ ಪಿ, 192 `PSI’ ಗಳ ವರ್ಗಾವಣೆ

ತವರಿಗಾಗಿ ಮನ ಹಂಬಲಿಸಿತು
ಸ್ವರ್ಣ ಗೌರಿಯ ಹಬ್ಬ ಬಂತು
ಹೆಣ್ಣಿನ ಬಾಳಲಿ ಆನಂದ ತಂತು
ಮೊಗದಲಿ ನಗೆ ಹೂ ಅರಳಿಸಿತು

ತವರಿನ ಕರೆ ಬಂದೇ ಬಿಟ್ಟಿತು
ನಡೆದಳು ನವ ಭಾವ ಹೊತ್ತು
ಹರುಷದ ಹೊನಲು ಹರಿಯಿತು
ದೇವಿಯ ಅನುಗ್ರಹವಾಯಿತು..

Share This Article
Leave a comment