ಜಮೀರ್ ಅಹಮದ್ ಗೆ ನಾಲಿಗೆ ಮೇಲೆ ಹಿಡಿತವಿಲ್ಲ- ಪ್ರಿಯಾಂಕ ಖರ್ಗೆ

Team Newsnap
1 Min Read

ಮುಂದಿನ ಸಿಎಂ ವಿಚಾರವಾಗಿ ನಮ್ಮ ಪಕ್ಷದ ಜಮೀರ್ ಅಹಮದ್ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಆದರೆ ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಹಾಗೂ ಯಾರಿಗೆ ನಾಲಿಗೆ ಮೇಲೆ ಹಿಡಿತ ಇರುತ್ತದೆಯೋ ಅವರು ಈ ರೀತಿ ಮಾತನಾಡೋದಿಲ್ಲ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಶಾಸಕರಾದವರು ಈ ರೀತಿ ಮಾತನಾಡಬಾರದು. ಈ ಮಾತು ಮುಂದಿನ ಬಾರಿ ಅಧಿಕಾರ ಹಿಡಿಯುವ ಪಕ್ಷದ ಗುರಿಗೆ ಹಿನ್ನಡೆಯಾಗುತ್ತದೆ. ಮಾತನಾಡುವವರು ಇದನ್ನು ಅರಿತುಕೊಂಡು ಮಾತನಾಡಬೇಕು ಎಂದು ಹೇಳಿದರು. ‌

ಅನಗತ್ಯ ಹಾಗೂ ಬಹಿರಂಗವಾಗಿ ಈ ವಿಚಾರ ಚರ್ಚೆ ಮಾಡದಂತೆ ಈಗಾಗಲೇ ನಮ್ಮ ಪಕ್ಷದಲ್ಲಿ ಸೂಚನೆ ನೀಡಲಾಗಿದೆ. ಆದರೂ ಕೂಡ ಈ ವಿಚಾರವಾಗಿ ಮಾತನಾಡಿದವರ ವಿರುದ್ಧ ಶಿಸ್ತು ಸಮಿತಿ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದರು.

ಮುಂದಿನ ಸಿಎಂ ವಿಚಾರವಾಗಿ ನಮ್ಮ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯ ಕೇಳಿಬರುತ್ತಿದೆ. ನಮ್ಮಲ್ಲಿ ಸಿಎಂ ಅರ್ಹತೆ ಇರುವವರು ಬಹಳ ಜನ ಇರುವುದರಿಂದ ಈ ಮಾತು ಕೇಳಿ ಬರುತ್ತಿದೆ. ಆದರೆ ಬಿಜೆಪಿಯವರಿಗೆ ಯಡಿಯೂರಪ್ಪ ಬಿಟ್ಟರೆ ಗತಿ ಇಲ್ಲ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

Share This Article
Leave a comment