ಕೆಚ್ಚೆದೆಯ ವ್ಯಕ್ತಿತ್ವ ಬೆಳಸಿಕೊಳ್ಳಿ : ಪ್ರಬುದ್ದ ಮನಸ್ಸನ್ನು ರೂಢಿಸಿಕೊಳ್ಳಿ

Team Newsnap
2 Min Read

ನನ್ನ ಆತ್ಮೀಯರೊಬ್ಬರು ಸಮಾನತೆಯ ಶ್ರೇಷ್ಠ ಚಿಂತಕರು,
ಆದರೆ ಅವರು ಕೆಲಸ ಮಾಡುವುದು ಸಣ್ಣ ಆಫೀಸಿನಲ್ಲಿ ಲೆಕ್ಕ ಬರೆಯುವುದು,

ನನ್ನ ಪ್ರೀತಿಪಾತ್ರರೊಬ್ಬರು ಅಪಾರ ಜ್ಞಾನದ ಜಾಗೃತ ಮನಸ್ಥಿತಿಯವರು,
ಆದರೆ ಅವರು ಮಾಡುವುದು ಕಟ್ಟಡಗಳಿಗೆ ಬಣ್ಣ ಬಳಿಯುವ ಕೆಲಸ,

ನನ್ನ ಗೆಳೆಯರೊಬ್ಬರು ಮಾನವೀಯ ಕಳಕಳಿಯ ಮೃದು ಜೀವಿ,
ಆದರೆ ಅವರ ಕೆಲಸ ಹೊಟೇಲಿನಲ್ಲಿ ಅಡುಗೆ ಮಾಡುವುದು,

ನನ್ನ ಸ್ನೇಹಿತರೊಬ್ಬರು ಬಡವರ ಪರ ಅಪಾರ ಕಾಳಜಿ ಉಳ್ಳವರು,
ಆದರೆ ಅವರು ಮಾಡುವುದು ಗ್ಯಾರೇಜಿನಲ್ಲಿ ವಾಹನ ತೊಳೆಯುವುದು,

ನನ್ನ ಪರಿಚಿತರೊಬ್ಬರು ಸಾಮಾಜಿಕ ಕಳಕಳಿಯ ಪ್ರಬುದ್ಧರು,
ಆದರೆ ಅವರು ಮಾಡುವುದು ತಳ್ಳುಗಾಡಿಯಲ್ಲಿ ಇಡ್ಲಿ, ದೋಸೆ ಮಾರುವುದು,

ನನ್ನ ಗೆಳತಿಯೊಬ್ಬರು ಅತ್ಯಂತ ಮೇಧಾವಿ ಕರುಣಾ ಮನಸ್ಥಿತಿಯವರು,
ಆದರೆ ಅವರು ಮಾಡುವುದು ಬೇರೆಯವರ ಮನೆ ಕೆಲಸ,

ನನಗೆ ತಿಳಿದಿರುವ ಹುಡುಗಿಯೊಬ್ಬರ ಸಾಮಾಜಿಕ ಪ್ರಜ್ಞೆ ಆಶ್ಚರ್ಯ ಮೂಡಿಸುತ್ತದೆ,
ಅದರ ಅವರ ಕೆಲಸ ಬಟ್ಟೆ ಅಂಗಡಿಯ Sales Girl,

ಇದು ಕೇವಲ ಕೆಲವು ಸಾಂಕೇತಿಕ ಉದಾಹರಣೆಗಳು ಅಷ್ಟೆ,

ಕ್ಷಮಿಸಿ, ಈ ಉದ್ಯೋಗಗಳನ್ನು ನಾನು ಕೀಳಾಗಿ ತಿರಸ್ಕಾರದಿಂದ ನೋಡುತ್ತಿಲ್ಲ,
ಎಲ್ಲಾ ಕೆಲಸಗಳು ಶ್ರೇಷ್ಠವೇ,
ಆದರೆ,
ಈ ಸಮಾಜದ ಜಾಗೃತ ಮನಸ್ಥಿತಿಯ ಯುವಕರು ಹೊಟ್ಟೆಪಾಡಿಗಾಗಿಯೋ, ತಮ್ಮ ಕುಟುಂಬದ ಪಾಲನೆಗಾಗಿಯೋ ಈ ರೀತಿಯ ಅಧಿಕ ಶ್ರಮ ಮತ್ತು ಹೆಚ್ಚು ಸಮಯ, ಬಯಸುವ, ಹಾಗೂ ಕಡಿಮೆ ಆದಾಯದ ಕೆಲಸಗಳಲ್ಲಿ ತೊಡಗಿದರೆ,
ಸಮಾಜದ ಬದಲಾವಣೆಯ ಕನಸು ನನಸಾಗುವುದೆಂದು ?,

ಇದೆಲ್ಲಾ ಕೇವಲ ಸಮೂಹ ಮಾಧ್ಯಮದ ಚರ್ಚೆಗಳಿಗೆ ಮಾತ್ರ ಸೀಮಿತವೆ ?,

ಕೊನೆಗೆ ಗೆಲ್ಲುವುದು ಮೌಡ್ಯ ಮನಸ್ಥಿತಿಯ ಯಥಾಸ್ಥಿತಿ ವಾದಿಗಳೇ ?,

ತಕ್ಷಣಕ್ಕೆ ಇದು ನಿಜವಿರಬಹುದು,
ಆದರೆ ಜಾಗೃತಗೊಂಡ ಒಂದು ವರ್ಗ, ಸದ್ಯದಲ್ಲೇ ಆತ್ಮವಿಶ್ವಾಸದಿಂದ, ತ್ಯಾಗ ಮನೋಭಾವದಿಂದ ಭುಗಿಲೇಳಲಿದೆ,

ಆ ಸಂದರ್ಭದಲ್ಲಿ ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಅವರಿಗೆ ಹೃದಯಪೂರ್ವಕವಾಗಿ ನೀಡೋಣ,
ಅವರ ನಿಸ್ವಾರ್ಥ, ಪ್ರಾಮಾಣಿಕ ಕೆಲಸಗಳನ್ನು ಬೆಂಬಲಿಸೋಣ…

ಏಕೆಂದರೆ……..

ಬಾಲ್ಯದಲ್ಲಿ ಕಲಿತ ಮೌಲ್ಯಗಳು ವಾಸ್ತವ ಬದುಕಿನಲ್ಲಿ
ಅಪಮೌಲ್ಯಗೊಂಡು ಛಿದ್ರವಾಗುವುದನ್ನು ಕಂಡಾಗ ಸಾಯಬೇಕೆನಿಸುತ್ತದೆ.

ನಾವು ಅಪಾರವಾಗಿ ಪ್ರೀತಿಸಿದ ವ್ಯಕ್ತಿ ಹಣದ ಕಾರಣಕ್ಕೆ
ನಮ್ಮನ್ನು ತ್ಯಜಿಸಿ ಹೋದಾಗ ಬದುಕು ಬೇಡವೆನಿಸುತ್ತದೆ.

ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡದಷ್ಟು ಬಡತನ
ನಮ್ಮನ್ನು ಕಾಡಿದಾಗ ಬದುಕು ಭಾರವೆನಿಸುತ್ತದೆ.

ನಮ್ಮಲ್ಲಿ ಪ್ರತಿಭೆ ಇದ್ದರೂ ಹಣ, ಜಾತಿ, ಶಿಫಾರಸ್ಸಿನ ಪರಿಣಾಮ, ನಾವು ಅವಕಾಶ ವಂಚಿತರಾದಾಗ ಬದುಕು ಕೊನೆಯಾಗಲಿ ಎನಿಸುತ್ತದೆ.

ನ್ಯಾಯವಾಗಿ, ಸಹಜವಾಗಿ ಆಗಬೇಕಾದ ಕೆಲಸಕ್ಕೆ ಅಪಾರವಾಗಿ, ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾದಾಗ ಸಾವೇ ವಾಸಿ ಎನಿಸುತ್ತದೆ.

ಇನ್ನೊಬ್ಬರ ಬದುಕಿಗಾಗಿ ತ್ಯಾಗ ಮಾಡಿದ್ದರೂ, ಅದೇ ವ್ಯಕ್ತಿಗಳು, ವಿಶ್ವಾಸ ದ್ರೋಹ ಮಾಡಿದಾಗ ಬದುಕು ಇನ್ನು ಸಾಕೆನಿಸುತ್ತದೆ.

ಜಾತಿಯ ಕಾರಣಕ್ಕೆ ನಮ್ಮನ್ನು ತುಚ್ಚವಾಗಿ ನೋಡಿದಾಗ,
ಭೂಮಿ ಬಾಯ್ತೆರೆದು ನುಂಗಬಾರದೆ ಎನಿಸುತ್ತದೆ.

ಅಸಮರ್ಥ, ಅದಕ್ಷ, ಭ್ರಷ್ಟ ವ್ಯಕ್ತಿಗಳೇ ಹಣ,ಜಾತಿಯ ಕಾರಣಕ್ಕಾಗಿ ನಮ್ಮನ್ನು ಆಳುತ್ತಿರುವುದನ್ನು ಕಂಡಾಗ ಬದುಕಿರುವುದೇ ಪ್ರಶ್ನೆಯಾಗುತ್ತದೆ.

ನಿಜವನ್ನು ಸುಳ್ಳು ತಿಂದು, ಪ್ರೀತಿಯನ್ನು ದ್ವೇಷ ತಿಂದು,
ಸರಳತೆಯನ್ನು ಆಡಂಬರ ತಿಂದು, ಆದರ್ಶಗಳನ್ನು ಕಪಟ ನುಂಗಿ, ಧರ್ಮವನ್ನು ಅಧರ್ಮ ನುಂಗಿ, ಮನುಷ್ಯತ್ವವನ್ನು ರಾಕ್ಷಸತ್ವ ನುಂಗಿರುವಾಗ, ಬದುಕಿನ ಕೊನೆಯ ಪುಟ ಎಂದು ಬರುವುದೋ ಎನಿಸುತ್ತದೆ.

ಆದರೆ ಇದು ತಾತ್ಕಾಲಿಕ. ಕೇವಲ ಮುಖವಾಡಗಳು ಅಷ್ಟೇ.

ಮುಸುಕಿದ ಮೋಡಗಳು ಸರಿಯಲೇ ಬೇಕು.

ರಾತ್ರಿಯ ನಂತರ ಹಗಲಾಗಲೇ ಬೇಕು.

ನಮ್ಮ ನಮ್ಮ ಆತ್ಮಬಲ ಬಲಪಡಿಸಿಕೊಂಡರೆ ಇದೇನು ಅಸಾಧ್ಯವಲ್ಲ.

ನಮ್ಮ ಶುದ್ಧ, ಸ್ಚಚ್ಚ, ಸುಂದರ ವ್ಯಕ್ತಿತ್ವದ ಮುಂದೆ,
ಎಲ್ಲಾ ಮುಖವಾಡಗಳು ಕಳಚಲೇ ಬೇಕು.

ಕೆಚ್ಚೆದೆಯ ವ್ಯಕ್ತಿತ್ವ ಬೆಳೆಸಿಕೊಳ್ಳಿ. ಪ್ರಬುದ್ಧ ಮನಸ್ಸನ್ನು ರೂಡಿಸಿಕೊಳ್ಳಿ.

ಆಗ ಎಲ್ಲವೂ ಸರಳ ಸುಂದರ.

ಆ ಹೊಸ ತಂಗಾಳಿಯ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ ……

  • ವಿವೇಕಾನಂದ ಹೆಚ್ ಕೆ
Share This Article
Leave a comment