ಮಳಲಿ ಮಸೀದಿಯಲ್ಲಿ ದೇವಸ್ಥಾನದ ಕುರುಹು ಪತ್ತೆ- ತಾಂಬೂಲ ಪ್ರಶ್ನೆ ಆರಂಭ

Team Newsnap
2 Min Read

ಮಂಗಳೂರಿನ ಮಳಲಿ ಮಸೀದಿ ಗೊಂದಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ . ವಿಶ್ವ ಹಿಂದೂ ಪರಿಷತ್ ನಿಂದ `ತಾಂಬೂಲ’ ಪ್ರಶ್ನೆ ಇಂದು 8 ಗಂಟೆ ಆರಂಭವಾಗಿದೆ. ಮಂಗಳೂರಿನ ಮಳಲಿ ಬಳಿ ಮಸೀದಿ ನವೀಕರಣ ವೇಳೆ ದೇವಸ್ಥಾನದ ಗುಡಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಇಂದು ತಾಂಬೂಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ನಂಬಿಕೆ ಇದೆ.

ವಿಶ್ವ ಹಿಂದೂ ಪರಿಷತ್ ಅಷ್ಟಮಂಗಳ ಪ್ರಶ್ನೆಯ ಬದಲಿಗೆ ಇಂದು ತಾಂಬೂಲ ಪ್ರಶ್ನೆ ಇಡಲು ನಿರ್ಧರಿಸಿದೆ, ಮಂಗಳೂರಿನ ಮಸೀದಿ ರಹಸ್ಯ ಪತ್ತೆಗೆ ಮುಂದಾಗಿದೆ. ಮಳಸಿ ಮಸೀದಿಯ ಅನತಿ ದೂರದಲ್ಲಿರುವ ರಾಮಾಂಜನೇಯ ಭಜನಾ ಮಂದಿರದಲ್ಲಿ ಇಂದು ತಾಂಬೂಲ ಪ್ರಶ್ನೆ ನಡೆಯಲಿದೆ.

ಇಂದು ಬೆಳಗ್ಗೆ 8 ಗಂಟೆಯಿಂದಲೇ ಕೇರಳದ ಜ್ಯೋತಿಷಿ ಪುದುವಾಳ್ ತಾಂಬೂಲ ಪ್ರಶ್ನೆ ಇಡಲಿದ್ದಾರೆ. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ, ದೈವಿ ಶಕ್ತಿ ಪತ್ತೆ ಕಾರ್ಯ ನಡೆಯುತ್ತದೆ. ತಾಂಬೂಲ ಪ್ರಶ್ನೆ ಕಾರ್ಯದಲ್ಲಿ ವಿಶ್ವಹಿಂದೂ ಪರಿಷತ್ ಸಂಘಟನೆ ಸದಸ್ಯರು, ಸ್ಥಳೀಯರು, ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭಾಗಿಯಾಗಲಿದ್ದಾರೆ.

ತಾಂಬೂಲ ಪ್ರಶ್ನೆ ಇರುವುದರಿಂದ ಮಳಲಿ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಇದನ್ನು ಓದಿ : ಪರಿಷತ್ ಚುನಾವಣೆ – ಬಿಜೆಪಿ ಟಿಕೆಟ್ ಪ್ರಕಟ – ವಿಜಯೇಂದ್ರನಿಗೆ ಹೈಕಮ್ಯಾಂಡ್ ಶಾಕ್ : ಅಚ್ಚರಿಯ ಅಭ್ಯರ್ಥಿಗಳು

ತಾಂಬೂಲ ಪ್ರಶ್ನೆಯ ಮಹತ್ವ :

ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ತಾಂಬೂಲ ಪ್ರಶ್ನೆಯ ವಿಧಾನಗಳು ನೇಪಥ್ಯಕ್ಕೆ ಹೋಗಿರುವುದಾದರೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಪ್ರಚಲಿತವಾಗಿರುವುದು ಕಂಡು ಬರುತ್ತದೆ.ಪ್ರಶ್ನೆಶಾಸ್ತ್ರದಲ್ಲಿ ಕವಡೆಗಳು, ತಾಂಬೂಲ ಇತ್ಯಾದಿಗಳನ್ನು ಉಪಯೋಗಿಸುವ ವಿಧಾನಗಳೂ ಪ್ರಚಲಿತದಲ್ಲಿರುತ್ತವೆ. ಅವುಗಳ ಸಂಖ್ಯೆ, ಸ್ವರೂಪ ಇತ್ಯಾದಿಗಳ ಆಧಾರದಿಂದ ಪ್ರಶ್ನೆಫಲ ಹೇಳಲಾಗುತ್ತದೆ.

  • ಪ್ರಶ್ನೆಕರ್ತನು ಕೊಡುವ ತಾಂಬೂಲದ (ವೀಳ್ಯದೆಲೆ) ಸಹಾಯದಿಂದ ತನ್ವಾದಿ ದ್ವಾದಶ ಭಾವಗಳ ಸಮಸ್ತ ಶುಭಾ ಶುಭಫಲಗಳನ್ನು ಹೇಳಲಾಗುತ್ತದೆ.
  • ಪೂರ್ವಾಹ್ನ ಮತ್ತು ಅಪರಾಹ್ನದ ಸಮಯದಲ್ಲಿ ಪ್ರಶ್ನೆಕರ್ತನಿಂದ ಕೊಡಲ್ಪಡುವ ವೀಳ್ಯದೆಲೆಗಳನ್ನು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಎಣಿಸುವುದರ ಮೂಲಕ ಲಗ್ನಾದಿ ಹನ್ನೆರಡು ಭಾವಗಳ ಕಲ್ಪನೆ ಮಾಡಲಾಗುತ್ತದೆ.
  • ಎಣಿಕೆ ಮಾಡುವಾಗ ಮೊದಲನೆಯ ಎಲೆ ಲಗ್ನ, ಎರಡನೆಯದು ಧನಭಾವ, ಮೂರನೆಯದು ಸಹಜ ಭಾವ ಹೀಗೆ ಹನ್ನೆರಡನೆಯ ಎಲೆಯ ವ್ಯಯ ಭಾವವಾಗುತ್ತದೆ.
  • ಯಾವ ಭಾವದ ಸೂಚಕವಾದ ಎಲೆಯು ಬಾಡಿರುವುದೋ, ಹರಿದಿರುವುದೋ, ಛಿದ್ರವಾಗಿರುವುದೋ ಆ ಭಾವದ ಫಲಗಳು ಅನಿಷ್ಟವಾಗಿರುತ್ತವೆ.
  • ಯಾವ ಭಾವ ಸಂಬಂಧಿ ಎಲೆಯು ವಿಶಾಲವಾಗಿದ್ದು, ನಿರ್ಮಲವಾಗಿದ್ದು ನಳನಳಿಸುವ ಕಾಂತಿಯುತವಾಗಿರುವುದೋ ಆ ಭಾವದ ಫಲವು ಶುಭ ಮತ್ತು ವೃದ್ಧಿಯಾಗುತ್ತದೆ ಎಂದು ತಿಳಿಯಬೇಕು.
  • ಪ್ರಶ್ನೆಕರ್ತನಿಂದ ಕೊಡಲ್ಪಟ್ಟ ವೀಳ್ಯದೆಲೆಗಳ ಸಂಖ್ಯೆಯನ್ನು ಎರಡುಪಟ್ಟು ಮಾಡಿ ಐದರಿಂದ ಭಾಗಾಕಾರ ಮಾಡಿ, ಗುಣನ ಫಲದಲ್ಲಿ 1 ಕೂಡಿಸಿ ಪುನಃ 7 ರಿಂದ ಭಾಗಾಕಾರ ಮಾಡಬೇಕು.
  • ಇಲ್ಲಿ ಶೇಷವು 1 ಉಳಿದರೆ ಸೂರ್ಯ, ಎರಡು ಉಳಿದರೆ ಚಂದ್ರ, ಮೂರು ಉಳಿದರೆ ಶನಿ ಗ್ರಹವು ಉದಯವಾಗಿದೆ ಎಂದು ತಿಳಿಯಬೇಕು.
  • ಈ ಪ್ರಕಾರ ಯಾವ ಗ್ರಹವು ಉದಯವಾಗಿರುವುದೋ ಅದು ಯಾವ ರಾಶಿಯಲ್ಲಿರುವುದೋ ಆ ರಾಶಿಯನ್ನು ಪ್ರಶ್ನೆ ಲಗ್ನವೆಂದು ತಿಳಿಯಬೇಕು.
  • ಸೂರ್ಯನು ಉದಯವಾದರೆ ದುಃಖದಾಯಕ, ಚಂದ್ರ ಉದಯವಾದರೆ ಸುಖದಾಯಕ, ಮಂಗಲ ಉದಯವಾದರೆ ಕಲಹಕಾರಕ. ಬುಧ-ಗುರು ಉದಯವಾದರೆ ಧನದಾಯಕ, ಶುಕ್ರ ಉದಯವಾದರೆ ಇಷ್ಟಾರ್ಥಸಿದ್ಧಿದಾಯಕ ಮತ್ತು ಶನಿ ಉದಯವಾದರೆ ಪ್ರಶ್ನೆಕರ್ತೃವಾಗಿ ಮೃತ್ಯುದಾಯಕವಾಗಿರುತ್ತದೆ.

Share This Article
Leave a comment