ಬೆಂಗಳೂರಿನ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆಗಳಿಂದ ಗಾಂಜಾ ಮಾರಾಟ ಆರೋಪ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ಸಿಎಂ ಖಾಸಗಿ ನಿವಾಸದ ಬಳಿ ಭದ್ರತೆಗೆಂದು ನಿಯೋಜಿಸಲಾಗಿದ್ದ ಕೋರಮಂಗಲ ಠಾಣೆಯ ಶಿವಕುಮಾರ್ ಮತ್ತು ಸಂತೋಷ್ ಎಂಬ ಪೇದೆಗಳು ಗಾಂಜಾ ಡೀಲ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಆರೋಪಿಗಳನ್ನು ಆರ್ಟಿ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ಆರ್.ಟಿ.ನಗರ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಮತ್ತು ಪಿಎಸ್ಐ ವೀರಭದ್ರ ಇಬ್ಬರು ಗಾಂಜಾ ಮಾರಾಟದ ಕೇಸ್ ತನಿಖೆ ಮಾಡುವಲ್ಲಿ ವಿಫಲರಾಗಿರುವ ಕಾರಣಕ್ಕಾಗಿ ಇವರನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಗಾಂಜಾ ಮಾರಾಟದ ಆರೋಪ ಹೊತ್ತಿದ್ದ ಇಬ್ಬರು ಪೇದೆಗಳು ಅರೆಸ್ಟ್ ಆದ ಎರಡೇ ದಿನಗಳಲ್ಲಿ ಬೇಲ್ ಪಡೆದು ಹೊರಬಂದಿದ್ದರು.. ಈ ವಿದ್ಯಮಾನಗಳ ಬೆನ್ನಲ್ಲೇ ಆಯುಕ್ತರು ತನಿಖಾ ಲೋಪದಡಿ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ.