ಸಂತೋಷ್ ಆತ್ಮಹತ್ಯೆ ಯತ್ನ – ಉನ್ನತ ಮಟ್ಟದ ತನಿಖೆ ಬೇಕು : ಡಿಕೆಶಿ

Team Newsnap
2 Min Read

‘ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಸಾಕಷ್ಟು ಗೌಪ್ಯತೆ ಅಡಗಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದರು.

ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಂತೋಷ ಅವರನ್ನು ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂಬ ಸುದ್ದಿ ಎರಡು ತಿಂಗಳಿಂದ ಹರಿದಾಡಿತ್ತು. ಇದರಲ್ಲಿ ಸಾಕಷ್ಟು ಗೌಪ್ಯ ಅಡಗಿವೆ. ಈ ಪ್ರಕರಣವನ್ನು ಸರ್ಕಾರ ತನಿಖೆ ನಡೆಸುವುದರಲ್ಲಿ ಅರ್ಥವಿಲ್ಲ. ಉನ್ನತ ಮಟ್ಟದ ತನಿಖೆ ಅಗತ್ಯವಿದೆ’ ಎಂದರು.

ಸಚಿವ, ವಿಧಾನ ಪರಿಷತ್ ಸದಸ್ಯರಿಂದ ಬೆದರಿಕೆ:

‘ಸಂತೋಷ್ ಆತ್ಮಹತ್ಯೆ ಯತ್ನ ವಿಚಾರ ನನಗೆ ಗೊತ್ತಿದೆ. ಅವರ ಯಾವುದೋ ಒಂದು ವಿಡಿಯೋವನ್ನು ಬಳಸಿ ಒಬ್ಬ ಸಚಿವ ಹಾಗೂ ಎಂಎಲ್ ಸಿ ಬೆದರಿಕೆ ಹಾಕುತ್ತಿದ್ದರು. ಆ ವಿಡಿಯೋವನ್ನು ದೆಹಲಿ ನಾಯಕರಿಗೂ ಕೊಟ್ಟಿದ್ದಾರೆ ಎಂಬ ಮಾಹಿತಿ ಎರಡು ಮೂರು ತಿಂಗಳ ಹಿಂದೆಯೇ ತಿಳಿದಿತ್ತು. ಈ ಬಗ್ಗೆ ಅವರಿಗೆ ಬೇಸರವಾಗಿದೆ ಅಂತಾ ತಿಳಿದುಬಂದಿದೆ. ಈ ವಿಡಿಯೋ ಯಾರು ಕೊಟ್ಟಿದ್ದಾರೆ. ಅದರಲ್ಲಿ ಏನಿದೆ ಎಂಬುದು ಉನ್ನತ ಮಟ್ಟದ ತನಿಖೆಯ ಮೂಲಕ ಬಹಿರಂಗವಾಗಲಿ ಎಂದು ಒತ್ತಾಯಿಸಿದರು.

santhosh

ಕಟೀಲ್ ಅವರನ್ನು ಆಸ್ಪತ್ರೆಗೆ ಸೇರಿಸಿ:

ಸಿದ್ದರಾಮಯ್ಯ ಮಾದಕ ದ್ರವ್ಯ ಹಣದಿಂದ ಸರ್ಕಾರ ನಡೆಸುತ್ತಿದ್ದರು. ಇದುವರೆಗೂ ಯಾಕೆ ಎಫ್ ಐಆರ್ ದಾಖಲಿಸಿಲ್ಲ? ಎಂದು ಪ್ರಶ್ನೆ ಮಾಡಿರುಬವ ನಳೀನ್ ಕುಮಾರ್ ಗೆ ಹೆಚ್ಚುಕಮ್ಮಿ ಆಗಿರಬೇಕು. ಅವರನ್ನು ಆಸ್ಪತ್ರೆಗೆ ಸೇರಿಸುವ ಅನಿವಾರ್ಯತೆ ಇದೆ ಎಂದರು.

ಡ್ರಗ್ಸ್ ಪ್ರಕರಣದಲ್ಲಿ ನಟಿಯರನ್ನು ಜೈಲಿಗೆ ಹಾಕಿದ್ದಾರೆ. ನಾನು ಸಿದ್ದರಾಮಯ್ಯ ಸರ್ಕಾರದ ಭಾಗವಾಗಿದ್ದೆ, ನಮ್ಮ ಮೇಲೆ ಯಾಕೆ ಎಫ್ಐಆರ್ ಹಾಕಿಲ್ಲ? ಜವಾಬ್ದಾರಿಯುತ ಸ್ಥಾನದಲ್ಲಿ ಕೂತಿರುವ ಕಟೀಲ್ ಆ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಳ್ಳಲಿ. ಅವರಿಗೆ ಅಲ್ಪಸ್ವಲ್ಪ ರಾಜಕೀಯ ಜ್ಞಾನ ಇದೆ ಎಂದುಕೊಂಡಿದ್ದೆ. ಒಂದು ಸರ್ಕಾರವನ್ನು ಡ್ರಗ್ಸ್ ಹಣದಿಂದ ನಡೆಸಲಾಗುತ್ತದೆ ಎಂಬ ಹೇಳಿಕೆ ಅವರ ಸ್ಥಾನಕ್ಕೆ ಕಳಂಕ ತರುವಂತಿದೆ.

ಬಿಜೆಪಿ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ:

ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಉಪ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ನಾನು ರಾಜ್ಯ ಪ್ರವಾಸ ಆರಂಭಿಸಿದ್ದೇನೆ. ಮೊದಲು ನಮ್ಮ ಮನೆ ಸರಿ ಮಾಡಿಕೊಳ್ಳುತ್ತಿದ್ದು, ಮಿಕ್ಕಿದ್ದು ಆಮೇಲೆ ನೋಡೋಣ ಎಂದರು.

ನಾವು ವಿರೋಧ ಪಕ್ಷದವರು. ನಮಗೂ ಬಿಜೆಪಿ ಆಂತರಿಕ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಸರ್ಕಾರದಲ್ಲಿ ಯಾರನ್ನಾದರೂ ಸೇರಿಸಿಕೊಳ್ಳಲಿ ಅಥವಾ ತೆಗೆದುಹಾಕಲಿ ಅದಕ್ಕೂ ನಮಗೂ ಸಂಬಂಧ ಇಲ್ಲ.
ಆದರೆ ಒಂದಂತೂ ನಿಜ. ನಮ್ಮ ಪಕ್ಷದಿಂದ ಕೆಲವರು ಅಲ್ಲಿಗೆ ಹೋಗಿದ್ದಾರೆ. ನಾವು ಅನುಭವಿಸಿದ್ದನ್ನು ಅವರೂ ಅನುಭವಿಸುತ್ತಾರೆ. ಕಾದು ನೋಡಿ ಎಂದರು.

Share This Article
Leave a comment