ಕಾಮನ್ವೆಲ್ತ್ನ ವಿದೇಶಾಂಗ ವ್ಯವಹಾರಗಳ ಸಚಿವರ 20ನೇ ಸಭೆಯಲ್ಲಿ ಪಾಕ್ ಭಾರತಕ್ಕೆ ಪರೋಕ್ಷವಾಗಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಭಾರತ ಸರಿಯಾದ ತಿರುಗೇಟು ನೀಡಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಎಸ್.ಎಂ. ಖುರೇಶಿ ‘ದಕ್ಷಿಣ ಏಷ್ಯಾದ ರಾಷ್ಟ್ರವು ಲಕ್ಷಾಂತರ ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು. ವಿವಾದಿತ ಭೂಪ್ರದೇಶದಲ್ಲಿ ಅಕ್ರಮ ಜನಸಂಖ್ಯಾ ಬದಲಾವಣೆಗೆ ಹೈಪರ್ ನ್ಯಾಷನಲಿಸಂನ್ನು ಉತ್ತೇಜಿಸಲಾಗಿದೆ ಮತ್ತು ಜನಾಂಗೀಯ ಉದ್ವಿಗ್ನತೆ ಬೀಜ ಬಿತ್ತಿದೆ’ ಎಂದು ಪರೋಕ್ಷವಾಗಿ ಭಾರತವನ್ನು ಆರೋಪಿಸಿದ್ದರು.
ಖುರೇಷಿ ಅವರ ಹೇಳಿಕೆಗೆ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಬದಲಾಗಿ ಉಪಸ್ಥಿತರಿದ್ದ ಎಂಇಎ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ‘ದಕ್ಷಿಣ ಏಷ್ಯಾದ ದೇಶವು ಕಾಮನ್ ವೆಲ್ತ್ ವೇದಿಕೆಯನ್ನು ತನ್ನ ಧರ್ಮಾಂಧ, ಕೆಟ್ಟ ಕಲ್ಪನೆ, ಕಿರಿದಾದ ಮತ್ತು ಏಕಪಕ್ಷೀಯ ಕಾರ್ಯಸೂಚಿಯನ್ನು ಅನುಸರಿಸಲು ಆಯ್ಕೆ ಮಾಡಿರುವುದು ದುರದೃಷ್ಟಕರ. ಅಚ್ಚರಿ ಎಂದರೆ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯ ಪ್ರಾಯೋಜಿತ ರಾಷ್ಟ್ರ ಎಂದು ಅಂಗೀಕರಿಸಲ್ಪಟ್ಟವರ ಪ್ರತಿನಿಧಿಯೊಬ್ಬರು ಹೀಗೆ ಮಾತನಾಡುವುದೇ ಎಂದು ಪ್ರಶ್ನೆ ಮಾಡಿದ್ದಾರೆ. 49 ವರ್ಷಗಳ ಹಿಂದೆ ದಕ್ಷಿಣ ಏಷ್ಯಾಕ್ಕೆ ತನ್ನದೇ ಜನರನ್ನು ಕೊಂದಾಗ ನರಮೇಧವನ್ನು ತಂದ ದೇಶದಿಂದ ನಾವು ಇಂದು ಇಂಥ ಮಾತುಗಳನ್ನು ಕೇಳುವಂತಾಗಿದೆ.’ ಎಂದು ತಿರುಗೇಟು ನೀಡಿದ್ದಾರೆ.
ಸ್ವತಃ ವಿಶ್ವಸಂಸ್ಥೆಯಿಂದಲೇ ಕಪ್ಪು ಚುಕ್ಕೆಯನ್ನಿಡಿಸಿಕೊಂಡಿರುವ ಪಾಕಿಸ್ತಾನಕ್ಕೆ, ವಿಕಾಸ್ ಸ್ವರೂಪ್ ಅವರ ಹೇಳಿಕೆ ಭಾರೀ ಮುಖಭಂಗವನ್ನುಂಟು ಮಾಡಿದೆ.