ಗುರುವಿನ ಗುಲಾಮನಾಗಬೇಕು……

Team Newsnap
3 Min Read
become devotee to your guru ಗುರುವಿನ ಗುಲಾಮನಾಗಬೇಕು
  • ನಾಳೆ ಗುರು ಪೌರ್ಣಿಮೆ
  • ನಮೋ ಗುರುಪರಂಪರಾ
WhatsApp Image 2023 07 01 at 6.05.40 PM
ಸೌಮ್ಯ ಸನತ್ ✍️.

|| ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ.
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಮಾತೃದೇವೋಭವ ,ಪಿತೃದೇವೋಭವ, ಆಚಾರ್ಯದೇವೋಭವ ಎನ್ನುವ ಶ್ಲೋಕದೊಂದಿಗೆ ಶುರುವಾಗುವ ಪೂಜಾ ಸಂಸ್ಕಾರಗಳಲ್ಲಿ ತಾಯಿ ಹಾಗು ತಂದೆಯ ನಂತರ ಪೂಜ್ಯ ಸ್ಥಾನವನ್ನು ಅಲಂಕರಿಸಿರುವವರೆಂದರೆ ಗುರುಗಳು.

ಮಕ್ಕಳ / ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳನ್ನು, ಅವುಗಳನ್ನು ಸಾಧಿಸುವ ಮಾರ್ಗಗಳನ್ನು, ಧ್ಯೇಯವನ್ನು, ವಿದ್ಯಾರ್ಥಿಗಳ ಮನಸಲ್ಲಿ ಸೃಷ್ಟಿ ಮಾಡುವವನು, ಅವು ಪಕ್ವವಾಗಿ ಬೆಳೆಯುವಂತೆ ವಿವಿಧ ತತ್ವಗಳನ್ನು ತಲೆಯಲ್ಲಿ ತುಂಬುವವನು ಮತ್ತು ದಾರಿತಪ್ಪುವ ವಿದ್ಯಾರ್ಥಿಗಳ ನಡೆ ನುಡಿಗಳನ್ನು, ವಿದ್ಯಾರ್ಥಿಗಳಲ್ಲಿನ ಕೆಟ್ಟ ಯೋಚನೆಗಳನ್ನು ನಾಶಮಾಡಿ ಸರಿಯಾದ ದಾರಿಯನ್ನು ತೋರಿ ಸುವವರೇ ಗುರುಗಳು.

ಆಷಾಡ ಮಾಸದ ಹುಣ್ಣಿಮೆಯಂದು ಗುರು ಪೌರ್ಣಮಿಯನ್ನು ಶ್ರದ್ಧಾ ಭಕ್ತಿಯಿಂದ ದೇಶದೆಲ್ಲೆಡೆ ಆಚರಿಸಲಾಗುತ್ತದೆ, ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ವೇದಗಳನ್ನು ನಾಲ್ಕು ವಿಭಾಗಗಳನ್ನು ಮಾಡಿ ವೇದಾಧ್ಯಯನಕ್ಕೆ ನಾಂದಿ ಹಾಡಿದ ದಿನ .ಆದ್ದರಿಂದ ಮಹರ್ಷಿ ವೇದವ್ಯಾಸರು ಗುರುಗಳಿಗೆ ಗುರುಗಳಾಗಿ ಪರಮ ಗುರುಗಳೆನಿಸಿದರು .ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳನ್ನು ಪರಮ ಗುರುಗಳೆಂದೇ ಪರಿಗಣಿಸಿ
ಇವರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಿ ಗುರುಪೌರ್ಣಮಿಯನ್ನು ವ್ಯಾಸಪೌರ್ಣಮಿ ಎಂದೂ ಸಹ ಆಚರಿಸಲಾಗುತ್ತದೆ.

ನಮ್ಮ ಸನಾತನ ಸಂಸ್ಕೃತಿಯಲ್ಲಿ ಗುರು ಶಿಷ್ಯರ ನಡುವಿನ ಸಂಬಂಧ ಹಾಗೂ ಗುರುವಿನ ಮಹತ್ವ ತಿಳಿಸುವ ಸಾಕಷ್ಟುಉದಾಹರಣೆಗಳಿವೆ. ಜಗದ್ಗುರುವೆನಿಸಿದ ಶ್ರೀ ಕೃಷ್ಣ
ಅರ್ಜುನನಿಗೆ ಮಾರ್ಗದರ್ಶನದ ಪ್ರೇರಕ ಶಕ್ತಿಯಾಗಿ ನೀಡಿದ ಗೀತಾಸಾರ ಮಾನವ ಇತಿಹಾಸದಲ್ಲಿ ರಾಷ್ಟ್ರೀಯತೆ, ಧರ್ಮ, ವಯಸ್ಸು ಲೆಕ್ಕಿಸದೆ ಮಾನವರಿಗೆ ಸ್ಫೂರ್ತಿಯಾಗಿ
ಇಂದಿಗೂ ಶ್ರೇಷ್ಠ ಪಾಠವಾಗಿ ಉಳಿದಿದೆ.

ಶ್ರೀ ರಾಮನನ್ನು ಮರ್ಯಾದಾ ಪುರುಷೋತ್ತಮನನ್ನಾಗಿ ಮಾರ್ಗದರ್ಶನ ನೀಡಿದವರು ರಘುವಂಶದ ಗುರುಗಳಾದ ವಸಿಷ್ಠರು.ದ್ರೋಣಾಚಾರ್ಯರನ್ನು ಗುರುಗಳೆಂದು ಸ್ವೀಕರಿಸಿ ಅವರನ್ನು ಮನದಲ್ಲಿ ಭಕ್ತಿಯಿಂದ ನೆನೆದು ಬಿಲ್ವಿದ್ಯೆ ಕಲಿತ ಏಕಲವ್ಯನ ಗುರುಭಕ್ತಿಯು ಉತ್ತುಂಗದ ಪರಾಕಾಷ್ಠೆಯನ್ನೇ ತಲಿಪಿದ್ದು ನಾವು ಮರೆಯುವಂತಿಲ್ಲ, “ಹಿಂದೆ ಗುರು ಹಾಗೂ ಮುಂದೆ ಗುರಿ” ಇರಬೇಕೆಂಬ ನಾಣ್ನುಡಿಯಂತೆ ನಾನಾ ಗೊಂದಲಗಳ ಗೂಡಾಗಿದ್ದ ವಿಜಯನಗರ ಸಾಮ್ರಾಜ್ಯ ಹಕ್ಕ ಬುಕ್ಕರು ವಿದ್ಯಾರಣ್ಯ ಗುರುಗಳ ಆಗಮನದ ತರುವಾಯ ವೈಭವಯುತ ಸಾಮ್ರಾಜ್ಯವಾಗಿದ್ದನ್ನು ನಾವು ನೆನಸಬಹುದು.

ಮೊಘಲರ ದಬ್ಬಾಳಿಕೆಯಿಂದ ಮರಾಠಿಗರನ್ನು ಬಿಡಿಸಿ ಸನಾತನ ಸಂಸ್ಕೃತಿಯನ್ನು ದೇಶದಾದ್ಯಂತ ಪುನರ್ ಪ್ರತಿಷ್ಠಾಪಿಸಲು ಛತ್ರಪತಿ ಶಿವಾಜಿಗೆ ಮಾರ್ಗದರ್ಶನ ನೀಡಿ ಅವನು ತನ್ನ ಜೀವನದಲ್ಲಿ ಅತ್ಯದ್ಭುತ ಯಶಸ್ಸು ಪಡೆಯಲು ಕಾರಣರಾದವರು ಗುರು ಸಮರ್ಥ ರಾಮದಾಸರು. ದೇವರ ಬಗ್ಗೆ ಇದ್ದ ಗೊಂದಲಗಳನ್ನೆಲ್ಲ ದೂರ ಮಾಡಿ ಗೊಂದಲಮಯ ನರೇಂದ್ರನನ್ನು ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕತೆಯ ಹಾದಿಯಲ್ಲಿ ಮಾರ್ಗದರ್ಶನ ನೀಡಿ ದೇಶ ವಿದೇಶಗಳಿಗೆ ತೆರಳಿ ಸನಾತನ ಸಂಸ್ಕೃತಿಯ ಸಾರವನ್ನು ಸಾರಿದ ಸ್ವಾಮಿ ವಿವೇಕಾನಂದರನ್ನು ಭಾರತದ ಮೊದಲ ದೇಶಭಕ್ತ ಸನ್ಯಾಸಿಯನ್ನಾಗಿ ಮಾಡಿದವರು ಶ್ರೀ
ರಾಮಕೃಷ್ಣ ಪರಮಹಂಸರು. ಕ್ರಿಕೆಟ್ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಸಚಿನ್ ತೆಂಡೂಲ್ಕರ್ ಸಹ ತಮ್ಮ ಗುರುಗಳಾದ ರಮಾಕಾಂತ್ ಆಚ್ರೆಕರ್ ಅವರನ್ನು ಇಂದಿಗೂ ಸ್ಮರಿಸುತ್ತಾರೆ ಹಾಗೂ ಗೌರವಿಸುತ್ತಾರೆ.

ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಗುರುಗಳಷ್ಟೇ ಅಲ್ಲ. ಮನೆಯಲ್ಲಿ ತಾಯಿ ತಂದೆ ಅಜ್ಜ ಅಜ್ಜಿಯರು, ಬಂಧು ಬಳಗದವರು ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನೂ, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು, ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು.

ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನಿಗೆ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರು, ರಾಜಕೀಯ ಮುತ್ಸದ್ದಿಗಳ ಜೀವನದ ವಿವಿಧ ಹಂತಗಳನ್ನು ಗಮನಿಸಿದಾಗ ಅವರ ಜೀವನದ ಪ್ರತಿಹಂತದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಗುರು ಜೊತೆಗಿದ್ದನೆಂದು ತಿಳಿಯುತ್ತದೆ.

“Technology is just a tool in terms of getting a students working together and motivating them, the teacher is the most important person. “

“ಇವತ್ತಿನ ಆಧುನಿಕ ತಂತ್ರ ಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಂದ ಮೇಲೆ ಏನೆಲ್ಲಾ ಕಲಿಯುವ ಅವಕಾಶಗಳಿವೆ ಆದರೆ ಗುರುಗಳ ಪ್ರೋತ್ಸಾಹದ, ಹಿತ ನುಡಿಗಳು ಸಿಗುವುದು ಅಸಾಧ್ಯ”.
ಮೇಲಿನ ಮಾತುಗಳಲ್ಲಿ ಗುರುವಿನ ಮಹತ್ವವ ಎಷ್ಟು ಎಂಬುದು ಅರಿವಾಗುತ್ತದೆ.

ಆದಿಗುರು ಶ್ರೀಶಂಕರಾಚಾರ್ಯರಿಂದ ಹಿಡಿದು ಇಂದಿನ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿಗಳವರೆಗೂ ಅಪಾರ ಗುರುಪರಂಪರೆಯನ್ನು ಗುರುಗಳ ಭೋಧನೆ ಹಾಗೂ ಆಶೀರ್ವಚನ ಪಡೆದ ನಮ್ಮ ಭರತ ಭೂಮಿ ನಿಜಕ್ಕೂ ಧನ್ಯ ಗುರುವಿನ ಮಹತ್ವ ಅರಿತಿದ್ದ ಪುರಂದರದಾಸರು ಜೀವನದಲ್ಲಿ ಮುಕ್ತಿಯನ್ನು ಹೊಂದಬೇಕಾದರೆ “ಗುರುವಿಗೆ ಗುಲಾಮನಾಗಬೇಕಯ್ಯಾ” ಎಂದು ಅಂದೇ ಸಾರಿದ್ದರು.

Share This Article
Leave a comment