ತಾವು ಕೇಳಿದ ಪ್ರಶ್ನೆಗೆ ಡಿಸಿಪಿ ಕಡೆ ನೋಡುತ್ತಿದ್ದ ಇನ್ಸ್ಪೆಕ್ಟರ್ರನ್ನು ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಇತ್ತೀಚಿಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರಗುಡ್ಡದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ ರವಿಶಂಕರ್ಗೆ ಕೇಳಿದಾಗ ಅವರು ಡಿಸಿಪಿ ಕಡೆ ನೋಡುತ್ತಿದ್ದರು. ಇದರಿಂದ ಕೆರಳಿದ ಸಿದ್ದು, ಪ್ರತಿ ಪ್ರಶ್ನೆಗೂ ನೀವು (ರವಿಶಂಕರ್) ಡಿಸಿಪಿ ಪ್ರದೀಪ್ ಗುಂಟಿ ಮುಖ ನೋಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಘಟನೆ ನಡೆಯುವುದಕ್ಕೆ ಮೊದಲು ಈ ಜಾಗಕ್ಕೆ ಎಷ್ಟು ಸಲ ಬಂದಿದ್ದೀರಿ? ಸೆರೆ ಸಿಕ್ಕವರು ಹ್ಯಾಬಿಚಿಯುಲ್ ಅಫೆಂಡರ್ಸಾ? ಈ ಜಾಗದಿಂದ ರಿಂಗ್ ರಸ್ತೆ ಎಷ್ಟು ದೂರವಾಗುತ್ತೆ ಎಂಬ ಪ್ರಶ್ನೆಗಳಿಗೆ ಇನ್ಸ್ಪೆಕ್ಟರ್ ಸರಿಯಾಗಿ ಉತ್ತರಿಸದೇ ತಮ್ಮ ಹಿರಿಯ ಅಧಿಕಾರಿಗಳತ್ತ ನೋಡುತ್ತಿದ್ದರಿಂದ ಸಿದ್ದು ಗರಂ ಆದರು. ಎಲ್ಲ ಮುಗಿದ ಮೇಲೆ ಗರುಡಾ ವಾಹನ ಓಡಾಡಿದರೆ ಏನು ಪ್ರಯೋಜನ ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಘಟನೆ ನಡೆದ ಕೆಲವು ಗಂಟೆಗಳಲ್ಲಿ ವಿಷಯ ತಿಳಿದರೂ ಪೊಲೀಸರು ಪ್ರಕರಣ ದಾಖಲಿಸಲು 15 ತಾಸು ವಿಳಂಬ ಮಾಡಿದ್ದು ಏಕೆ ಎಂದು ಅವರು ಕೇಳಿದರು.
ತುಂತುರು ಮಳೆ ಇದ್ದ ಕಾರಣ ಸಿದ್ದರಾಮಯ್ಯ ಅವರೇ ಛತ್ರಿಯನ್ನು ಹಿಡಿದುಕೊಂಡು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮತ್ತಿತರರು ಇದ್ದರು.