ಕೊಡಗು ಜಿಲ್ಲಾಧಿಕಾರಿ ಜಲಾಶಯಕ್ಕೆ ಧುಮುಕಿದ್ದೇಕೆ? ಪ್ರವಾಹದ ವೇಳೆ ರಕ್ಷಣೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆ

Team Newsnap
2 Min Read
Why did the District Collector dive into the reservoir? Demonstration of flood protection measures

ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ವಿಶೇಷ ಸಿದ್ಧತೆ ಮಾಡಬೇಕಾಗಿರುವುದು ಅನಿವಾರ್ಯವಾಗಿ ಹೋಗಿದೆ. ಪ್ರವಾಹ ಮತ್ತು ಭೂಕುಸಿತ ಎದುರಾಗುತ್ತಲೇ ಇರುವುದರಿಂದ ಅಂತಹ ಸ್ಥಿತಿಗಳನ್ನು ಎದುರಿಸುವುದಕ್ಕಾಗಿ ಜಿಲ್ಲಾಡಳಿತ ಅಣಕು ರಕ್ಷಣಾ ಕಾರ್ಯ ನಡೆಸುವ ಮೂಲಕ ಜಿಲ್ಲೆಯ ಪೊಲೀಸ್, ಅಗ್ನಿಶಾಮಕ ಮತ್ತು ಎಲ್ಲಾ ಅಧಿಕಾರಿಗಳನ್ನು ಅದಕ್ಕಾಗಿ ಸಿದ್ಧತೆ ಮಾಡುತ್ತಿದೆ.

ಇದನ್ನು ಓದಿ –ಹಿಂದೂ ಮಹಾಸಾಗರದಲ್ಲಿ ಸುನಾಮಿ ಎಚ್ಚರಿಕೆ; 6.1 ತೀವ್ರತೆಯ ಭೂಕಂಪ

ಅಣಕು ರಕ್ಷಣಾ ಕಾರ್ಯ

ಗುರುವಾರ ಕೂಡ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ ಜಿಲ್ಲಾಡಳಿತ ಮಳೆಗಾಲದಲ್ಲಿ ಪ್ರವಾಹ ಎದುರಾದರೆ ಅವರನ್ನು ರಕ್ಷಿಸುವುದು ಹೇಗೆ,? ಮತ್ತು ಅದಕ್ಕೆ ನಾವೆಷ್ಟು ಸಿದ್ಧರಿದ್ದೇವೆ ಎಂದು ಅಣಕು ರಕ್ಷಣಾ ಕಾರ್ಯ ಮಾಡಿ ಪರಿಶೀಲನೆ ಮಾಡಿಕೊಂಡಿದೆ.

ಹಾರಂಗಿ ಹಿನ್ನೀರಿಗೆ ಇಳಿದ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯ ಹತ್ತಾರು ಸಿಬ್ಬಂದಿ ಪ್ರವಾಹದ ನೀರಿನಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡುವುದು ಹೇಗೆ ಎನ್ನುವುದನ್ನು ಪ್ರಯೋಗಿಕವಾಗಿ ರಕ್ಷಣಾ ಕಾರ್ಯವನ್ನು ಮಾಡಿತು.

ಒಂದು ವೇಳೆ ಪ್ರವಾಹದಲ್ಲಿ ಸಿಲುಕಿಕೊಂಡು ಕರೆ ಬಂತೆಂದರೆ ರಕ್ಷಣಾ ಸಿಬ್ಬಂದಿ ಹೇಗೆ ಸಿದ್ಧವಾಗಿರುತ್ತಾರೆ, ಎಷ್ಟು ಬೋಟುಗಳು ರೆಡಿ ಇರುತ್ತವೆ. ಮತ್ತು ಎಷ್ಟು ವೇಗವಾಗಿ ಕಾರ್ಯಾಚರಣೆ ನಡೆಸುತ್ತವೆ ಎಂಬುದನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರಿಗೆ ಅಗ್ನಿಶಾಮಕ ದಳದ ಅಧಿಕಾರಿ ಚಂದನ್ ಮಾಹಿತಿ ನೀಡಿದರು.

ಸ್ವತಃ ನೀರಿಗೆ ಹಾರಿದ ಜಿಲ್ಲಾಧಿಕಾರಿ

ಜೊತೆಗೆ ಪ್ರವಾಹದ ನೀರಿನಲ್ಲೇ ಸಿಲುಕಿದ್ದವರನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂಬುದನ್ನು ಪರಿಶೀಲಿಸುವುದಕ್ಕೆ ಸ್ವತಃ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರೇ ಹಾರಂಗಿ ಜಲಾಶಯದ ಹಿನ್ನೀರಿಗೆ ಧುಮುಕಿದ್ದರು. ಅವರ ಹಿಂದೆಯೇ ಮೋಟಾರು ಬೋಟಿನಲ್ಲಿ ತೆರಳುತ್ತಿದ್ದ ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾದರು. ಕೂಡಲೇ ಲೈಫ್ ಜಾಕೆಟ್‍ಗಳನ್ನು ನೀಡಿ ಅವರನ್ನು ರಕ್ಷಣೆ ಮಾಡುವ ಕೆಲಸ ನಡೆಯಿತು.

ಇದಾಗುತ್ತಿದ್ದಂತೆ ಅಪಾಯದ ಸೈರನ್ ಹೊಡೆಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಎರಡು ನಿಮಿಷದಲ್ಲಿ ಬೋಟುಗಳನ್ನು ರೆಡಿಮಾಡಿಕೊಂಡು ಹಾರಂಗಿ ಜಲಾಶಯದ ಹಿನ್ನೀರನ್ನು ದಾಟಿ ಮತ್ತೊಂದು ದಡದಲ್ಲಿ ಇದ್ದ ಮಡಿಕೇರಿ ತಹಸೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳನ್ನು ರಕ್ಷಿಸಿ ಈ ದಡಕ್ಕೆ ಸೇರಿಸಿದರು.

2018 ರಿಂದಲೂ ನಿರಂತರ ಪ್ರವಾಹ, ಅದಕ್ಕಾಗಿ ಪೂರ್ವ ಸಿದ್ಧತೆ

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ 2018 ರಿಂದಲೂ ನಿರಂತರವಾಗಿ ಪ್ರವಾಹ ಮತ್ತು ಭೂಕುಸಿತ ನಡೆಯುತ್ತಲೇ ಇದೆ. ನೀರಿನಲ್ಲಿ ಮುಳುಗಿದರೆ ಹೇಗೆ ತಕ್ಷಣವೇ ರಕ್ಷಣ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತರಬೇತಿ ಮಾಡುತಿದ್ದೇವೆ.

ಭಾರತೀಯ ಭೂವಿಜ್ಞಾನ ಇಲಾಖೆ ಈಗಾಗಲೇ ಸರ್ವೆ ಮಾಡಿ ಜಿಲ್ಲೆ ಯಾವ ಭಾಗದಲ್ಲಿ ಭೂಕುಸಿತ ಮತ್ತು ಪ್ರವಾಹ ಎದುರಾಗಬಹುದು ಎಂಬುದನ್ನು ಅಧ್ಯಯನ ಮಾಡಿದೆ. ಜೊತೆಗೆ ಈ ಹಿಂದೆ ಭೂಕುಸಿತ ಮತ್ತು ಪ್ರವಾಹ ಆಗಿರುವ ಸ್ಥಳಗಳು ಈಗಾಗಲೇ ವೀಕ್ ಝೋನ್ಸ್ ಎಂದು ಗುರುತಿಸಿದೆ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಎನ್‍ಡಿಆರ್ ಎಫ್ ತಂಡದಿಂದ ತರಬೇತಿ

ಜಿಲ್ಲಾ ವಿಪತ್ತು ನಿರ್ವಹಣಾ ತಂಡದ ಅಧಿಕಾರಿ ಅನನ್ಯ ವಾಸುದೇವ್ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಎನ್‍ಡಿಆರ್ ಎಫ್ ತಂಡದಿಂದ ತರಬೇತಿ ಕೊಡಿಸಲಾಗಿದೆ.

ಸದ್ಯ ಜಿಲ್ಲೆಯ ಜನರ ರಕ್ಷಣೆಗೆ ಬೇಕಾದ ಅಗತ್ಯ ಸಲಕರಣೆಗಳನ್ನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಕೇರಳಕ್ಕೆ ಮುಂಗಾರು ಎಂಟ್ರಿಯಾಗಲಿದ್ದು, ಅದರ ನಂತರದ ನಾಲ್ಕೈದು ದಿನಗಳಲ್ಲಿ ಮುಂಗಾರು ಜಿಲ್ಲೆಗೆ ಎಂಟ್ರಿಯಾಗಬಹುದು. ಅದಕ್ಕಾಗಿ ನಾವು ಮುಂಜಾಗ್ರತೆ ಇದ್ದೇವೆ ಎಂದು ಹೇಳಿದ್ದಾರೆ.

Share This Article
Leave a comment