ಕೆರೆಯ ದಡದಲ್ಲಿ ಸೆಲ್ಪಿ ತೆಗೆಯುವ ವೇಳೆ ಕಾಲು ಜಾರಿ ಮೂವರು ಸಹೋದರಿಯರು ಜಲ‌ ಸಮಾಧಿ‌

Team Newsnap
1 Min Read

ಕೆರೆಯ ದಡದಲ್ಲಿ ನಿಂತು ಸೆಲ್ಪಿ ತೆಗೆಯುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಮೂವರು ಸಹೋದರಿಯರು ಜಲ ಸಮಾಧಿಯಾದ ಘಟನೆ ತೆಲಂಗಾಣದ ನಿರ್ಮಲ್‌ ಜಿಲ್ಲೆಯ ಸಿಂಗಂಗಾವ್‌ ನಲ್ಲಿ ನಡೆದಿದೆ.

ಎಲಿಮ್ ಸುನೀತಾ (16 ), ಆಕೆಯ ಸಹೋದರಿ ವೈಶಾಲಿ (14) ಮತ್ತು ಅವರ ಸೋದರಸಂಬಂಧಿ ಅಂಜಲಿ (14) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಪಿ ಪೋಟೋಗಳನ್ನು ಅಪ್‌ ಲೋಡ್‌ ಮಾಡುವ ಸಲುವಾಗಿ ಮೂವರು ಸಹೋದರಿಯರು ಕೆರೆಯ ಸಮೀಪದಲ್ಲಿ ಸೆಲ್ಪಿ ಕ್ಲಿಕ್ಕಿಸುವ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.

ತಾಯಿ ಮಂಗಳಾಬಾಯಿ ಜೊತೆಯಲ್ಲಿ ಸುನಿತಾ, ವೈಶಾಲಿ ಹಾಗೂ ಅಂಜಲಿ ತೋಟಕ್ಕೆ ಬಂದಿದ್ದರು. ಮಧ್ಯಾಹ್ನದ ವರೆಗೂ ಕೃಷಿ ಕೆಲಸ ಮಾಡಿ ನಂತರ ಕೆರೆಯ ಬಳಿಯಲ್ಲಿ ಸೆಲ್ಪಿ ಕ್ಲಿಕ್ಕಿಸಲು ತೆರಳಿದ್ದರು.

ಈ ವೇಳೆಯಲ್ಲಿ ಮೂವರು ಕೆರೆ ಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೆ ತಾಯಿ ಕೆಲಸ ಮುಗಿಸಿ ಕೊಂಡು ಕೆರೆಯ ಬಳಿಗೆ ಬಂದು ನೋಡಿದಾಗ ಅಲ್ಲಿ ಮಕ್ಕಳು ಇರಲಿಲ್ಲ. ಹೀಗಾಗಿ ಮಕ್ಕಳು ಮನೆಗೆ ತೆರಳಿರಬಹುದು ಅಂತಾ ಬಾವಿಸಿ ಮನೆಗೆ ತೆರಳಿದ್ದರು. ಆದರೆ ಮನೆಯಲ್ಲಿ ಮಕ್ಕಳ ಇಲ್ಲದಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಎಲ್ಲೆಡೆ ಹುಡುಕಾಡಿದ ನಂತರದಲ್ಲಿ ಸಹೋದರಿಯರು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ.

ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಬಾಲಕಿಯರ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Share This Article
Leave a comment