ಹಸೆಮಣೆ ಏರಿ ಸುಖವಾಗಿ ಸಂಸಾರ ಮಾಡಬೇಕಿದ್ದ ಜೋಡಿ ತಲಕಾಡಿನ ಕಾವೇರಿ ನದಿಯಲ್ಲಿ ಪ್ರೀವೆಡ್ಡಿಂಗ್ ಶೂಟ್ ಮಾಡಿಸುವಾಗ ಟೈಟಾನಿಕ್ ಹಗ್ಗ್ ಮಾಡಲು ಹೋಗಿ ಹುಡುಗಿಯ ಕಾಲು ಒಂದೇ ಕಡೆ ಭಾರ ಬಿದ್ದ ಪರಿಣಾಮ ತೆಪ್ಪ ಮುಳುಗಿ ಕಾವೇರಿ ನದಿಯಲ್ಲಿ ಜಲ ಸಮಾಧಿಯಾದ ದುರ್ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಕ್ಯಾತಮಾರನಹಳ್ಳಿ ಚಂದ್ರ ಹಾಗೂ ಶಶಿಕಲಾ ಮೃತ ದುರ್ದೈವಿಗಳು.
ಈ ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಗೂ ಮುನ್ನ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವ ಇಚ್ಛೆಯಿಂದ ತಲಕಾಡಿನ ಬಳಿಯ ಕಾವೇರಿ ನದಿಗೆ ತೆರಳಿದ್ದರು.
ಫೋಟೋ ಶೂಟ್ ಮಾಡುವ ವೇಳೆ ಟೈಟಾನಿಕ್ ಹಗ್ಗ್ ನಲ್ಲಿ ಒಂದು ಫೋಟೊ ಬೇಕು ಅಂತ ಹೇಳಿದ್ದಾರೆ.
ಆ ವೇಳೆ ವಧು ಶಶಿಕಲಾ ಒಂದು ಕಾಲು ಎತ್ತಿದ್ದಾರೆ. ಆ ಭಾರಕ್ಕೆ ತೆಪ್ಪ ಬಾಗಿದೆ. ಕೊನೆಗೆ ನೀರಿನ ರಭಸಕ್ಕೆ ತೆಪ್ಪ ಮುಳುಗತೊಡಗಿದಾಗ ತೆಪ್ಪ ಸಾಗಿಸುತ್ತಿದ್ದವ ಈಜಿ ಸಾವಿನಿಂದ ಪಾರಾಗಿದ್ದಾನೆ. ಆದರೆ ದುರ್ದೈವದಿಂದ ಮದುವೆಯಾಗಬೇಕಿದ್ದ ಜೋಡಿ ಜೊತೆಯಲ್ಲೇ ಜಲ ಸಮಾಧಿಯಾದರು.
ಕೂಡಲೇ ಸ್ಥಳಕ್ಕೆ ಧಾವಿಸಿದ ತಲಕಾಡಿನ ಪೋಲೀಸರು ತಜ್ಞರ ಸಹಾಯದಿಂದ ಮೃತ ಜೋಡಿಯ ಶವಗಳನ್ನು ಹೊರತೆಗೆದಿದ್ದಾರೆ . ಎರಡೂ ಕುಟುಂಬದವರ ರೋಧನ ತೀವ್ರ ವಾಗಿತ್ತು.