ಮದ್ದೂರು – ಕೊಟ್ಟಿಗೆಯಲ್ಲಿ ಬಂಧಿಯಾದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಮುಂದುವರೆದ ಆತಂಕ

Team Newsnap
2 Min Read

ಮಂಡ್ಯದಲ್ಲಿ ಚಿರತೆ ಹಾವಳಿ ಮಿತಿಮೀರಿದೆ. ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆ ಆತಂಕ ಸೃಷ್ಟಿಸುತ್ತಿದೆ. ಒಂದು ಕಡೆ ಕುರಿ-ಮೇಕೆ ಬೇಟೆಗಾಗಿ ಕೊಟ್ಟಿಗೆಗೆ ನುಗ್ಗಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿ ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕುಂದನಗುಪ್ಪೆ ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು, ಜಾನುವಾರುಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿತ್ತು.

ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕುಂದನಗುಪ್ಪೆ ಗ್ರಾಮಕ್ಕೆ ಬಂದ ಚಿರತೆ ಕಷ್ಣಪ್ಪ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ನುಗ್ಗಿದೆ. ಕೊಟ್ಟಿಗೆಯಲ್ಲಿ 15ಕ್ಕೂ ಹೆಚ್ಚು ಕುರಿ-ಮೇಕೆ, ಒಂದು ಕರು, ಕೋಳಿ ಕೂಡ ಇತ್ತು. ಬೇಟೆಗೆ ನುಗ್ಗಿದ ಚಿರತೆಗೆ ಟಗರು ಗುದ್ದಿದ್ದು, ಚಿರತೆ ಗಾಬರಿಗೆ ಒಳಗಾಗಿದೆ.

ಕುರಿ-ಮೇಕೆ ಚೀರಾಟ ಕೇಳಿ ಹೊರಬಂದ ಕೃಷ್ಣಪ್ಪ ಕುಟುಂಬ ಕೊಟ್ಟಿಗೆಯಲ್ಲಿ ಚಿರತೆ ಕಂಡು ದಿಗ್ಭ್ರಮೆಗೊಂಡಿದ್ದಾರೆ. ಚಿರತೆ ಬೇಟೆಗೆ ನುಗ್ಗಿ ಕೊಟ್ಟಿಗೆ ಸುತ್ತ ಹಾಕಿದ್ದ ಕಬ್ಬಿಣದ ಗೂಡಿನಿಂದ ಹೊರಬರಲಾಗದೆ ಕುರಿ ಮೇಕೆಯೊಂದಿಗೆ ಹಲವು ಗಂಟೆ ಕಳೆದಿದೆ. ನಂತರ ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಡಿಎಫ್‍ಓ ವೃತ್ತಾರನ್ ಹಾಗೂ ಹತ್ತಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಪ್ಲಾನ್ ರೂಪಿಸಿ ಕೊಟ್ಟಿಗೆ ಟಾರ್ಪಾಲಿನಲ್ಲಿ ಮುಚ್ಚಿ, ನಂತರ ಮೈಸೂರಿನಿಂದ ಅರವಳಿಕೆ ತಜ್ಞರನ್ನು ಕರೆಸಿ, ಚಿರತೆಗೆ ಅರವಳಿಕೆ ಮದ್ದು ನೀಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಿರತೆಯನ್ನು ಸೆರೆಹಿಡಿದರು.

KRS ನಲ್ಲಿ ಆತಂಕ :

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಚಿರತೆ ಆತಂಕ ಮುಂದುವರಿದಿದೆ. ಕಳೆದ ಹದಿನೈದು ದಿನದಿಂದಲು ಚಿರತೆ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದು, ಪ್ರವಾಸಿಗರಲ್ಲಿ ಆತಂಕದ ಮೂಡಿಸಿದೆ.

ಅಕ್ಟೋಬರ್ 22 ರಂದು ಕೆಆರ್‌ಎಸ್‌ ಡ್ಯಾಂ ಪಕ್ಕದಲ್ಲಿ ಚಿರತೆ ಸಿಬ್ಬಂದಿ ಕಣ್ಣಿಗೆ ಕಾಣಿಸಿತ್ತು. ಅಂದು ಬೋನ್ ಇಟ್ಟು, ಒಂದು ದಿನ ಕಾರ್ಯಾಚರಣೆ ನಡೆಸಿ ಚಿರತೆ ಸಿಗದಿದ್ದಕ್ಕೆ ಸುಮ್ಮನಾಗಿದ್ದರು. ಯಾವಾಗ ಮತ್ತೆ ಅ.28 ರಂದು ಬೃಂದಾವನದ ಉತ್ತರ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷವಾಗಿ, ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಸೆರೆಯಾಯ್ತೋ ಅಂದಿನಿಂದ ಇಂದಿನವರೆಗೂ ಉತ್ತರ ಬೃಂದಾವನ ಬಂದ್ ಮಾಡಿದ್ದಾರೆ, ಆದರೆ ಇದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ.

ಉತ್ತರ ಬೃಂದಾವನದಲ್ಲಿರುವ ನೃತ್ಯ ಕಾರಂಜಿ. ಆ ಸೌಂದರ್ಯ ರಾಜ್ಯವಲ್ಲದೆ ಹೊರರಾಜ್ಯದಿಂದಲು ಬಹಳಷ್ಟು ಜನ ಬರ್ತಾರೆ. ಆದ್ರೆ ಉತ್ತರ ಬೃಂದಾವನ ಬಂದ್ ಆಗಿರುವುದು ಬೇಸರ ಆಗುತ್ತಿದೆ ಎನ್ನುತ್ತಿದ್ದಾರೆ.

ಅಷ್ಟೇ ಅಲ್ಲದೆ ಆರ್ಥಿಕ ಹೊಡೆತ ಉಂಟುಮಾಡಿದೆ. ಅಲ್ಲದೇ ಟಿಕೆಟ್ ದರವನ್ನು ಕಡಿಮೆ ಮಾಡದೇ, ಚಿರತೆ ಸೆರೆಹಿಡಿಯದೆ ನಿರ್ಲಕ್ಷ್ಯ ಮಾಡ್ತಿರುವ ಕಾವೇರಿ ನೀರಾವರಿ ನಿಗಮ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a comment