ನಾಳೆ ಎಂಬುದು ಸುಳ್ಳು……

Team Newsnap
3 Min Read

(ಬ್ಯಾಂಕರ್ಸ್ ಡೈರಿ)

ಈಗ್ಗೆ ಒಂದೂವರೆ ವರ್ಷದ ಹಿಂದೆಯಷ್ಟೇ ನನಗೆ ಮಂಡ್ಯ ನಗರದಿಂದ ಕೆರಗೋಡು ಶಾಖೆಗೆ ವರ್ಗ ಆಗಿದ್ದು. ಆ ಊರಿಗೆ ವರ್ಗ ಆಗಿದೆ ಎಂದು ತಿಳಿದ ದಿನದಿಂದ ಬಹುತೇಕ ಒಂದು ವಾರ ನನಗೆ ಸರಿಯಾಗಿ ನಿದ್ದೆ ಇರಲಿಲ್ಲ. ಮನುಷ್ಯ ಹಾಗೆಯೇ ಅಲ್ಲವೇ ? ಯಾವ ಬದಲಾವಣೆಗೂ ಸುಲಭವಾಗಿ ಒಗ್ಗುವುದಿಲ್ಲ. ಪ್ರತಿರೋಧವಿದ್ದೇ ಇರುತ್ತದೆ. ಬದಲಾವಣೆ ಜಗದ ನಿಯಮ ಎಂದು ತಿಳಿದಿದ್ದರೂ ಕೊಸರಾಡುತ್ತೇವೆ.

IMG 20180306 WA0008 1 edited
ಡಾ. ಶುಭಶ್ರೀ ಪ್ರಸಾದ್ , ಮಂಡ್ಯ

ನಾನೂ ಹಾಗೆಯೇ. ಬಿಸಿಲು, ಮಳೆ, ಚಳಿಯಲ್ಲಿ ಅಷ್ಟು ದೂರ ಹೇಗೆ ಹೋಗುತ್ತೇನೋ ? ಮಧ್ಯೆ ಗಾಡಿ ಕೈಕೊಟ್ಟರೆ ಗತಿ ಏನು ? ವಿಪರೀತ ಮಳೆ ಬಂದರೆ ಅಲ್ಲಿ ಗಾಡಿ ನಿಲ್ಲಿಸುವುದು ಹೇಗೆ ? ಎಂಬೆಲ್ಲಾ ಪ್ರಶ್ನೆಗಳಿಂದ ನನ್ನ ತಲೆ ತುಂಬಿಹೋಗಿತ್ತು. ಆದರೂ ಅನಿವಾರ್ಯವಾಗಿ ಅಲ್ಲಿಗೆ ಹೋಗಬೇಕಾಯಿತು. ಹದಿನೈದು ದಿನ ಕಳೆಯುವಷ್ಟರಲ್ಲಿ ನಾನು ಅಲ್ಲಿಗೆ ಹೊಂದಿಕೊಂಡುಬಿಟ್ಟಿದ್ದೆ. ಹಾದಿಯುದ್ದಕ್ಕೂ ಹಸಿರಿನ ರಾಶಿ, ಕಾಲುವೆಗಳು, ಗದ್ದೆಗಳಲ್ಲಿ ದುಡಿವ ರೈತರು, ಎತ್ತಿನ ಗಾಡಿಗಳು, ಕಬ್ಬು ತುಂಬಿದ ವಾಹನಗಳು, ರಾಸುಗಳ ಮೇವಿಗೆಂದು ಹುಲ್ಲು ಹೊತ್ತೊಯ್ವ ಮಂದಿ ನನ್ನ ಕಣ್ಣಿಗೆ ಪ್ರಿಯವಾಗಿಹೋಯಿತು. ಎಲ್ಲಕ್ಕಿಂತ ಮಿಗಿಲಾಗಿ ಹಾದಿಯಲ್ಲಿ ರ‍್ಶನ ಕೊಡುವ ನವಿಲುಗಳು. ನಾನಂತೂ ಅಲ್ಲಲ್ಲಿ ನಿಂತು ನವಿಲುಗಳನ್ನು ನೋಡಿ ತಣಿಯುತ್ತಿದ್ದೆ.
ಅಲ್ಲಿನ ಪಂಚಲಿಂಗೇಶ್ವರ ದೇಗುಲ ಮೊದಲ್ಗೊಂಡು ಅನೇಕ ದೇವಾಲಯಗಳು ಸೊಗಸು. ನಮ್ಮ ಬ್ಯಾಂಕೂ ಚಂದ, ಅದರ ಗ್ರಾಹಕರೂ…

ಅಲ್ಲಿನ ಅನೇಕರು ಆತ್ಮೀಯರಾದರು. ನನ್ನನ್ನು ತಮ್ಮ ಮನೆಯವಳಂತೆ ಕಂಡರು. ಕೆಲವರಂತೂ ನೀವು ರಿಟೈರ್ ಆಗುವ ತನಕ ಇಲ್ಲಿಂದ ಹೋಗಬಾರದು ಎಂದು ತಾಕೀತು ಮಾಡುತ್ತಿದ್ದರು. ಅದರಲ್ಲಿ ಕಮಲಮ್ಮನೂ ಒಬ್ಬರು.

ಕಮಲಮ್ಮ ನನಕ್ಕಿಂತ ಚಿಕ್ಕವರು. ಆದರೂ ಬೆಳೆದ ಮಕ್ಕಳು ಮೊಮ್ಮಕ್ಕಳು ಇದ್ದರು. ಅದು ಹೇಗೋ ಬಾಂಧವ್ಯ ಬೆಸೆಯಿತು. ನನ್ನ ನೋಡಲೆಂದೇ ಆಗಾಗ ಬರುತ್ತಿದ್ದರು. ಬಂದಾಗಲೆಲ್ಲ “ನೀವು ನಿವೃತ್ತಿಯಾಗುವ ತನಕ ಈ ಶಾಖೆ ಬಿಟ್ಟು ಹೋಗಬಾರದು” ಎನ್ನುತ್ತಿದ್ದರು. ಇದ್ದ ಒಂದೂಕಾಲು ವರ್ಷದಲ್ಲಿ ಒಂದು ತಿಂಗಳು ಕಛೇರಿ ಕಾರ್ಯ ನಿಮಿತ್ತ ಬೇರೆ ಊರಿನಲ್ಲಿ ಕೆಲಸ ನಿರ್ವಹಿಸಿದ್ದೆ. ಆ ಸಮಯದಲ್ಲಿ ಬಹುತೇಕರು ನನ್ನ ಗೈರುಹಾಜರಿಯನ್ನು ಅನುಭವಿಸಿದರೆಂದು ಹೇಳುತ್ತಿದ್ದರು. ಅಂತೆಯೇ ಕಮಲಮ್ಮ “ನನ್ನನ್ನು ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂದೀತು ನಿಮಗೆ. ನಿಮ್ಮ ಜೊತೆ ಟೂ” ಎಂದು ಹೇಳುತ್ತಿದ್ದರು. ಅದೊಂದು ದಿನ ಆಕೆ ನೈಟಿಯ ಮೇಲೆ ಟವೆಲ್ ಹೊದ್ದು ಬ್ಯಾಂಕಿಗೆ ಬಂದಿದ್ದರು. ಸಲುಗೆಯಲ್ಲಿ “ಶಾಲು ಹೊದೆಯಬಾರದೇ” ಎಂದು ಕೇಳಿದ್ದೆ. ಅದಕ್ಕಾಕೆ ನಕ್ಕರು. “ನಾನೇ ತಂದು ಕೊಡುವೆ” ಎಂದು ಹೇಳಿದೆ. ಅವರ ಪಕ್ಕದಲ್ಲಿದ್ದ ಅವರ ಓರಗಿತ್ತಿ “ನನಗೂ ಒಂದು” ಎಂದರು. “ಖಂಡಿತಾ” ಎಂದು ನನ್ನ ಉತ್ತರ. ಆಕೆಯ ಓರಗಿತ್ತಿಯೂ ವಾರಕ್ಕೊಮ್ಮೆಯಾದರೂ ಬರುವ ನಮ್ಮ ಶಾಖೆಯ ಗ್ರಾಹಕರೇ.

“ನೀವು ಕೊಟ್ಟ ಶಾಲನ್ನು ನಾನಿರುವ ತನಕ ಪ್ರೀತಿಯಿಂದ ಹೊದೆಯುತ್ತೇನೆ” ಎಂದರು. ಕಮಲಮ್ಮ ಅದಕ್ಕೆ ಪ್ರತಿಯಾಗಿ “ನಿಮಗೊಂದು ಹೂ ಬುಟ್ಟಿ ಹೆಣೆದು ಕೊಡುವೆ. ದೇವರ ಪೂಜೆ ಮಾಡುವಾಗ ನಿತ್ಯವೂ ನನ್ನ ನೆನಪಾಗಲಿ” ಎಂದರು.

ನನಗೆ ಇದ್ದಕ್ಕಿದ್ದ ಹಾಗೆ ವರ್ಗವಾಯಿತು. ಯಾರಿಗೂ ತಿಳಿಸಲು ಸಮಯವೂ ಸಿಗಲಿಲ್ಲ. ಆದರೆ ಶಾಲು ಕೊಡುತ್ತೇನೆಂದು ಕೊಟ್ಟ ಮಾತು ನೆನಪಿಗೆ ಬಂತು. ಆದರೆ ಗಡಿಬಿಡಿಯಲ್ಲಿ ಅದನ್ನು ಪೂರೈಸಲಿಲ್ಲ. ಮತ್ತೆಂದಾದರೂ ಹೋಗಿ ಕೊಡಬಹುದೆಂಬ ಸಮಾಧಾನವನ್ನು ನನಗೆ ನಾನೇ ಮಾಡಿಕೊಂಡೆ.ಮೈಸೂರಿನ ಚಾಮುಂಡಿಪುರಂನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಇದಾಗಿ ಎರಡು ವಾರಗಳಾಗಿವೆ. ಮೊನ್ನೆ ಬೆಂಗಳೂರಿಗೆ ಕುಟುಂಬ ಸಮಾರಂಭವೊಂದರ ನಿಮಿತ್ತ ಹೋದಾಗ ನನಗೊಂದು ಕರೆ ಬಂತು. ಆ ಕರೆ ಅಪರಿಚಿತ ಸಂಖ್ಯೆಯದ್ದಾಗಿತ್ತು. ಕರೆ ಸ್ವೀಕರಿಸಿ ಮಾತನಾಡಿದಾಗ ಆಕೆ “ನಾನು ಲಕ್ಷ್ಮಮ್ಮಮರಿಲಿಂಗನದೊಡ್ಡಿಯಿಂದ” ಎಂದರು. ಕೂಡಲೇ ನಾನು “ಓಹ್ ಕಮಲಮ್ಮನವರ ಓರೆಗಿತ್ತಿಯಲ್ಲವೇ” ಎಂದೆ. ಆಕೆ ಹೌದೆಂದರು. “ನಿಮಗೆ ವಿಷಯ ಗೊತ್ತಿಲ್ಲವಾ ಅಂದ್ರು.” “ಏನು ವಿಷಯ” ಎಂದು ಕೇಳಿದೆ. “ಕಮಲಮ್ಮ ತೀರಿಕೊಂಡರು ಲೋ ಬಿಪಿಯಿಂದ” ಎಂದರು. ನನಗೆ ಶಾಕ್. ಮತ್ತೇನೂ ಮಾತಿಲ್ಲ ನನ್ನಲ್ಲಿ. “ನಾಳೆ ಕಾರ್ಯ ಬನ್ನಿ” ಎಂದರು ಆಕೆ. ಮುಂದೆ ಮನಸ್ಸಿನ ತುಂಬೆಲ್ಲಾ ಕಮಲಮ್ಮನೇ. ಹರಿವ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಮಾನವ ಸಂಬಂಧ ಎನಿಸಿದರೆ ಹಾಗೇ ತಾನೇ..?

ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗಿಲ್ಲವೆಂಬ ಅಪರಾಧಿ ಪ್ರಜ್ಞೆ ಕಾಡುತ್ತಲೇ ಇದೆ.

ಅಂದುಕೊಂಡದ್ದನ್ನು ಆಗಲೇ ಮಾಡದಿದ್ದರೆ ನಾಳೆ ಎಂಬುದು ಸುಳ್ಳೇ.

Share This Article
Leave a comment