ನಾನೇಕೆ ಜೆಡಿಎಸ್ ಪಕ್ಷವನ್ನು ತೊರೆದೆ : ಸಚಿವ ಕೆಸಿಎನ್

Team Newsnap
2 Min Read

ಜೆಡಿಎಸ್ ಪಕ್ಷದಲ್ಲಿ ಉಸಿರು ಕಟ್ಟುವ ವಾತಾವರಣತ್ತು. ಈ ಕಾರಣಕ್ಕಾಗಿ ನಾನು ಜೆಡಿಎಸ್ ಪಕ್ಷವನ್ನು ತೊರೆಯ ಬೇಕಾಯಿತು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ.ನಾರಾಯಣಗೌಡ ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಎಸ್.ಟಿ.ಪಿ ಮಾದರಿಯ ಜನರಲ್ ಫಂಡ್‌ನಲ್ಲಿ ಕೈಗೊಳ್ಳಲಾಗುತ್ತಿರುವ ಕಾಂಕ್ರೀಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ ನೆರೆದಿದ್ದ ಗ್ರಾಮಸ್ಥರನ್ನು ಉದ್ಧೇಶಿಸಿ ಮಾತನಾಡಿದ ಸಚಿವರು ನಾನು ಶಾಸಕ ಸ್ಥಾನದ ಅಧಿಕಾರಕ್ಕೆ ಅಂಟಿಕೊಂಡಿರಬೇಕಿಂದಿದ್ದರೆ ಜೆಡಿಎಸ್ ಭದ್ರಕೋಟೆಯಾಗಿದ್ದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮತ್ತೆ ಗೆಲ್ಲುತ್ತೇನೆ ಎಂಬ ಯಾವುದೇ ನಂಬಿಕೆ ಇರಲಿಲ್ಲ. ಆದರೂ ಸಹ ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗದೇ ಇದ್ದಮೇಲೆ ಶಾಸಕ ಸ್ಥಾನ ಏಕೆ ಬೇಕು ಎಂದು ಮನನೊಂದು ರಾಜೀನಾಮೆ ನೀಡಿ ಅಭಿವೃದ್ಧಿಗಾಗಿ ಬಿಜೆಪಿ ಸೇರಬೇಕಾಯಿತು ಎಂದು ಹೇಳಿದ್ದಾರೆ.

ನಂತರ ನಡೆದ ಉಪ ಚುನಾವಣೆಯಲ್ಲಿ ತಾಲ್ಲೂಕಿನ ಜನತೆಗೆ ನನ್ನ ಮೇಲೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟು ಆಶೀರ್ವಾದ ಮಾಡಿದ್ದೀರಿ, ಹಾಗಾಗಿ ಉಪಚುನಾವಣೆಯಲ್ಲಿ ನನಗೆ ನೀವು ಕೊಟ್ಟ ಒಂದೊಂದು ಮತವು ವ್ಯರ್ಥವಾಗದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳಾಗಿದ್ದ ಕುಮಾರಣ್ಣ ಅವರಿಗೆ ತಾಲೂಕಿನ ಅಭಿವೃದ್ಧಿಗೆ ೭೦೦ಕೋಟಿ ಅನುದಾನ ಕೇಳಿದ್ದೆ ಆದರೆ ನನ್ನ ಮಾತಿಗೆ ಕ್ಯಾರೆ ಎನ್ನದೇ ನಯಾಪೈಸೆ ಅನುದಾನ ನೀಡದೇ ನನ್ನನ್ನು ಹಾಗೂ ನನ್ನ ಕ್ಷೇತ್ರವನ್ನು ಕಡೆಗಣಿಸಿದರು. ಇದರಿಂದ ಬೇಸತ್ತು ಜೆಡಿಎಸ್ ಪಕ್ಷವನ್ನು ತೊರೆದು ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಮಣ್ಣಿನ ಮಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಏಕೈಕ ಕಾರಣಕ್ಕೆ ಬೇಷರತ್ ಬಿಜೆಪಿ ಸೇರ್ಪಡೆಯಾದೆನು. ಇದರ ಪರಿಣಾಮವಾಗಿ ತಾಲೂಕಿನ ಅಭಿವೃದ್ಧಿಗೆ ಈಗಾಗಲೇ ಸುಮಾರು 1000 ಕೋಟಿ ರೂಗಳಷ್ಟು ಅನುಧಾನ ನೀಡಿದ್ದಾರೆ. ಮುಂದೆ ಇನ್ನೂ ಹೆಚ್ಚಿನ ಅನುಧಾನ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಇನ್ನೂ ೨೦ವರ್ಷಗಳ ಕಾಲ ಬಿಜೆಪಿ ಪಕ್ಷದ್ದೇ ಆಡಳಿತ ಇರುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಾನೂ ಸೇರಿದಂದೆ ಕನಿಷ್ಠ ನಾಲ್ಕರಿಂದ ೫ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವುದು ಶತಸಿದ್ಧ ಎಂದು ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article
Leave a comment