ಸೌತ್​ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ಯಾಕೆ ಸೋತಿದ್ದು ? ಆತ್ಮಾವಲೋಕನ ಅಗತ್ಯ – ಮನೋಜ್​ ಬಾಜ್​ಪಾಯಿ

Team Newsnap
2 Min Read

ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಮುಖ್ಯಧಾರೆಯ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್​ನವರು ಕಲಿಯಬೇಕು ಎಂದು ನಟ ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

ಕನ್ನಡ ಮತ್ತು ತೆಲುಗಿನ ಸಿನಿಮಾಗಳು ಹಿಂದಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿವೆ. ‘ಕೆಜಿಎಫ್​: ಚಾಪ್ಟರ್​ 2’ (KGF 2), ‘ಪುಷ್ಪ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳು ಧೂಳೆಬ್ಬಿಸಿವೆ.

ದಕ್ಷಿಣ ಭಾರತದ ಸಿನಿಮಾಗಳ ಎದುರು ಪೈಪೋಟಿ ನೀಡಲು ಬಾಲಿವುಡ್​ ಸ್ಟಾರ್​ ಹೀರೋಗಳಿಗೂ ಸಾಧ್ಯವಾಗುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಉತ್ತರ ಭಾರತದ ಜನರು ದಕ್ಷಿಣದ ಡಬ್ಬಿಂಗ್​ ಸಿನಿಮಾಗಳಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ. ಮೂಲ ಹಿಂದಿ ಚಿತ್ರಗಳು ಸೋತು ಸುಣ್ಣ ಆಗುತ್ತಿವೆ. ಬಾಲಿವುಡ್ ಮಂದಿಗೆ ಇಂಥ ಪರಿಸ್ಥಿತಿ ಯಾಕೆ ಬಂತು ಎಂಬುದನ್ನು ಈಗ ಚರ್ಚೆ ಮಾಡಲಾಗುತ್ತಿದೆ. ಸ್ವತಃ ಬಾಲಿವುಡ್​ ಸೆಲೆಬ್ರಿಟಿಗಳೇ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಎಂದು ಮನೋಜ್​ ಬಾಜ್​ಪೇಯಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗಕ್ಕೂ ಬಾಲಿವುಡ್​ಗೂ ಇರುವ ವ್ಯತ್ಯಾಸ ಏನು ಎಂಬುದನ್ನು ಅವರು ಗುರುತಿಸಿದ್ದಾರೆ. ಸೌತ್​ ಸಿನಿಮಾಗಳನ್ನು ನೋಡಿ ಹಿಂದಿ ಚಿತ್ರರಂಗದವರು ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ.

‘ದಕ್ಷಿಣ ಭಾರತದ ಸಿನಿಮಾಗಳು ಯಾವ ಮಟ್ಟಕ್ಕೆ ಬ್ಲಾಕ್​ ಬಸ್ಟರ್​ ಆಗುತ್ತಿವೆ ಎಂದರೆ ನನ್ನ ವಿಷಯ ಬಿಡಿ, ಬಾಲಿವುಡ್​ನ ಪ್ರಮುಖ ಫಿಲ್ಮ್​ ಮೇಕರ್​ಗಳಿಗೆ ಭಯ ಹುಟ್ಟಿದೆ. ಏನು ಮಾಡಬೇಕು ಎಂಬುದೇ ಅವರಿಗೆ ತೋಚುತ್ತಿಲ್ಲ.​ ದಕ್ಷಿಣ ಭಾರತದವರು ತುಂಬ ಪ್ಯಾಷನೇಟ್​ ಆಗಿ ಸಿನಿಮಾ ಮಾಡುತ್ತಾರೆ. ಯಾವುದರಲ್ಲೂ ರಾಜಿ ಆಗಲ್ಲ. ತಾವು ಜಗತ್ತಿನ ದಿ ಬೆಸ್ಟ್​ ದೃಶ್ಯವನ್ನು ಚಿತ್ರೀಕರಿಸುತ್ತಿದ್ದೇವೆ ಎಂಬ ಭಾವನೆಯಲ್ಲೇ ಅವರು ಶೂಟಿಂಗ್​ ಮಾಡುತ್ತಾರೆ. ತುಂಬ ಆಲೋಚನೆ ಮಾಡುತ್ತಾರೆ. ಪ್ರೇಕ್ಷಕರ ಬಗ್ಗೆ ಹಗುರವಾಗಿ ಒಮ್ಮೆ ಕೂಡ ಮಾತನಾಡುವುದಿಲ್ಲ ಎಂದು ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

‘ಇದು ಮಾಸ್​ ಆಗಿದೆ, ಹಾಗಾಗಿ ನಡೆದು ಬಿಡುತ್ತೆ ಅಂತ ದಕ್ಷಿಣ ಭಾರತದವರು ಹೇಳಲ್ಲ. ಕೆಜಿಎಫ್​ 2, ಪುಷ್ಪ, ಆರ್​ಆರ್​ಆರ್​ ಸಿನಿಮಾಗಳ ಮೇಕಿಂಗ್​ ಗಮನಿಸಿ. ಅವು ತುಂಬಾ ನೀಟ್ ಆಗಿವೆ. ಮಾಡು ಇಲ್ಲವೇ ಮಡಿ ಎಂಬಂತಹ ಸನ್ನಿವೇಶ ಎಂಬ ರೀತಿಯಲ್ಲೇ ಅವರು ಪ್ರತಿ ದೃಶ್ಯದ ಚಿತ್ರೀಕರಣ ಮಾಡುತ್ತಾರೆ. ಆ ಗುಣದ ಕೊರತೆ ನಮ್ಮಲ್ಲಿ ಇದೆ. ನಾವು ಬರೀ ಹಣದ ದೃಷ್ಟಿಯಿಂದ ಸಿನಿಮಾ ಬಗ್ಗೆ ಯೋಚಿಸುತ್ತೇವೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಪ್ರಮುಖ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್​ನವರು ಕಲಿಯಬೇಕು’ ಎಂದು ಮನೋಜ್​ ಬಾಜ್​ಪಾಯಿ ಹೇಳಿದ್ದಾರೆ.

Share This Article
Leave a comment