ಬೆಂಗಳೂರಿನಲ್ಲಿ ಮೆಡಿಕಲ್‌ ಸೀಟು ಕೊಡಿಸುವ ನೆಪದಲ್ಲಿ 11 ಲಕ್ಷ ರೂ. ವಂಚನೆ..!

Team Newsnap
2 Min Read

ಎಂಬಿಬಿಎಸ್ (MBBS) ಕೊಡಿಸುವ ನೆಪದಲ್ಲಿ ಆಂಧ್ರ ಪ್ರದೇಶದ ವಿದ್ಯಾರ್ಥಿನಿಯೊಬ್ಬರ ಪೋಷಕರ ಬಳಿ 11 ಲಕ್ಷ ರೂ. ಹಣ ಪಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅನಂತಪುರ ಜಿಲ್ಲೆ ಕಲ್ಯಾಣ ದುರ್ಗ ನಿವಾಸಿ ಜಯ ಕೃಷ್ಣ ಅವರು ಮೆಡಿಕಲ್‌ ಸೀಟು ವಂಚನೆ ಕುರಿತು ಆರೋಪಿಗಳ ವಿರುದ್ಧ ಬೆಂಗಳೂರಿನ ವೈಟ್‌ ಫೀಲ್ಡ್‌ ಪೊಲೀಸರಿಗೆ ದೂರು ನೀಡಿದ್ದಾರೆ, ವರ್ತೂರಿನ ಸಿಗ್ಮಾ ಟೆಕ್‌ ಪಾರ್ಕ್‌ನಲ್ಲಿದ್ದ ವೈಸ್‌ ಮ್ಯಾಗ್ನೆಟ್‌ ಎಜುಕೇಶನ್‌ ಪ್ರೈವೇಟ್‌ ಲಿಮಿಟೆಡ್‌, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಧೀರೇಂದ್ರ ಕುಮಾರ್‌ ಜೈಸ್ವಾಲ್‌, CEO ಸಚಿನ್‌ ಸಾಬ್ಲೆ, BDE ಅನಿಕೇಶ್‌ ಎಂಬುವವರ ವಿರುದ್ಧ FIR ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಯ ಕೃಷ್ಣ ತಮ್ಮ ಪುತ್ರಿಗೆ ಬೆಂಗಳೂರು ನಗರದ ಮೆಡಿಕಲ್‌ ಕಾಲೇಜಿನಲ್ಲಿ ಎಂ ಬಿ ಬಿ ಎಸ್‌ ಸೀಟಿಗಾಗಿ ಪ್ರಯತ್ನಿಸುತ್ತಿದ್ದರು. ಮಾರ್ಚ್ 30 ರಂದು ಜಯ ಕೃಷ್ಣ ಅವರ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ ಐಶ್ವರ್ಯ ಎಂಬಾಕೆ, ದೇವನ ಹಳ್ಳಿಯ ಆಕಾಶ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ರಿಸರ್ಚ್ ಸೆಂಟರ್‌ ಕಾಲೇಜಿನಲ್ಲಿ ಮೆಡಿಕಲ್‌ ಸೀಟು ಕೊಡಿಸುವುದಾಗಿ ತಿಳಿಸಿದ್ದರು. ಜತೆಗೆ, ವೈಸ್‌ ಮ್ಯಾಗ್ನೆಟ್‌ ಎಜುಕೇಶನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಕಚೇರಿಗೆ ಆಗಮಿಸಿ ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡುವಂತೆ ತಿಳಿಸಿದ್ದರು. ಇದನ್ನು ಓದಿ – ಕೆ ಆರ್ ಪೇಟೆಯಲ್ಲಿ ಕುಖ್ಯಾತ ರೌಡಿಯನ್ನು ಭೀಕರ ಹತ್ಯೆ ಮಾಡಿದ ಐವರು ದುಷ್ಕರ್ಮಿಗಳು

ಆಕೆಯ ಮಾತು ನಂಬಿದ ಜಯ ಕೃಷ್ಣ , ವೈಸ್‌ ಮ್ಯಾಗ್ನೆಟ್‌ ಕಂಪನಿಗೆ ಆಗಮಿಸಿದಾಗ ಅಲ್ಲಿದ್ದ ಸಚಿನ್‌ ಸಾಬ್ಲೆ, ಅನಿಕೇಶ್‌ ಮೆಡಿಕಲ್‌ ಸೀಟು ಕೊಡಿಸುವ ಶುಲ್ಕವಾಗಿ ಚೆಕ್‌ ರೂಪದಲ್ಲಿ 11 ಲಕ್ಷ ರೂ. ಪಡೆದುಕೊಂಡಿದ್ದರು. ಬಳಿಕ ಏಪ್ರಿಲ್‌ 16 ರಂದು ಆಕಾಶ್‌ ಕಾಲೇಜಿನ ಬಳಿ 9 ಲಕ್ಷ ಡಿಡಿಯೊಂದಿಗೆ ಕಾಯುತ್ತಿರಿ. ನಾವು ಅಲ್ಲಿಗೆ ಬಂದು ನಿಮ್ಮ ಮಗಳಿಗೆ ಅಡ್ಮಿಶನ್‌ ಮಾಡಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಅದರಂತೆ ಏಪ್ರಿಲ್ 16 ರಂದು ಆಕಾಶ್‌ ಕಾಲೇಜಿನ ಬಳಿ ಜಯ ಕೃಷ್ಣ ತಮ್ಮ ಮಗಳ ಜತೆ ತೆರಳಿ ಸಚಿನ್‌ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನ ಬಂದು ಸಿಗ್ಮಾ ಟೆಕ್‌ ಪಾರ್ಕ್‌ನ ವೈಸ್‌ ಮ್ಯಾಗ್ನೆಟ್‌ ಕಂಪನಿ ಬಳಿ ಬಂದು ನೋಡಿದಾಗ ಕಚೇರಿ ಬೀಗ ಹಾಕಿದ್ದು, ಮೋಸ ಹೋಗಿರುವುದು ಗೊತ್ತಾಗಿದೆ. ಹಣ ವಾಪಸ್‌ ನೀಡಬಹುದು ಎಂದು ಕಾದಿದ್ದ ಜಯ ಕೃಷ್ಣ ಅವರಿಗೆ ಅದೇ ಕಂಪನಿ ಇನ್ನೂ ಹಲವರಿಗೆ ಮೆಡಿಕಲ್‌ ಸೀಟು ನೆಪದಲ್ಲಿ ಹಣ ಪಡೆದು ವಂಚಿಸಿರುವುದು ಗೊತ್ತಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a comment