ಬಸವರಾಜ ಬೊಮ್ಮಾಯಿ ಇಂದು 11 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರ ಜೊತೆ ಮಾತನಾಡಿ, ಇಂದು ನಾನು ಒಬ್ಬನೇ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದೇನೆ. ಇದಕ್ಕೂ ಮುನ್ನ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿದರು.
ಧರ್ಮೇಂದ್ರ ಪ್ರಧಾನ್ ಅವರ ಬಳಿ ಚರ್ಚೆ ನಡೆಸಿದ ಬಳಿಕ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದೇನೆ. ಇದಾದ ಮೇಲೆ ಸಣ್ಣ ಕ್ಯಾಬಿನೇಟ್ ರಚನೆ ಮಾಡಲಿದ್ದೇನೆ. ಇಂದು ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಾಜ್ಯದಲ್ಲಿ ಎದುರಾಗಿರುವ ನೆರೆ ಹಾಗೂ ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಶೀಘ್ರವೇ ಕ್ಯಾಬಿನೆಟ್ ವಿಸ್ತರಣೆಯೂ ನಡೆಯಲಿದೆ. ಇವತ್ತು ಎಲ್ಲವನ್ನೂ ಚರ್ಚೆ ನಡೆಸಿ ನಿರ್ಧಾರ ಮಾಡಲಿದ್ದೇನೆ. ಸದ್ಯ ದೇವರ ದರ್ಶನ ಪಡೆದು ಕೆಕೆ ಗೆಸ್ಟ್ ಹೌಸ್ಗೆ ತೆರಳಲಿದ್ದೇನೆ. ರಾಜ್ಯ ಪ್ರವಾಸ ಮಾಡಿ ಉತ್ತಮ ಆಡಳಿತ ನೀಡುವ ಬಗ್ಗೆ ಅಧಿಕಾರಗಳ ಸಭೆಯಲ್ಲಿ ಕೆಲವು ಸೂಚನೆಗಳನ್ನು ನೀಡಲಿದ್ದೇನೆ ಎಂದು ತಿಳಿಸಿದರು.