ಮೇಲುಕೋಟೆ (Melukote) ವೈರಮುಡಿ ಉತ್ಸವದ ಇತಿಹಾಸ : ಪರಂಪರೆ ಹೇಗೆ – ಮಹತ್ವ ಎಷ್ಟು

Team Newsnap
5 Min Read

ಮಂಡ್ಯ (Mandya) ಜಿಲ್ಲೆ, ಪಾಂಡವಪುರ ತಾಲೂಕಿನ ಮೇಲುಕೋಟೆ (Melukote) ಕಲೆ, ಸಂಸ್ಕೃತಿ, ಶಿಲ್ಪಕಲೆಯ ತವರು. ಕರ್ನಾಟಕದ ಸುಪ್ರಸಿದ್ಧ ಯಾತ್ರಾಸ್ಥಳ. ಗಿರಿಶಿಖರಗಳಿಂದ ಕಂಗೊಳಿಸುವ ಮೇಲುಕೋಟೆ ಆಚಾರ್ಯ ರಾಮಾನುಜಾಚಾರ್ಯರಿಂದ ಪುನೀತವಾದ ಪುಣ್ಯಕ್ಷೇತ್ರ.

sri ramnuja

ಮೇಲುಕೋಟೆ (Melukote) ಪುಣ್ಯಕ್ಷೇತ್ರವಷ್ಟೇ ಅಲ್ಲ. ಸಮುದ್ರ ಮಟ್ಟದಿಂದ ಸುಮಾರು 3600 ಅಡಿಗಳಷ್ಟು ಎತ್ತರದಲ್ಲಿರುವ ಇದು ಅಘೋಷಿತ ಸುಂದರ ಗಿರಿಧಾಮ ಕೂಡ ಭೂ ವೈಕುಂಠ ಎಂದು ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆ ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವ ಸ್ಥಾನ ಪಡೆದಿದೆ.

ರಾಮಾನುಜಾಚಾರ್ಯರು (RamanujaCharya)

melukote 12

12 ನೇ ಶತಮಾನದಲ್ಲಿ ಶ್ರೀರಾಮಾನುಜಾಚಾರ್ಯರು ಕ್ರಿಸ್ತ ಶಕ 1098ರಲ್ಲಿ ತಮಿಳುನಾಡಿನಿಂದ ಮೇಲುಕೋಟೆಗೆ ವಲಸೆ ಬಂದು ಜೈನ ಧರ್ಮಾನುಯಾಯಿಯಾಗಿದ್ದ ಹೊಯ್ಸಳ ದೊರೆ ಬಿಟ್ಟಿದೇವನನ್ನು ತಮ್ಮ ಪ್ರಭಾವದಿಂದ ವೈಷ್ಣವ ಧರ್ಮದ ಅನುಯಾಯಿಯನ್ನಾಗಿ ಮಾರ್ಪಡಿಸಿ ಆತನ ನೆರವಿನಿಂದ ಭವ್ಯ ದೇವಸ್ಥಾನ ನಿರ್ಮಿಸಿ, ಚೆಲುವನಾರಾಯಣ ಸ್ವಾಮಿಯನ್ನು ಇಲ್ಲಿ ಪುನರ್ ಪ್ರತಿಷ್ಠಾಪಿಸಿದರೆಂದು ಇತಿಹಾಸ ಹೇಳುತ್ತದೆ.

ಮೇಲುಕೋಟೆಯಲ್ಲಿ (Melukote) ಚೆಲುವನಾರಾಯಣ, ಬೆಟ್ಟದ ಯೋಗಾನರಸಿಂಹ, ಅಕ್ಕ-ತೆಂಗಿಯರ ಕೊಳ,ಪುಷ್ಕರಣಿ, ಸುಂದರವಾದ ಭುವನೇಶ್ವರಿ ಮಂಟಪ, ಮನಮೋಹಕವಾದ ಕಲ್ಯಾಣಿ, ಯದುಗಿರಿ ಅಮ್ಮನವರ ದೇಗುಲ, ಸಂಗೀತ, ನೃತ್ಯ, ಸಾಹಿತ್ಯೋತ್ಸವಗಳ ವೇದಿಕೆಯಾದ ಮಂಟಪಗಳೇ ಮೊದಲಾದ ಸುಂದರಾತಿಸುಂದರ ತಾಣಗಳಿವೆ. . ಸಭಾಮಂಟಪದಲ್ಲಿರುವ 100 ಕಲ್ಲು ಗಂಬಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರಮುಖ ಸನ್ನಿವೇಶಗಳ ಚಿತ್ರಣವಿದೆ.

ವೈರಮುಡಿ ಉತ್ಸವ

ಈ ಪುಣ್ಯಕ್ಷೇತ್ರದಲ್ಲಿ ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹತ್ತು ದಿನ ಬಹು ವಿಜೃಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆಯುತ್ತದೆ. ಇದು ಕರ್ನಾಟಕದ ಅತ್ಯಂತ ಭವ್ಯ ಧಾರ್ಮಿಕ ಆಚರಣೆಯಲ್ಲೊಂದು.

ಒಡವೆ, ವೈಢೂರ್ಯಗಳಿಂದಲೇ ಆರಂಭವಾಗುವ ವಿಶೇಷ ಪೂಜಾ ಪದ್ಧತಿಗಳು ಮತ್ತು ಕಣ್ಮನ ಸೆಳೆವ ಅತ್ಯದ್ಭುತ ಆಭರಣಗಳು ವೈರಮುಡಿ ಉತ್ಸವದ ಆಕರ್ಷಣೆ. ಬಹು ವೈಭವೋಪೇತವಾಗಿರುತ್ತದೆ, ಹಾಗಾಗಿ ಮೇಲುಕೋಟೆಯ ವೈರಮುಡಿ ಉತ್ಸವ ಜಗತ್ಪ್ರಸಿದ್ಧವಾಗಿದೆ. ವೈರಮುಡಿ ಎಂಬುದು ಹೆಸರೇ ಹೇಳುವಂತೆ ವಜ್ರಾಭರಣವಾದ ಒಂದು ಕಿರೀಟ. ಇದರ ಹಿಂದೊಂದು ಪೌರಾಣಿಕ ಕಥೆಯುಂಟು.

ವೈರಮುಡಿಯ ಇತಿಹಾಸ

ದ್ವಾರಕೆಯಿಂದ ತಿರುನಾರಾಯಣಪುರಕ್ಕೆ ಸ್ವತಃ ಶ್ರೀಕೃಷ್ಣನೇ ಬಂದು ತನಗೆ ಅರ್ಪಿತವಾದ ವೈರಮುಡಿಯನ್ನು ಚೆಲುವರಾಯನಿಗೆ ಅರ್ಪಿಸುತ್ತಾನೆ. ಹೀಗೆ ಅಂದು ವೈನತೇಯ (ಗರುಡ) ಚೆಲುವನಾರಾಯಣಸ್ವಾಮಿಯನ್ನು ಹೆಗಲ ಮೇಲಿರಿಸಿಕೊಂಡು ಉತ್ಸವ ಮಾಡಿದ ಕಾರಣ ಇಂದಿಗೂ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಗರುಡ ವಾಹನದ ಮೇಲೆಯೇ ಜರುಗುತ್ತದೆ ಇದೇ ಬ್ರಹ್ಮೋತ್ಸವ. ಸಮದ್ಧಿ ಮತ್ತು ಸಂಪತ್ತು ಹಾಗೂ ಸಂಭ್ರಮದ ಸಂಕೇತವಾದ ನವಧಾನ್ಯಗಳ ಅಂಕುರಾರ್ಪಣೆಯೊಂದಿಗೆ ಫಾಲ್ಗುಣ ಪುಷ್ಯ ನಕ್ಷತ್ರ ದಲ್ಲೇ ವೈರಮುಡಿ ಪ್ರಾರಂಭವಾಗುತ್ತದೆ.

ಮೈಸೂರು (Mysore) ರಾಜ ಮನೆತನದ ಕೊಡುಗೆಗಳು


ಮೊದಲಿಗೆ ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮತ್ತಿತರ ಮಂಟಪಗಳಿಗೆ ಚೆಲುವನಾರಾಯಣ ಸ್ವಾಮಿಯ ಮೆರವಣಿಗೆ ಹೋಗುತ್ತದೆ. ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತು ರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಬೆಲೆ ಕಟ್ಟಲಾಗದ ಅತ್ಯಮೂಲ್ಯ, ಇಪ್ಪತ್ನಾಲ್ಕು ಆಭರಣಗಳನ್ನು ಭದ್ರತೆಯೊಡನೆ ಮಂಡ್ಯ ಜಿಲ್ಲಾ ಖಜಾನೆಯಿಂದ ವಿಶೇಷ ಪೆಟ್ಟಿಗೆಯಲ್ಲಿ ತಂದು ಶ್ರೀ ರಾಮಾನುಜರ ದೇವಸ್ಥಾನ ದಲ್ಲಿ ಇಡುತ್ತಾರೆ.

ವೈರಮುಡಿ ಉತ್ಸವದ ಆರಂಭ

melukote2


ಅಂದು ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀ ಚಲುವನಾರಾಯಣಸ್ವಾಮಿಯ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುತ್ತಾರೆ. ನಂತರ ಉತ್ಸವ ಹೊರಡುತ್ತದೆ. ಭಕ್ತರ ಪಾಲಿಗಂತೂ ಅದು ಸಾಕ್ಷಾತ್ ವೈಕುಂಠವೇ ಧರೆಗಿಳಿದಂತೆ.

ವೈರಮುಡಿ ಬ್ರಹ್ಮೋತ್ಸವ ರಾತ್ರಿ ಸುಮಾರು 9 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೂ ಜರುಗುತ್ತದೆ. ಕಣ್ಣು ಕೋರೈಸುವ ಈ ವಜ್ರ ಕಿರೀಟವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಹುದೇ ಹೊರತು ಯಾರೂ ಇದನ್ನು ಕೈಯಲ್ಲಿ ಮುಟ್ಟಬಾರದೆಂಬ ನಂಬಿಕೆ ಇಲ್ಲಿನದು. ಸಾಕ್ಷಾತ್ ಆದಿಶೇಷನೇ ವೈರಮುಡಿ ಎಂಬ ನಂಬಿಕೆಯೇ ಇದಕ್ಕೆ ಕಾರಣ.

ಶ್ರೀ ರಾಮಾನುಜರಿಂದ ರಕ್ಷಿಸಲ್ಪಟ್ಟ ವಿಗ್ರಹ

ಒಂದು ಕಾಲದಲ್ಲಿ ಈ ವಜ್ರಮಯ ವೈರಮುಡಿ ದೆಹಲಿ ಸುಲ್ತಾನರ ಕೈವಶವಾಗಿತ್ತು. ಆಚಾರ್ಯ ಶ್ರೀರಾಮಾನುಜರೇ ಇದನ್ನು ದೆಹಲಿಯಿಂದ ಮೂಲ ವಿಗ್ರಹದೊಂದಿಗೆ ಇಲ್ಲಿಗೆ ತಂದರೆಂದು ಹೇಳಲಾಗುತ್ತದೆ. ನಂತರ ವೈರಮುಡಿಯನ್ನು ಮೈಸೂರು ಅರಸರ ವಶಕ್ಕೆ ಒಪ್ಪಿಸಲಾಗಿತ್ತು. ಮುಂದೆ ಮಂಡ್ಯ ಜಿಲ್ಲಾ ಖಜಾನೆಯಲ್ಲಿ ವಿಶೇಷ ಭದ್ರತೆಯಲ್ಲಿ ಇದನ್ನು ಇಡುತ್ತಾ ಬರಲಾಗುತ್ತಿದೆ. ಆದಿಶೇಷನ ಅವತಾರಿ ಆಚಾರ್ಯ ಶ್ರೀರಾಮಾನುಜರು ಆರಂಭಿಸಿದ ವೈರಮುಡಿ ಉತ್ಸವ ಪ್ರತಿ ವರ್ಷ ಅದೇ ಮುಹೂರ್ತದಲ್ಲಿ ಮೇಲುಕೋಟೆಯಲ್ಲಿ ಸಾಂಗವಾಗಿ ನಡೆಯುತ್ತಾ ಬಂದಿದೆ.

(Melukote) #Melukote

ಕೊರೊನಾ ಕಾರಣಕ್ಕೆ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ಉತ್ಸವ ಈ ಬಾರಿ ವಿಜೃಂಭಣೆಯಿಂದ ನೆರವೇರಲಿದೆ.

ಇಂದಿನ ವೈರಮುಡಿ ಉತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ ಮಾಡಲಿದ್ದಾರೆ.

ಸ್ಥಾನಿಕರ ಗಲಾಟೆ :

ಈ ನಡುವೆ ಮೇಲುಕೋಟೆ 4 ನೇ ಸ್ಥಾನಿಕರ ಕುಟುಂಬಸ್ಥರು ಇಂದು ವೈರಮುಡಿ ಕಿರೀಟವನ್ನು ಮಂಡ್ಯ ಖಜಾನೆಯಿಂದ ಹಕ್ಕು ಪ್ರತಿಪಾದನೆ ವಿಚಾರದಲ್ಲಿ ಗಲಾಟೆ ಮಾಡಿ ವಾಹನ ತಡೆದು ಪ್ರತಿಭಟನೆ ಮಾಡಿದರು. ನಂತರ ಪೋಲಿಸರು ಅವರನ್ನು ತಳ್ಳಿ ಹಾಕಿ ವಾಹನ ಮಂಡ್ಯಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು

ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮೇಲುಕೋಟೆ :

ವೈರಮುಡಿ ಉತ್ಸವ ಹಿನ್ನೆಲೆ ಮೇಲುಕೋಟೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳುಸುತ್ತಿದೆ.

ಭೂ ವೈಕುಂಠ ಎಂಬ ಪ್ರಖ್ಯಾತವಾಗಿರುವ ಮೇಲುಕೋಟೆ ಹಲವು ಪುರಾಣ, ಇತಿಹಾಸಗಳನ್ನುತುಂಬಿಕೊಂಡ ಪ್ರಮುಖ ಧಾರ್ಮಿಕ ಕ್ಷೇತ್ರ.
ಯಾದವಾದ್ರಿ, ನಾರಾಯಣಾದ್ರಿ, ಯತಿಶೈಲ, ತಿರುನಾರಾಯಣಪುರ, ಯದುಗಿರಿ, ದಕ್ಷಿಣ ಬದರಿ ಕ್ಷೇತ್ರ.. ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಮೇಲುಕೋಟೆ ದಕ್ಷಿಣ ಭಾರತದ ಬಹು ಮುಖ್ಯ ನಾಲ್ಕು ವೈಷ್ಣವ ಕ್ಷೇತ್ರಗಳಲ್ಲೊಂದು. ಇಲ್ಲಿ ವರ್ಷ ಪೂರ್ತಿ ಉತ್ಸವಗಳು ನೆರವೇರಿದರೂ ಅದರಲ್ಲೂಪ್ರಮುಖವಾಗಿ ಅಂದ್ರೆ ವೈರಮುಡಿ ಬ್ರಹ್ಮೋತ್ಸವ.

9 ದಿನ ನಡೆಯುವ ಐತಿಹಾಸಿಕ ಬ್ರಹ್ಮೋತ್ಸವಕ್ಕೆ ಕಳೆದ ಎರಡು ದಿನಗಳ ಹಿಂದೆ ಗರುಡ ಧ್ವಜಾರೋಹಣದೊಂದಿಗೆ ಚಾಲನೆ ದೊರಕಿದೆ. 

ಮೇಲುಕೋಟೆಗೆ ದೀಪಾಲಂಕಾರ ಮಾಡಲಾಗಿದೆ. ಇಡೀ ಮೇಲುಕೋಟೆಯಲ್ಲಿ ವೈಕುಂಠವೇ ಧರಗೆ ಇಳಿದಂತೆ ಕಾಣುತ್ತಿದೆ, ಭಕ್ತರ ಅನುಕೂಲಕ್ಕಾಗಿ ಬೆಂಗಳೂರು, ಮೈಸೂರು, ಮಂಡ್ಯ, ಹಾಸನದಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶದಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದು, ಮೇಲುಕೋಟೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

17ರಂದು ಮಹಾ ರಥೋತ್ಸವ ಹಾಗೂ 18ರಂದು ಕಲ್ಯಾಣಿಯಲ್ಲಿ ತೆಪ್ಪೋತ್ಸವ ಹಾಗೂ ಲೇಜರ್ ಶೋ ನಡೆಯಲಿದೆ.

ಈ ಬಾರಿಯ ಅದ್ದೂರಿ ಜಾತ್ರಾಮಹೋತ್ಸವಕ್ಕೆ10 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಭದ್ರತೆಗಾಗಿ 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ಜನರ ಆರೋಗ್ಯದ ದೃಷ್ಟಿಯಿಂದ 10 ಅಂಬ್ಯುಲೆನ್ಸ್ ಹಾಗೂ ವೈದ್ಯಕೀಯ ತಂಡ ನಿಯೋಜಿಸಲಾಗಿದೆ.

Share This Article
Leave a comment