ಡಾ. ಅಬ್ದುಲ್ ಕಲಾಂ ಮಾನವೀಯ ಮೌಲ್ಯಗಳ ಮೇರು ಪ್ರತಿನಿಧಿ

Team Newsnap
3 Min Read

ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜಗತ್ತು ಕಂಡ, ಮೆಚ್ಚಿದ ವಿಜ್ಞಾನಿ, ತತ್ವಜ್ಞಾನಿ, ಮೇಧಾವಿ, ಗುರು ಹಾಗೂ ಕರುಣಾಮಯಿ.

ಈ ಎಲ್ಲಾ ಗುಣಗಳು ಒಬ್ಬರಲ್ಲಿರುವುದು ಬಹಳ ವಿರಳ. ಎಲ್ಲೇ ಹೋದರೂ ವಿದ್ಯಾರ್ಥಿ ಗಳ ಜತೆ ಮಾತುಕತೆ ನಡೆಸಿ ಅವರಿಗೆ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸಿ ಅದರ ಬಗ್ಗೆ ಪ್ರೇರಣೆ ನೀಡುತ್ತಿದ್ದರು. 

ಎತ್ತೆತ್ತ ನೋಡಿದರೂ ವಿಜ್ಞಾನ ಕಾಣುವುದಯ್ಯಾ, ಅತ್ತಿತ್ತ ನೋಡಿದರೂ ವಿಜ್ಞಾನ ಕುಣಿದಾಡುವುದಯ್ಯಾ ಎಂಬ ನಾಣ್ಣುಡಿಯಂತೆ ವಿಜ್ಞಾನ ಜ್ಞಾನವೆಂಬ ಸಾಗರ. ವಿಷಯಗಳ ಬಹು ದೊಡ್ಡ ಆಗರ.

ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ. ಭಾರತೀಯ ವಿಜ್ಞಾನಿಗಳು ವಿಜ್ಞಾನದ ಮೂಲಕ ಅನೇಕ ಪವಾಡಗಳನ್ನು ಮಾಡುತ್ತಿದ್ದಾರೆ. ವಿಜ್ಞಾನದಿಂದಾಗಿ ನಮ್ಮ ರಾಷ್ಟ್ರದ ಕೀರ್ತಿ ಎಲ್ಲೆಡೆ ವಿಶ್ವವ್ಯಾಪಿಯಾಗಿದೆ. ಮಾನವನು ವಿಜ್ಞಾನದಿಂದ ಭೂಮಿಯನ್ನು ಅಭಿವೃದ್ಧಿ ಮಾಡಿ ನಂತರ ಅಂತರಿಕ್ಷಕ್ಕೆ ಕಾಲಿರಿಸಿ ಕ್ಷಿಪಣಿಗಳ ಮೂಲಕ ಮಹತ್ತರ ಸಾಧನೆ ಮಾಡಿದ್ದಾನೆ. ಕ್ಷಿಪಣಿಗಳ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಭಾರತದ ಸಾಧನೆ ಅಪಾರವಾಗಿದೆ. ವಿಜ್ಞಾನ ಕ್ಷೇತ್ರದ ಪ್ರಗತಿಯಲ್ಲಿ ಭಾರತದ ವಿಜ್ಞಾನಿಗಳ ಪಾತ್ರ ಮಹತ್ತರವಾಗಿದೆ. ಇಂತಹ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಕುರಿತು ನಾವೆಲ್ಲ ತಿಳಿದುಕೊಳ್ಳಬೇಕು.

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ತಮಿಳುನಾಡಿನ ರಾಮೇಶ್ವರಂ ಎಂಬ ಹಳ್ಳಿಯಲ್ಲಿ ಜನಿಸಿದ ಕನಸುಗಾರ. ಅವರು ಬಾಲಕರಾಗಿದ್ದಾಗ ಕಡಲ ತೀರದಲ್ಲಿ ಕುಳಿತು ಪರಿಸರ ವೀಕ್ಷಿಸುತ್ತಿದ್ದರು. ದಡದಲ್ಲಿದ್ದ ಹಕ್ಕಿಗಳು ನೆಲದಿಂದ ಮೇಲಕ್ಕೆ ಹಾರುವುದು, ರೆಕ್ಕೆ ಬಡಿದು ಗಾಳಿಯಲ್ಲಿ ತೇಲುವುದು, ಕೆಳಗೆ ಜಿಗಿಯುವುದು, ಇವುಗಳನ್ನು ಕಂಡು ತಾನೂ ಇದೇ ರೀತಿ ಹಾರಾಡುವ ಕನಸು ಕಾಣುತ್ತಿದ್ದರು. ಬದುಕಿನ ವೈಶಿಷ್ಟ್ಯಗಳೆಂದರೆ ಇದೇನೆ! ಭಾರತದ ದಕ್ಷಿಣ ತೀರದ ಸಾಧಾರಣ ಹುಡುಗನೊಬ್ಬ ಉತ್ತರದ ಕಡೆಗೆ ಪ್ರಯಾಣ ಬೆಳೆಸಬೇಕಾಗಿ ಬಂದುದು, ನಂತರ ಆ ಹುಡುಗನ ಬದುಕಿನಲ್ಲಿ ಹೊಸದೊಂದು ಬಾಗಿಲು ತೆರೆಯಿತು.

ಭಾರತದ ವಿಜ್ಞಾನಿಗಳಲ್ಲಿ ಒಬ್ಬರಾಗಿ ಕ್ಷಿಪಣಿ ಉಡಾಯಿಸಿ, ಭಾರತದ ಕ್ಷಿಪಣಿ ಜನಕ ಎಂದು ಹೆಸರು ಪಡೆದು, ನಂತರ ಜನತೆಯ ನೆಚ್ಚಿನ ರಾಷ್ಟ್ರಪತಿಯಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಭಾರತದ ಕ್ಷಿಪಣಿ ತಂತ್ರಜ್ಞಾನದ ರೂವಾರಿ.

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ನಮ್ಮ ಪ್ರಜಾಪ್ರಭುತ್ವದ ಸಾಕ್ಷಿಪ್ರಜ್ಞೆ ಕೂಡ. ಹಸಿವು ಮತ್ತು ಬಡತನದೊಂದಿಗೆ ಹುಟ್ಟಿ ಬೆಳೆದ ಜೀವವೊಂದು ಶ್ರದ್ಧೆ, ಆಸಕ್ತಿ, ಬದ್ಧತೆಗಳನ್ನು ಹೊಂದಿದ್ದರೆ ದೇಶವೇ ಗೌರವಿಸುವ ವ್ಯಕ್ತಿಯಾಗಿ ನಿಲ್ಲಲು ಸಾಧ್ಯ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾದವರು.

ಜಾತ್ಯತೀತ ರಾಷ್ಟ್ರದ ಪ್ರಜೆಯ ಮಾದರಿ ವ್ಯಕ್ತಿತ್ವ ಹೇಗಿರಬಹುದು ಎಂಬುದಕ್ಕೆ ಡಾ.ಕಲಾಂ ಅವರು ಮಾದರಿ. ಬದುಕಿನ ಸಂಕೀರ್ಣತೆಯನ್ನು ಮತ್ತು ವರ್ತಮಾನದಲ್ಲಿನ ಧಾರ್ಮಿಕ ಸಂಘರ್ಷವನ್ನು ಮೀರಿ ಬೆಳೆದವರು ಅವರು. ಬಾಲ್ಯದಲ್ಲಿ ಮೂಡಿದ ಸಹಜ ಕುತೂಹಲದ ಬೆನ್ನತ್ತಿ ಹೊರಟ ಅವರು ತಮ್ಮ ಅಸ್ತಿತ್ವವನ್ನು ವಿಜ್ಞಾನ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಬಹುಶಃ ಅವರಲ್ಲಿದ್ದ ಆತ್ಮವಿಶ್ವಾಸವೇ ಅವರನ್ನು ಶ್ರೇಷ್ಠ ವಿಜ್ಞಾನಿಯಾಗಿ ರೂಪಿಸಿತು ಎಂದು ತೋರುತ್ತದೆ. ಯಾವುದೇ ಸತ್ಯಕ್ಕೆ ಒಳಿತು ಕೆಡುಕು ಎಂಬ ಎರಡು ಮುಖಗಳಿರುತ್ತವೆ.ಡಾ.ಕಲಾಂ ಅವರು ಒಳಿತನ್ನು ಆಶ್ರಯಿಸುತ್ತಾರೆ. ಮುಖ್ಯವಾಗಿ ವಿಜ್ಞಾನ ಸತ್ಯವನ್ನು ಮನುಕುಲದ ಹಿತಕ್ಕಾಗಿ ದುಡಿಸಿಕೊಳ್ಳುತ್ತಾರೆ. ಡಾ.ಕಲಾಂ ಅವರು ಒಬ್ಬ ಅಪ್ಪಟ ಸಂಶೋಧಕರು. ಸದಾ ಬಾಹ್ಯಾಕಾಶ ಪ್ರಯೋಗದಲ್ಲಿ ನಿರತರಾಗಿರುತ್ತಿದ್ದರು. ದೇಶದ ಪ್ರಗತಿ ಮತ್ತು ಒಳಿತಿಗಾಗಿ ಸಮಯ ಸದುಪಯೋಗಪಡಿಸಿಕೊಂಡರು. ಹೊಸ ಕ್ಷಿತಿಜವನ್ನು ಅನಾವರಣ ಮಾಡಿದರು.

ಭಾರತದ ಬೌದ್ಧಿಕ ಪರಂಪರೆಯ ಮೇರುವಾಗಿ ಬೆಳೆದು ನಿಂತರು. ಭಾರತ ದೇಶದ ಕೀರ್ತಿಯನ್ನು ವಿಶ್ವಕ್ಕೆ ವಿಸ್ತರಿಸಿದ
ಒಬ್ಬ ಮಾನವೀಯ ಮೌಲ್ಯಗಳ ಮೇರು ಪ್ರತಿನಿಧಿ. ಬದುಕಿನ ಕೊನೆವರೆಗೂ ಕುತೂಹಲಿತ ಮುಗ್ಧತೆಯನ್ನು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿಯೂ ಉಳಿಸಿಕೊಂಡಿದ್ದರು. ಹೀಗಾಗಿ ಈ ಹೊತ್ತಿಗೂ ಡಾ.ಕಲಾಂ ಅವರು ಭಾರತೀಯರ ಮನಸುಗಳಲ್ಲಿ ಚಿರಂತನವಾಗಿ ನೆಲೆ ನಿಂತಿದ್ದಾರೆ. ಡಾ. ಕಲಾಂಜೀ ಅವರು ಇಳಿವಯಸ್ಸಿ ನಲ್ಲಿಯೂ ಕನಸುಗಾರರಾಗಿದ್ದರು. ದೇಶದ ಯುವ ಜನತೆಯೇ ನಮ್ಮ ಮುಂದಿನ ರೂವಾರಿಗಳು ಎಂಬ ಬಲವಾದ ನಂಬಿಕೆ ಅವರಲ್ಲಿತ್ತು. ಅದಕ್ಕಾಗಿ ತಮ್ಮ ಪದವಿಯನ್ನೂ ಮರೆತು ಮಕ್ಕಳ ಜತೆ ಮಗುವಾಗಿರುತ್ತಿದ್ದರು. ಮಕ್ಕಳೇ ಈ ದೇಶದ ಭವಿಷ್ಯ ಎಂದು ನಂಬಿದ್ದರು. ಈ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಆಲೋಚಿಸುವಂತೆ ಮಾಡಿದರೆ ದೇಶ ತನಗೆ ತಾನೇ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕುತ್ತದೆ ಎಂದು ದೃಢವಾಗಿ ನಂಬಿದ್ದರು.

ರಾಷ್ಟ್ರಪತಿ ಭವನವನ್ನು ಒಂದು ಗಳಿಗೆಯೂ ದುರುಪಯೋಗ ಮಾಡಿಕೊಳ್ಳದೆ, ಇದು ದೇಶದ ಆಸ್ತಿ. ಪ್ರತಿಯೊಬ್ಬ ಪ್ರಜೆಗೂ ಸೇರಬೇಕಾದ ಪವಿತ್ರವಾದ ಜಾಗವೆಂದೇ ಭಾವಿಸಿದ್ದ ಅವರು ಪ್ರಾಮಾಣಿಕತೆಗೆ ಧರ್ಮ ನಿರಪೇಕ್ಷತೆಗೆ ಸರಳ-ಸಜ್ಜನಿಕೆ ಹಾಗೂ ಸ್ವಾಭಿಮಾನಕ್ಕೆ ಬಹು ದೊಡ್ಡ ಮಾದರಿಯಾಗಿದ್ದರು. ಇವರ ಈ ಮಾದರಿ ವ್ಯಕ್ತಿತ್ವ ರಾಷ್ಟ್ರಪತಿ ಭವನಕ್ಕೆ ಘನತೆ, ಗೌರವ ತಂದು ಕೊಟ್ಟಿದೆ ಹಾಗೂ ಅಪರೂಪವೆನ್ನಬಹುದಾದ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಕೊಟ್ಟಿದೆ.

ಭಾರತದ 11ನೆ ರಾಷ್ಟ್ರಪತಿಗಳಾಗಿ ತಮ್ಮ ಘನ-ಗಂಭೀರ ನಡಿಗೆಯಿಂದ, ನಿಷ್ಪಕ್ಷಪಾತ ನಿಲುವಿನಿಂದ ಅಖಂಡ ಭಾರತೀಯ ಹೃನ್ಮನಗಳನ್ನು ಗೆದ್ದ ಅನಭಿಶಿಕ್ತ ದೊರೆ ಡಾ.ಎ.ಪಿ.ಜೆ ಕಲಾಂ. ದಕ್ಷ, ಸ್ವಚ್ಛ, ಸಂಭಾವಿತ ರಾಷ್ಟ್ರಪತಿಗಳಾಗಿ ಅವರು ಈ ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಭಾರತೀಯರಾರೂ ಮರೆಯುವಂತಿಲ್ಲ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಅಬಾಲವೃದ್ಧರಾಗಿ ಪ್ರೀತಿಸುವ, ಗೌರವಿಸುವ, ಜ್ಞಾನ-ವಿಜ್ಞಾನಗಳ ಸಂಗಮ ಡಾ.ಎ.ಪಿ.ಜೆ ಅಬ್ದುಲ್ ಕಲಾಂರಂತಹ ಹೆಮ್ಮೆಯ ಪುತ್ರನನ್ನು ಪಡೆದ ಭಾರತ ಮಾತೆ ಧನ್ಯೆ.

 - ಸುಪ್ರೀತಾ ಚಕ್ಕೆರೆ
Share This Article
1 Comment