ಕನ್ನಡ ಸಾಹಿತ್ಯ – ಪರಂಪರೆ: ಭಾಗ- 20

Team Newsnap
3 Min Read
siddalingayya

ಡಾ.ಸಿದ್ಧಲಿಂಗಯ್ಯ ರವರ ಬದುಕು- ಹೋರಾಟ

ಪ್ರತಿಭಟನಾತ್ಮಕವಾದ ದಲಿತ/ಬಂಡಾಯ ಕಾವ್ಯಕ್ಕೆ ನಾಂದಿ ಹಾಡಿದ ಪ್ರಮುಖ ಕವಿ ಡಾ.ಸಿದ್ಧಲಿಂಗಯ್ಯನವರು. ಸಿದ್ಧಲಿಂಗಯ್ಯನವರದು ನೋವಿಗದ್ದಿದ ಲೇಖನಿ. ಈ ನೋವಿನ ಮೂಲವಾದ ಶೋಷಣೆ, ಅಸಹಾಯಕತೆ, ರೊಚ್ಚು, ಆಕ್ರೋಶ, ಪ್ರತಿಭಟನೆಗಳೆಲ್ಲವನ್ನೂ ತೀವ್ರ ಸಂವೇದನೆಯಿಂದ ತಮ್ಮ ಕಾವ್ಯ ಮತ್ತಿತ್ತರ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿ ದಲಿತ/ಬಂಡಾಯ ಕಾವ್ಯದ ಮಾರ್ಗ ಪ್ರವರ್ತಕ ಕವಿ ಎನ್ನಿಸಿಕೊಂಡವರು ಡಾ.ಸಿದ್ಧಲಿಂಗಯ್ಯ.

ಕವಿ ಸಿದ್ಧಲಿಂಗಯ್ಯನವರು ಬಡ ಕುಟುಂಬವೊಂದರಲ್ಲಿ  ದೇವಯ್ಯ ಮತ್ತು ವೆಂಕಟಮ್ಮನವರ ಪುಠತ್ರರಾಗಿ 1954 ರ ಫೆಬ್ರವರಿ 3 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು.

ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಸಿದ್ಧಲಿಂಗಯ್ಯನವರು  1974ರ ವರ್ಷದಲ್ಲಿ ಬೆಂಗಳೂರಿನ ಸರಕಾರಿ ಕಲಾಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರಲ್ಲದೆ. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರೊ. ಡಿ.ಎಲ್‌. ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನೂ,  ಪ್ರೊ. ಜಿ.ಎಸ್‌. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿಯನ್ನು ಗಳಿಸಿದವರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಸಿದ್ಧಲಿಂಗಯ್ಯನವರು,  ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ  ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನೂ ವ್ಯಕ್ತಿಪಡಿಸಲು ಸಿದ್ಧಲಿಂಗಯ್ಯನವರು ಆಯ್ದುಕೊಂಡದ್ದು ಕಾವ್ಯ ಮಾಧ್ಯಮ. ಹೀಗೆ ಅವರು ಬರೆದ ಹಲವಾರು ಕವನಗಳ ಸಂಕಲನ ‘ಹೊಲೆಮಾದಿಗರ ಹಾಡು’ 1975ರಲ್ಲಿ ಪ್ರಕಟಗೊಂಡಿತು. ಮುಂದೆ ಅವರ ‘ಸಾವಿರಾರು ನದಿಗಳು’, ‘ಕಪ್ಪುಕಾಡಿನ ಹಾಡು’, ‘ಮೆರವಣಿಗೆ’,  ‘ನನ್ನ ಜನಗಳು ಮತ್ತು ಇತರ ಕವಿತೆಗಳು’, ‘ಆಯ್ದ ಕವನಗಳು’ ಮುಂತಾದ ಕವನ ಸಂಕಲನಗಳು  ಪ್ರಕಟಗೊಂಡಿವೆ.

ಸಿದ್ಧಲಿಂಗಯ್ಯನವರ ‘ಪಂಚಮ ಮತ್ತು ನೆಲಸಮ’, ‘ಏಕಲವ್ಯ’  ಪ್ರಮುಖ ನಾಟಕಗಳಾದರೆ ‘ಅವತಾರಗಳು’ ಪ್ರಬಂಧ ಕೃತಿ. ಇವಲ್ಲದೆ ರಸಗಳಿಗೆಗಳು, ಎಡಬಲ,  ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ ಮುಂತಾದ ಲೇಖನ ಸಂಗ್ರಹಗಳು, ಸದನದಲ್ಲಿ ಸಿದ್ಧಲಿಂಗಯ್ಯ ಭಾಗ ೧-೨ ಮತ್ತು  ಆತ್ಮಕಥನ ಊರು-ಕೇರಿ ಭಾಗ ೧-೨ ಪ್ರಕಟಗೊಂಡಿವೆ. ಬೆಂಗಳೂರು ವಿಶ್ವವಿದ್ಯಾಲಯದ  ಪ್ರಸಾರಂಗಕ್ಕಾಗಿ ‘ಸಮಕಾಲೀನ ಕನ್ನಡ ಕವಿತೆಗಳು’ ಭಾಗ-೩ ಮತ್ತು ಭಾಗ-೪ ನ್ನು ಸಂಪಾದಿಸಿಕೊಟ್ಟಿದ್ದಾರೆ.

ಸಿದ್ಧಲಿಂಗಯ್ಯನವರ ‘ಊರು ಕೇರಿ’ ಆತ್ಮಕಥೆ ಇಂಗ್ಲಿಷ್‌ ಹಾಗೂ ತಮಿಳಿಗೂ ಅನುವಾದಗೊಂಡಿದ್ದು ಇಂಗ್ಲಿಷ್‌ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ. ಸಿದ್ಧಲಿಂಗಯ್ಯನವರ ಹಲವಾರು ಕವಿತೆಗಳು ಇಂಗ್ಲಿಷ್‌, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ.

ಸಿದ್ಧಲಿಂಗಯ್ಯನವರು ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ‘ಧರಣಿಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಬರೆದ ಗೀತೆಗೆ 1983-84ರಲ್ಲಿ ರಾಜ್ಯಪ್ರಶಸ್ತಿ ಸಂದಿದೆ.

ಪಣಜಿಯಲ್ಲಿ ನಡೆದ ಭಾರತೀಯ ಕನ್ನಡ ಸಮ್ಮೇಳನದ ಅಧ್ಯಕ್ಷತೆ, ಗೋರೆಗಾಂವ್‌ನ ವಿಚಾರ ಭಾರತಿ ಸಮ್ಮೇಳನದ ಅಧ್ಯಕ್ಷತೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೀದರ್ನಲ್ಲಿ ನಡೆದ ಶರಣ ಸಮ್ಮೇಳನದ ಅಧ್ಯಕ್ಷತೆ, ಮತ್ತು ಹಂಪಿ ಉತ್ಸವದಲ್ಲಿ, ಮೈಸೂರು ದಸರಾ ಮಹೋತ್ಸವದಲ್ಲಿ, ದೆಹಲಿಯಲ್ಲಿ ನಡೆದ ದಕ್ಷಿಣ ಪ್ರಾಂತೀಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ಆಳ್ವಾಸ್ ನುಡಿಸಿರಿ ಸಮ್ಮೇಳನ  ಹಾಗೂ ಶ್ರವಣಬೆಳಗೊಳದಲ್ಲಿ 81ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಸಿದ್ಧಲಿಂಗಯ್ಯನವರನ್ನರಸಿ ಬಂದಿವೆ.

ಸಿದ್ಧಲಿಂಗಯ್ಯನವರು ನಿರಂತರವಾಗಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದು ಜಾನಪದ ಸಾಹಿತ್ಯ ಸಂಪಾದಕ ಮಂಡಲಿ, ಅಂಬೇಡ್ಕರ್ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ರಾಮಮನೋಹರ ಲೋಹಿಯಾ ಅವರ ಕೃತಿಗಳ ಭಾಷಾಂತರ ಮತ್ತು ಸಂಪಾದನಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಲಿ ಮುಂತಾದವುಗಳಲ್ಲಿ ಸದಸ್ಯರಾಗಿರುವುದರ ಜೊತೆಗೆ ದಲಿತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರಾಗಿದ್ದಾರೆ.

ಸಿದ್ಧಲಿಂಗಯ್ಯನವರ ಸೃಜನಶೀಲ ಸಾಹಿತ್ಯ ಸಾಧನೆಗಾಗಿ ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್‌ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ಸಂದಿವೆ.

ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1988-94, 1995-2001 ರವರೆಗೆ ಎರಡುಬಾರಿ ನಾಮಕರಣಗೊಂಡಿರುವುದರ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ 2006-08 ಅವಧಿಯಲ್ಲಿ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸಿದ್ಧಲಿಂಗಯ್ಯನವರು ಹಿಂದಿನ ಸಾಲಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಿಸಿದ್ದಾರೆ.

Manasa Gowda
ಮಾನಸ ಗೌಡ
ಸಹಾಯಕ ಪ್ರಾಧ್ಯಾಪಕಿ
ಇಂಡಿಯನ್ ಅಕಾಡೆಮಿ ಪದವಿ ಕಾಲೇಜು ಬೆಂಗಳೂರು.
Share This Article
Leave a comment