ಕ್ಯಾನ್ಸರ್ ಗೆದ್ದ 84 ವರ್ಷದ ಹಿರಿಯ ಪತ್ರಕರ್ತ ಶೇಷಚಂದ್ರಿಕಾಗೆ KUWJ ಗೌರವ

Team Newsnap
3 Min Read
KUWJ honors 84-year-old veteran journalist Sesha Chandrika who beat cancer ಕ್ಯಾನ್ಸರ್ ಗೆದ್ದ 84 ವರ್ಷದ ಹಿರಿಯ ಪತ್ರಕರ್ತ ಶೇಷಚಂದ್ರಿಕಾಗೆ KUWJ ಗೌರವ
  • ಪ್ರೆಸ್ ಕ್ಲಬ್ ನಿಂದ ಮನೆಗೆ ಹದಿನಾಲ್ಕು ವರ್ಷ ನಡೆದ ಜೀವ
  • ಪತ್ರಕರ್ತರು ಹೋಮ್ ವರ್ಕ್ ಮಾಡಿಕೊಳ್ಳುವುದು ಮುಖ್ಯ

ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾರೇ ಆಗಲಿ, ಮೊದಲು ಹೋಮ್ ವರ್ಕ್ ಮಾಡಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಂಡರೆ ಆ ವೃತ್ತಿಯಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ‌ ಎಸ್.ಕೆ.ಶೇಷಚಂದ್ರಿಕಾ (ಶೇಷಣ್ಣ) ಅಭಿಪ್ರಾಯಪಟ್ಟರು.

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಿರಿಯ ಪತ್ರಕರ್ತರನ್ನು ಗೌರವಿಸುವ ಮನೆಯಂಗಳದಲ್ಲಿ ಮನದುಂಬಿ ನಮನ ಸರಣಿ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.ಇದನ್ನು ಓದಿ30 ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ್ದ ಖತರ್ನಾಕ್ ಖದೀಮನ ಬಂಧಿಸಿದ ಪೋಲೀಸರು; ನಿಟ್ಟುಸಿರು ಬಿಟ್ಟ ಸಾರ್ವಜನಿಕರು

ಪತ್ರಕರ್ತರಿಗೆ ಸಹನೆ, ವಿವೇಚನೆ ಮುಖ್ಯ. ಸುದ್ದಿಮನೆಯಲ್ಲಿ ಯಾವುದೇ ಕೆಲಸ ಮಾಡುವಾಗಲೂ ತಮ್ಮದೇ ಆದ ರೀತಿಯಲ್ಲಿ ಪೂರ್ವ ತಯಾರಿ ಮಾಡಿಕೊಂಡು ಕೆಲಸ ಮಾಡುವುದನ್ನು ಕಲಿಯಬೇಕು ಎಂದರು.

1960 ರ ದಶಕದಲ್ಲಿ ಮುಂಬಯಿ ಯಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮೂಲಕ ಸುದ್ದಿಮನೆಯಲ್ಲಿ ಕಾಲಿರಿಸಿದ ನಾನು, ಜನವಾಣಿ, ಪ್ರಜಾಮತ, ಸಂಯುಕ್ತ ಕರ್ನಾಟಕ, ಆಕಾಶವಾಣಿ, ದೂರದರ್ಶನ ಸೇರಿದಂತೆ ಹಲವು ಕಡೆ ನಾನಾ ಹಂತದಲ್ಲಿ ಕೆಲಸ ಮಾಡಿರುವ ಸ್ಮರಣೀಯ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಿಂದ ವಿದ್ಯಾಪೀಠದ ಬಳಿ ಇರುವ ನನ್ನ ಮನೆಗೆ ಎರಡು ಗಂಟೆಗಳ ವಾಕ್. ಸತತವಾಗಿ 14 ವರ್ಷಗಳ ಕಾಲ ನಡೆದೇ ಮನೆಗೆ ಬರುತ್ತಿದ್ದೆ. ಅದೇ ನನ್ನ ಆರೋಗ್ಯದ ಗುಟ್ಟು. ಆ ಮನೋಬಲದಿಂದಲೇ ಆಪರೇಶನ್ ಆದರೂ ಎದೆಗುಂದದೆ ಕ್ಯಾನ್ಸರ್ ನ್ನು ಜಯಿಸಲು ಸಾಧ್ಯವಾಯಿತು. ಈ ಸಂದರ್ಭದಲ್ಲಿ ನನ್ನ ಪತ್ನಿ ಪರಿಮಳ ಮತ್ತು ಮಕ್ಕಳು ಹಾಗೂ ಕುಟುಂಬ ನೀಡಿದ ಸಹಕಾರ ಮರೆಯಲಾಗದು ಎಂದರು.

ಕೆಯುಡಬ್ಲ್ಯೂಜೆ, ಪತ್ರಕರ್ತರೆಲ್ಲರ ಸಾಂಘಿಕ ವೇದಿಕೆ. ಈ ಸಂಘಕ್ಕೆ ತನ್ನದೇ ಆದ ಚಾರಿತ್ರಿಕ ಇತಿಹಾವಿದೆ. ಸಂಘದ ಇತಿಹಾಸವನ್ನು ಮರಳಿ ನೆನಪಿಸುವ, ವೃತ್ತಿ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಮಾಡುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗುತ್ತಿರುವ ಪರಿ ನನಗೆ ಅಚ್ಚರಿಯಾಗಿದೆ.

ಅಷ್ಟೊಂದು ಪತ್ರಕರ್ತರಿಗೆ ಪರಿಹಾರವನ್ನು ತಗಡೂರು ಕೊಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮನೆಯಲ್ಲಿ ಅನಾಹುತ ಮಾಡಿಕೊಂಡ ಡಿ.ಕೆ.ಶಿ: ​​ ಬಲಗೈಗೆ ಪೆಟ್ಟು

ಹಿರಿಯ ಪತ್ರಕರ್ತ‌ ಈಶ್ವರ ದೈ ತೋಟ ಅವರು ಮಾತನಾಡಿ, ಹಿರಿಯರಾಗಿರುವ ಶೇಷಚಂದ್ರಿಕಾ ಅವರನ್ನು ಸನ್ಮಾನಿಸುವ ಮೂಲಕ ಕಿರಿಯರ ಹಾದಿಗೆ ಬೆಳಕಿನ ಮಾರ್ಗದರ್ಶನ ಮಾಡುತ್ತಿರುವ ಕೆಯುಡಬ್ಲ್ಯೂಜೆ ಕಾರ್ಯ ಸ್ತುತ್ಯರ್ಹ ಎಂದು ಪ್ರಶಂಸಿದರು.

ನಾನು ಪತ್ರಿಕೋದ್ಯಮಕ್ಕೆ ಬಂದ ದಿನಗಳಿಂದ ಈತನಕವೂ ಶೇಷಚಂದ್ರಿಕಾ ಅವರ ಜೊತೆಗೆ ಒಡನಾಟ ಹೊಂದಿದ್ದೇನೆ. ನಿಜಕ್ಕೂ ಇವರು ಮಾಹಿತಿ ಕಣಜ. ಅನೇಕಾನೇಕ ಘಟನಾವಳಿಗಳಿಗೆ ಸಾಕ್ಷಿಯಾಗಿದ್ದಾರೆ. ಅವರ ವೃತ್ತಿ ಬದುಕು ನಮ್ಮೆಲ್ಲರಿಗೆ ಮಾದರಿ ಎಂದರು.

ಮತ್ತೋರ್ವ ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ ಮಾತನಾಡಿ, ಹಿರಿಯ ಪತ್ರಕರ್ತರ ಸೇವೆ ಸ್ಮರಿಸಿ ಅವರ ಮನೆ ಅಂಗಳಕ್ಕೆ ಕೆಯುಡಬ್ಲ್ಯೂಜೆ ಹೋಗುತ್ತಿರುವುದು ಹೊಸದೊಂದು ಸಂಪ್ರದಾಯ ಹುಟ್ಟು ಹಾಕಿದೆ. ಆ ಮೂಲಕ ಹಿರಿಯ ಮತ್ತು ಕಿರಿಯ ಮನಸ್ಸುಗಳನ್ನು ಬೆಸೆಯುವ ಕಾರ್ಯಕ್ರಮವಾಗಿದೆ ಎಂದರು.

ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವುದನ್ನು ತಗಡೂರು ನೇತೃತ್ವದ ತಂಡ ಅಚ್ಚುಕಟ್ಟಾಗಿ ಮಾಡುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಟಿ ಮಾಡುತ್ತಿದೆ. ಕೆಯುಡಬ್ಲ್ಯೂಜೆ ಅಕಾಡೆಮಿಕ್ ಹಂತದಲ್ಲಿ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಆರು ದಶಕಗಳಿಗೂ ಹೆಚ್ಚು ಸುದ್ದಿಮನೆಯಲ್ಲಿ ಸಕ್ರಿಯವಾಗಿರುವ ಶೇಷಚಂದ್ರಿಕಾ ಅವರು ನಮ್ಮೆಲ್ಲರ ಹೆಮ್ಮೆಯ ಹಿರಿಯಣ್ಣ ಆಗಿದ್ದಾರೆ. ಅವರ ವೃತ್ತಿ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯವಾದದ್ದು ಎಂದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ ಸ್ವಾಗತಿಸಿದರು. ನಿಯೋಜಿತ ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸೋಮಶೇಖರ ಗಾಂಧಿ, ದೇವರಾಜು, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರಿಕಟ್, ಫೋಟೋಗ್ರಾಫರ್ ಶರಣ ಬಸಪ್ಪ ಮತ್ತಿತರರು ಹಾಜರಿದ್ದರು.

Share This Article
Leave a comment