ಜೀವ ರಕ್ಷಕ CPR -ಪಠ್ಯಕ್ಕೆ ಸೇರಿಸಲು ಚಿಂತನೆ

Team Newsnap
2 Min Read

CPR ಒಂದು ಜೀವ ಉಳಿಸುವ ಪ್ರಕ್ರಿಯಾಗಿದ್ದು, ಸರಿಯಾದ ಸಮಯಕ್ಕೆ ಸಿಪಿಆರ್ ಮಾಡಿದರೆ ಹೃದಯ ಸ್ತಂಭನದಲ್ಲಿರುವ ವ್ಯಕ್ತಿಯ ಜೀವವನ್ನು ಉಳಿಸಬಹುದು.

ಈ ಬಗ್ಗೆ ಮಕ್ಕಳಿಗೆ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಹಂತ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವುದರಿಂದ ಹೃದಯಾಘಾತ ಘಟನೆ ಸಂಭವಿಸಿದ ಸಂದರ್ಭದಲ್ಲಿ ನೆರವಿಗೆ ಬರಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.

ಸಾಮಾನ್ಯವಾಗಿ ವಿದೇಶಗಳಲ್ಲಿ ಶಾಲಾ ಮಟ್ಟದಲ್ಲಿಯೇ CPR (ಕಾರ್ಡಿಯೋಪಲ್ಮನರಿ ಪುನರುಜ್ಜೀವನ) ನೀಡುವ ವಿಧಾನದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ತರಬೇತಿಯನ್ನು ನೀಡಲಾಗುತ್ತದೆ.

ಆದರೆ ಭಾರತದಲ್ಲಿ ವೈದ್ಯರಲ್ಲಿ ಮಾತ್ರ ಇದರ ಜ್ಞಾನವಿದೆ ಹೊರತು ಜನಸಾಮಾನ್ಯರಿಗೆ ಈ ಬಗ್ಗೆ ಮಾಹಿತಿಯ ಕೊರತೆ ಇದೆ. ಇದರಿಂದಾಗಿ ಕಾರ್ಡಿಯೋ ಅರೆಸ್ಟ್​​ಗೆ ಒಳಗಾದವರಿಗೆ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ CPR ಸಿಗದೇ ದಾರಿಯಲ್ಲಿ ಮೃತಪಡುತ್ತಿರುವ ಪ್ರಕರಣಗಳು ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿವೆ.

ಸಿಪಿಆರ್ ಎಂದರೇನು

ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (Cardiopulmonary Resuscitation )ನನ್ನು ಸಿಪಿಆರ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ. ಇದು ರೋಗಿಗೆ ಉಸಿರಾಡಲು ನೆರವಾಗುತ್ತದೆ. ಸಿಪಿಆರ್ ನೀಡುವಾಗ, ಇದು ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಸಿಪಿಆರ್ ಸಹಾಯದಿಂದ, ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು.

ಜೀವ ಉಳಿಸುವ CPRಸಿಪಿಆರ್ ಏಕೆ ಅಗತ್ಯ?

ಸಾಮಾನ್ಯವಾಗಿ ಆಸ್ಪತ್ರೆ ಹೊರಗೆ ಕಾರ್ಡಿಯೋ ಅರೆಸ್ಟ್ (Cardiac Arrest) ಆಗಿ 10ರಲ್ಲಿ 9 ಮಂದಿ ಸಾಯುತ್ತಾರೆ. ಆದ್ರೆ ಸಿಪಿಆರ್,ಜೀವ ಉಳಿಸಲು ನೆರವಾಗುತ್ತದೆ. ಕಾರ್ಡಿಯೋ ಅರೆಸ್ಟ್ ಆದ ಮೊದಲು ಐದು ನಿಮಿಷದಲ್ಲಿ ಸಿಪಿಆರ್ ಸಿಕ್ಕಲ್ಲಿ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. ಮಹಿಳೆಯರು ಸೇರಿದಂತೆ ಅನೇಕರಿಗೆ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಡಿಯೋ ಅರೆಸ್ಟ್ ಆದಾಗ ಈ ಚಿಕಿತ್ಸೆ ಸಿಗುವುದಿಲ್ಲ. ಕಾರ್ಡಿಯೋ ಅರೆಸ್ಟ್ ಆದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಿಪಿಆರ್ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಆಂಬ್ಯುಲೆನ್ಸ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಸಿಪಿಆರ್ ತರಬೇತಿ ನೀಡಲಾಗುತ್ತದೆ.

ವಾಸ್ತವವಾಗಿ, ಹೃದಯಾಘಾತದ ನಂತರ ಅಥವಾ ವಿವಿಧ ಕಾರಣಗಳಿಂದ ಉಸಿರಾಟವನ್ನು ನಿಲ್ಲಿಸಿದ ನಂತರವೂ ಆಮ್ಲಜನಕವು ಸ್ವಲ್ಪ ಸಮಯದವರೆಗೆ ದೇಹದ ರಕ್ತದಲ್ಲಿ ಉಳಿಯುತ್ತದೆ. ಆದರೆ ಹೃದಯವು ಕಾರ್ಯನಿರ್ವಹಿಸದ ಕಾರಣ, ಹೃದಯಕ್ಕೆ ರಕ್ತದ ಹರಿವು ನಿಲ್ಲುತ್ತದೆ ಮತ್ತು ದೇಹದ ಉಳಿದ ಭಾಗವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ CPR ಜೀವ ರಕ್ಷಕವಾಗಿದೆ.

96,150 ಪ್ರಕರಣಗಳು ವರದಿ

ರಾಜ್ಯದಲ್ಲಿ ಕಳೆದ ವರ್ಷದಲ್ಲಿ 96,150 ಮಂದಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಅನೇಕರಿಗೆ ತುರ್ತು CPR ಸಿಗದೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಲ್ಲಿ CPR ಬಗ್ಗೆ ಜನಜಾಗೃತಿ ಮೂಡಿಸಲು ಮುಂದಾಗಿದ್ದು, ಮುಂದಿನ ದಿನದಲ್ಲಿ ಬಸ್ ನಿಲ್ದಾಣ, ಶಾಂಪಿಂಗ್ ಮಾಲ್‌ಗಳಲ್ಲಿ ಸಿಪಿಆರ್ ತರಬೇತಿ ನೀಡಲು ಮುಂದಾಗಿದೆ.

ಆರೋಗ್ಯ ಇಲಾಖೆಯ ಆಯುಕ್ತರಾದ ಡಾ.ರಂದೀಪ ಅವರು ಮಾತನಾಡಿ, CPR ಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರೌಢಶಾಲಾ, ಪಿಯು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯದಲ್ಲಿ CPR ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಸಿಪಿಆರ್ ಮಾಹಿತಿ ನೀಡುವುದರ ಜತೆಗೆ ಪ್ರಾಯೋಗಿಕ ತರಬೇತಿಯು ನೀಡಲಾಗುತ್ತದೆ. ಇದು ಎಲ್ಲಿಯೋ , ಯಾವುದೋ ಒಂದು ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದಿದ್ದಾರೆ.

Share This Article
Leave a comment