ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಅವರ ದೊಡ್ಡಪ್ಪ ರೇವಣ್ಣನೇ ಕಾರಣ ಎಂದು ಸಚಿವ ಕೆ.ಸಿ ನಾರಾಯಣ ಗೌಡ ಭಾನುವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂತ್ರಿ, ನಿಖಿಲ್ ಕುಮಾರಸ್ವಾಮಿ ಬಗ್ಗೆ ಗೌರವ ಇದೆ, ಅವರು ಸುಮ್ಮನೆ ಮಾತಾಡೋದು ತಪ್ಪು. ನಿಖಿಲ್ ಚಿಕ್ಕ ರಾಜಕಾರಣಿ ಅವರು, ಕುಮಾರಸ್ವಾಮಿ ಸುಪುತ್ರ. ಪ್ರತಿಯೊಂದು ಮಾಹಿತಿ ಪಡೆದು ಮಾತನಾಡಬೇಕು ಎಂದರು.
ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪ ಲೋಕೋಪಯೋಗಿ ಮಂತ್ರಿ ಆಗಿದ್ದರು. ಅವರ ದೊಡ್ಡಪ್ಪನೇ ಇಂಧನ ಸಚಿವರಾಗಿದ್ದರೂ ಕೂಡ ಜಿಲ್ಲೆಗೆ ಸಾವಿರಾರು ಸಬ್ ಸ್ಟೇಷನ್ ಕೊಟ್ಟರು ಅಂತ ಹೇಳ್ತಿದ್ದಾರೆ. ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ..? ಒಂದೇ ಒಂದು ತೋರಿಸಲಿ ಎಂದು ಸವಾಲೆಸೆದರು.
ನಿಖಿಲ್ ಕುಮಾರಸ್ವಾಮಿ ಸೋಲಬೇಕಾದ್ರೆ ಕೆಲಸಗಳು ಕಾರಣ. ಕುಮಾರಸ್ವಾಮಿ ಖಾಲಿ ಪೇಪರ್ ನಲ್ಲಿ ಹೇಳ್ಕೊಂಡು ಬಂದ್ರು, ಇಷ್ಟು ಸಾವಿರ ಕೋಟಿ ಕೊಡ್ತೀವಿ ಅಂತಾರೆ ರೇವಣ್ಣ ಅವರು ಲೆಟರ್ ಹೆಡ್ ನಲ್ಲಿ ಹಣ ಹೊಡ್ಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡ್ಕೊಂಡ್ರು. ಅಲ್ಲಿ ಅವರ ಮಗನ ಗೆಲ್ಲಿಸಿಕೊಂಡ್ರು, ನಿಖಿಲ್ ನ ಸೋಲಿಸಿದ್ರು. ಅದಕ್ಕಿಂತ ಪಾಠ ಬೇಕಾ ನಮ್ಮ ನಿಖಿಲ್ ಕುಮಾರಣ್ಣಂಗೆ. ನಿಖಿಲ್ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದು ಸಲಹೆ ನೀಡಿದರು.