ಮಹಿಳೆಯೊಬ್ಬರ ಶವ ಸಾಗಿಸುತ್ತಿದ್ದ ವೇಳೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ಬೈಕ್ ಅಪಘಾತಕ್ಕೀಡಾಗಿದೆ. ಇದರಿಂದ ಪತಿ ಹಾಗೂ ಪತ್ನಿಯ ಕೊಲೆಯ ರಹಸ್ಯವೊಂದು ಬಯಲಾಗಿದೆ. ಶ್ವೇತಾ ಕೊಲೆಯಾದ ಮಹಿಳೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪುರುಷರಿಬ್ಬರು ಬೈಕ್ ನಲ್ಲಿ ಮಹಿಳೆಯ ಶವ ಇಟ್ಟುಕೊಂಡು ರಾಜರಾಜೇಶ್ವರಿ ನಗರದಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.
ಇದನ್ನು ಓದಿ :PSI ನೇಮಕಾತಿ ಅಕ್ರಮ: ನಾಗಮಂಗಲ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ಬಂಧನ
ಅಪಘಾತ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಿದ್ದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅಂತೆಯೇ ಅಪಘಾತದಲ್ಲಿ ಮಹಿಳೆಗೆ ಗಾಯವಾಗಿ ಬಿದ್ದಿದ್ದಾರೆ ಎಂದು ತಿಳಿದು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಹಿಳೆಯನ್ನು ಪರೀಕ್ಷೆ ಮಾಡಿದ ವೈದ್ಯರು, ಈಕೆ ಮೃತಪಟ್ಟು ಹಲವು ಗಂಟೆಗಳೇ ಕಳೆದಿವೆ ಎಂದಿದ್ದಾರೆ.
ಇದರಿಂದ ಅನುಮಾನಗೊಂಡ ಪೊಲೀಸರು ಬೈಕ್ ಸವಾರರಾದ ನಾಗರಾಜು ಹಾಗೂ ವಿನೋದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ರಹಸ್ಯ ಬಯಲಾಗಿದೆ. ಕೊಲೆಯಾದ ಶ್ವೇತಾಗೆ ಮದುವೆ ಆದರೂ ಆಕೆ ಗಂಡನಿಂದ ದೂರವಾಗಿ ಗೆಳತಿ ದುರ್ಗ ಮನೆಯಲ್ಲಿಯೇ ಶ್ವೇತಾ ಅಶ್ರಯ ನೀಡಿದ್ದಾಳೆ.
ಇತ್ತೀಚೆಗೆ ದುರ್ಗಾ ಮನೆಯಲ್ಲಿ ಆಭರಣ ಕಳ್ಳತನವಾಗಿತ್ತು. ಇದನ್ನು ಶ್ವೇತಾಳೇ ಕದ್ದಿರುವುದಾಗಿ ಆರೋಪಿ ದುರ್ಗಾ ಕ್ಯಾತೆ ತೆಗೆದು ಸೋಮವಾರ ಇಬ್ಬರ ಮಧ್ಯೆ ಜಗಳವೂ ನಡೆದಿದೆ. ಈ ಜಗಳ ತಾರಕಕ್ಕೇರಿ ದುರ್ಗಾ, ಶ್ವೇತಾಗೆ ಮನಸ್ಸೋ ಇಚ್ಛೆ ಥಳಿಸಿದ್ದಾಳೆ. ಈ ಹಿಂಸೆಯಿಂದ ಅಸ್ವಸ್ಥಗೊಂಡ ಶ್ವೇತಾ ಅಂದು ರಾತ್ರಿಯೇ ಸಾವನ್ನಪ್ಪಿದ್ದಾಳೆ.
ಈ ವೇಳೆ ಶ್ವೇತಾಳ ಸಾವನ್ನು ಹೇಗಾದರೂ ಮಾಡಿ ಮುಚ್ಚಿ ಹಾಕಬೇಕು ಎಂದು ಪತಿ ಜೊತೆ ಸೇರಿ ದುರ್ಗಾ ಪ್ಲ್ಯಾನ್ ರೂಪಿಸಿದ್ದಾಳೆ. ಇದಕ್ಕೆ ದುರ್ಗಾ ಸಹೋದರ ಕೂಡ ಸಾಥ್ ನೀಡಿದ್ದಾನೆ. ಅಂತೆಯೇ ಅಭಿ ಹಾಗೂ ವಿನೋದ್ ಸಹಾಯ ಕೂಡ ಪಡೆದುಕೊಂಡಿದ್ದಾರೆ. ಯೋಜನೆಯಂತೆ ಮಂಗಳವಾರ ರಾತ್ರಿ ಯಾರಿಗೂ ಅನುಮಾನ ಬಾರದಂತೆ ಶವವನ್ನು ಬೈಕಿನಲ್ಲಿ ಇಟ್ಟುಕೊಂಡು ನಾಗರಾಜ್ ಹಾಗೂ ವಿನೋದ್ ರಾಜರಾಜೇಶ್ವರಿ ನಗರದಿಂದ ಹೊರಟಿದ್ದಾರೆ. ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬರುತ್ತಿದ್ದಂತೆಯೇ ಬೈಕ್ ಸ್ಕಿಡ್ ಆಗಿ ಬಿದ್ದು, ಆರೋಪಿಗಳ ನೀಚ ಕೃತ್ಯ ಬಯಲಾಗಿದೆ. ಈಗ ಮೂವರನ್ನೂ ಬಂಧಿಸಲಾಗಿದೆ.