ಗ್ರಹಣ: ವಿಜ್ಞಾನಿಗಳ ಮಾಹಿತಿಯೇ ವಾಸ್ತವ

Team Newsnap
2 Min Read

ನಮಗೆ ಖಾಯಿಲೆಯಾದಾಗ ಸಾಮಾನ್ಯವಾಗಿ ನಾವು ಹೋಗುವುದು ಡಾಕ್ಟರ್ ಬಳಿಗೆ, ನಮ್ಮ ಮನೆಯಲ್ಲಿ ಕಳ್ಳತನ ದರೋಡೆ ಆದಾಗ ಅಥವಾ ನಮಗೆ ಬೆದರಿಕೆ ಉಂಟಾದಾಗ ನಾವು ಸಂಪರ್ಕಿಸುವುದು ಪೋಲಿಸರನ್ನು,ನಮಗೆ ಯಾವುದೇ ರೀತಿಯ ಅನ್ಯಾಯವಾದರೆ ನಾವು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತೇವೆ.

ನೀರಾವರಿ ಇಲಾಖೆ, ವಿದ್ಯುತ್ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ, ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆ, ಸಂಸ್ಕೃತಿ ಇಲಾಖೆ, ಮಹಿಳಾ ಇಲಾಖೆ, ಮಕ್ಕಳ ಇಲಾಖೆ ಹೀಗೆ ಬದುಕಿಗೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಿಗೂ ಅಧಿಕೃತವಾಗಿ ಸರ್ಕಾರದ ಇಲಾಖೆಗಳು ಇವೆ. ಅವು ನೀಡುವ ಮಾಹಿತಿಯೇ ಬಹಳಷ್ಟು ಸತ್ಯ ಮತ್ತು ಅಂತಿಮ ಹಾಗೂ ವಾಸ್ತವಕ್ಕೆ ಹತ್ತಿರ ಎಂದು ಈ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಪ್ಪಿದ್ದೇವೆ.

ಇಲ್ಲಿಯೂ ಒಂದಷ್ಟು ಅನ್ಯಾಯ ಅಕ್ರಮ ಭ್ರಷ್ಟಾಚಾರ ಇದ್ದರೂ ಇದನ್ನು ಒಪ್ಪದೆ ಬೇರೆ ದಾರಿ ಇಲ್ಲ. ನಾವೇ ಸೃಷ್ಟಿಸಿಕೊಂಡ ಅಧೀಕೃತ ವ್ಯವಸ್ಥೆ ಇದು.

ಹಾಗೆಯೇ ಖಗೋಳ ವಿಜ್ಞಾನದ ಬಗ್ಗೆ ಅಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲು ಇಸ್ರೋ ಎಂಬ ಅಧೀಕೃತ ಸಂಸ್ಥೆ ಇದೆ. ಅದು ತನ್ನ ಸಂಪೂರ್ಣ ಅಧ್ಯಯನದ ಮಿತಿಯಲ್ಲಿ ವಿಶ್ವದ ಎಲ್ಲಾ ಖಗೋಳ ವಿಜ್ಞಾನದ ಸಂಪರ್ಕ ಬಳಸಿ ಮಾಹಿತಿ ಸಂಗ್ರಹಿಸಿ ನಮಗೆ ವಾತಾವರಣದ ಯಾವುದೇ ಏರಿಳಿತ. ಗಳನ್ನು ತಿಳಿಸುತ್ತದೆ.

ಅದರ ಪ್ರಕಾರ,ಭೂಮಿ, ಚಂದ್ರ, ಸೂರ್ಯನ ಸುತ್ತುವಿಕೆಯ ನಡುವಿನ ನೆರಳು ಬೆಳಕಿನಾಟವೇ ಗ್ರಹಣ. ಇದೊಂದು ಅಂತರಿಕ್ಷದ ಸಹಜ ಕ್ರಿಯೆ. ಅದರಿಂದ ಏನಾದರೂ ಗಂಭೀರವಾದ ಪರಿಣಾಮವಾಗುವುದಿದ್ದರೆ ಅವರೇ ಮಾಹಿತಿ ನೀಡುತ್ತಾರೆ ಮತ್ತು ಎಚ್ಚರಿಸುತ್ತಾರೆ.

ನೋಡಿ, ನಾಗರಿಕತೆಯ ಪ್ರಾರಂಭದಲ್ಲಿ ಡಾಕ್ಟರ್ ಪೋಲೀಸ್ ಸರ್ಕಾರ ಏನೂ ಇಲ್ಲದಿದ್ದ ಸಂದರ್ಭದಲ್ಲಿ ಆಗಿನ ಜನರೇ ಅನುಭವದ ಆಧಾರದ ಮೇಲೆ ತಮ್ಮ ಸಮಸ್ಯೆಗಳನ್ನು ಸಾಧ್ಯವಾದ ಮಟ್ಟಿಗೆ ಬಗೆಹರಿಸಿಕೊಳ್ಳುತ್ತಿದ್ದರು.

ಅದೇ ರೀತಿ ಖಗೋಳದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ತಮ್ಮ ಅನುಭವದ ಜ್ಞಾನದಿಂದಲೇ ಗುರುತಿಸಿ ಮಾಹಿತಿ ನೀಡುತ್ತಿದ್ದರು. ಇದು ಬಹುತೇಕ ನಿಜವೇ ಆಗಿರುತ್ತಿತ್ತು. ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಇದೇ ರೂಡಿಯಲ್ಲಿತ್ತು.

ಗಿಡಮೂಲಿಕೆಗಳೇ ಔಷಧಗಳಾಗಿ, ಪಂಚಾಯತಿ ಕಟ್ಟೆಗಳೇ ನ್ಯಾಯಾಲಯಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಆ ಕಾಲಘಟ್ಟದಲ್ಲಿ ಅವ್ಯವಸ್ಥೆ, ಅನ್ಯಾಯ, ಅಸಮಾನತೆ, ಅಸಮರ್ಪಕ ನಿರ್ವಹಣೆಯ ವಿರುದ್ದವಾಗಿ ಈಗ ಆಧುನಿಕ ಪ್ರಜಾಪ್ರಭುತ್ವ, ತಂತ್ರಜ್ಞಾನ ಮತ್ತು ಅಧೀಕೃತ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಹಿಂದಿನ ವ್ಯವಸ್ಥೆ ಕೆಲವು ಉತ್ತಮ ರೀತಿಯಲ್ಲಿ ಇದ್ದರೂ ಬೃಹತ್ ಜನಸಂಖ್ಯೆಯಲ್ಲಿ ಅವು ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಸಾರ್ವತ್ರಿಕ ನ್ಯಾಯ ಕಲ್ಪಿಸುವಲ್ಲಿ ವಿಫಲವಾಗಿವೆ.

ಇದರ ಆಧಾರದಲ್ಲಿ,
ಗ್ರಹಣ ಎಂದರೇನು ?
ಅದು ಹೇಗೆ ಸಂಭವಿಸುತ್ತವೆ ?
ಅದರ ಪರಿಣಾಮಗಳೇನು ?
ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ?
ಎಂದು ಅಧೀಕೃತ ಖಗೋಳ ವಿಜ್ಞಾನಿಗಳು ನೀಡುವ ಮಾಹಿತಿಯೇ ನಮಗೆ ಸದ್ಯದ ವಾಸ್ತವ.

ಟಿವಿ ಮಾಧ್ಯಮಗಳಲ್ಲಿ ಕುಳಿತು ಕುಂಕುಮ ವಿಭೂತಿ ಕಾಷಯಾ ತೊಟ್ಟು ಶ್ಲೋಕಗಳನ್ನು ಪಠಿಸುತ್ತಾ ಕೊಟ್ಯಾನುಕೋಟಿ ದೂರದ ಖಗೋಳ ವೈಚಿತ್ರ್ಯ ವಿಸ್ಮಯಗಳ ಬಗ್ಗೆ ಮಾತನಾಡುವುದರಲ್ಲಿ ಸ್ವಲ್ಪ ಮಟ್ಟಿಗೆ ನಿಜವಿದ್ದರೂ ಅದು ಸಾರ್ವತ್ರಿಕವಲ್ಲ, ಅಧೀಕೃತಲ್ಲ, ಸಂಪೂರ್ಣ ನಂಬಿಕೆಗೆ ಅರ್ಹವಲ್ಲ.

ರಾಶಿಗಳ ಆಧಾರದಲ್ಲಿ ಪ್ರತಿ ವ್ಯಕ್ತಿಯ ಬದುಕಿನಲ್ಲಿ ಏನೇನೂ ಬದಲಾವಣೆ ಆಗುತ್ತದೆ. ಇನ್ನೇನೋ ಅವಘಡ ಸಂಭವಿಸುತ್ತದೆ ಎಂದು ಪ್ರಕೃತಿಯ ಸಹಜ ಕ್ರಿಯೆಯನ್ನು ಭೂತ ಮಾಡಲಾಗಿದೆ.
ಸೃಷ್ಟಿಯ ಅಗಾಧತೆ, ವೈವಿಧ್ಯತೆ, ಬೃಹತ್ ಜನಸಂಖ್ಯೆಯ ಬಗ್ಗೆ ಅವರಿಗೆ ಕಲ್ಪನೆ ಇಲ್ಲದೆ ಸಂಕುಚಿತವಾಗಿ ಮಾತನಾಡುತ್ತಾರೆ.

ಮತ್ತೊಮ್ಮೆ ಯೋಚಿಸಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಹೇಗಿದ್ದರೂ ಆ ಸ್ವಾತಂತ್ರ್ಯ ನಿಮಗಿದೆ. ಯೋಚಿಸಲು ಪ್ರೇರೇಪಿಸುವುದಷ್ಟೇ ಕೆಲಸ.‌

ವಿವೇಕಾನಂದ. ಹೆಚ್.ಕೆ.

Share This Article
Leave a comment