2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮೈಸೂರು-ಬೆಳಗೊಳ-ಕುಶಾಲನಗರ ರೈಲು ಯೋಜನೆಗೆ 100 ಕೋಟಿ ರೂ. ಅನುದಾನ ನೀಡಿದ್ದರು. 87.2 ಕಿ. ಮೀ. ರೈಲು ಯೋಜನೆ ಇದಾಗಿದೆ. ಈ ಯೋಜನೆಗೆ 1854.62 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ –ಮಂಡ್ಯದ ನಾಗಮಂಗಲದಲ್ಲಿ ಯುವಕನ ಪ್ರಾಮಾಣಿಕತೆ – ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೋಲಿಸರಿಗೆ ಒಪ್ಪಿಸಿದ
ರೈಲ್ವೆ ಇಲಾಖೆ ರಾಜ್ಯದಲ್ಲಿ ಮತ್ತೊಂದು ಹೊಸ ರೈಲು ಯೋಜನೆ ಪ್ರಾರಂಭಿಸಲು ಹೆಜ್ಜೆ ಇಟ್ಟಿದೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ಕೊಡಗು ಜಿಲ್ಲೆಯ ಕುಶಾಲನಗರ ನಡುವೆ ರೈಲು ಮಾರ್ಗ ನಿರ್ಮಾಣ ಮಾಡಲು ಸಮೀಕ್ಷೆ ನಡೆಸಲಾಗುತ್ತದೆ.ಶ್ರವಣಬೆಳಗೊಳ-ಹೊಳೆನರಸೀಪುರ-ಕೊಣನೂರು-ಕುಶಾಲನಗರ ರೈಲು ಯೋಜನೆಗೆ ಸಮೀಕ್ಷೆ ನಡೆಸಲು ನಿರ್ದೇಶನ ಕೊಟ್ಟಿದೆ.
117 ಕಿ. ಮೀ. ಮಾರ್ಗ; ರೈಲ್ವೆ ಇಲಾಖೆ ಪತ್ರದ ಅನ್ವಯ ನೂತನ ರೈಲು ಮಾರ್ಗ 117 ಕಿ. ಮೀ. ಇರಲಿದೆ. ಸಮೀಕ್ಷೆಗಾಗಿ ಅಗತ್ಯ ಅನುದಾನವನ್ನು ಇಲಾಖೆ ಬಿಡುಗಡೆ ಮಾಡಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಮಾರ್ಗ ನಿರ್ಮಾಣದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಹಾಸನ ಜಿಲ್ಲೆ ಶ್ರವಣಬೆಳಗೊಳದಿಂದ ಹೊರಡುವ ರೈಲು ಹೊಳೆನರಸೀಪುರ, ಕೊಣನೂರು ಮಾರ್ಗವಾಗಿ ಕೊಡಗು ಜಿಲ್ಲೆಯ ಕುಶಾಲನಗರವನ್ನು ತಲುಪಲಿದೆ.
ಈ ರೈಲು ಮಾರ್ಗದಿಂದ ಆಗುವ ಲಾಭ, ವೆಚ್ಚ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮೀಕ್ಷೆ ವರದಿ ತಯಾರು ಮಾಡಲಾಗುತ್ತದೆ.ಈ ಯೋಜನೆಗೆ ಭೂ ಸ್ವಾಧೀನ ಕಾರ್ಯ ಈಗಾಗಲೇ ನಡೆಯುತ್ತಿದೆ. ಶೀಘ್ರವೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಗಂಗಾವತಿ-ದರೋಜಿ ರೈಲು ಮಾರ್ಗ; ರೈಲ್ವೆ ಇಲಾಖೆ ಗಂಗಾವತಿ-ದರೋಜಿಗೆ ರೈಲ್ವೇ ಮಾರ್ಗದ ಸಮೀಕ್ಷೆ ಕಾರ್ಯಕ್ಕೆ ಸಹ ಒಪ್ಪಿಗೆ ನೀಡಿದೆ. 36 ಕಿ. ಮೀ. ಮಾರ್ಗದ ಸಮೀಕ್ಷೆಗೆ ಇಲಾಖೆ 18 ಲಕ್ಷ ರೂ. ಅನುದಾನ ನಿಗದಿ ಮಾಡಿದೆ.
“ಸಮೀಕ್ಷೆ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ರೈಲ್ವೆ ಬೋರ್ಡ್ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಗಂಗಾವತಿ ಭಾಗದ ಜನರ ಬಹುಕಾಲದ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ” ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಹೊಸ ರೈಲು ಮಾರ್ಗದ ಸಮೀಕ್ಷೆ ಕಾರ್ಯಕ್ಕೆ ಈ ಹಿಂದೆ 2020ರಲ್ಲಿ ರೈಲ್ವೇ ಬೋರ್ಡ್ ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಬಳಸುವಂತೆ ಸೂಚಿಸಿತ್ತು. ಆದರೆ ಕೋವಿಡ್ 19 ಕಾರಣಗಳಿಂದಾಗಿ 2 ವರ್ಷ ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಮಂಜೂರಾಗದೇ ಇದ್ದುದರಿಂದ ಸರ್ವೇ ಕಾರ್ಯ ಪ್ರಾರಂಭವಾಗಿರಲಿಲ್ಲ.
ಸಂಸದರು ಈ ಹೊಸ ರೈಲು ಮಾರ್ಗ ಕಾಮಗಾರಿಗೆ ಕೇಂದ್ರ ಸರ್ಕಾರವೇ ಅನುದಾನ ಒದಗಿಸಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ರೈಲ್ವೆ ಸಚಿವರು ಮತ್ತು ರೈಲ್ವೆ ಬೋರ್ಡ್ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಸಂಸದರ ಒತ್ತಾಯದ ಮೇರೆಗೆ ಹೊಸ ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ಸಿಕ್ಕಿದೆ.
ಹೊಸ ರೈಲು ಮಾರ್ಗದಿಂದ ಗಂಗಾವತಿಯಿಂದ ನೇರವಾಗಿ ಬಳ್ಳಾರಿ, ಬೆಂಗಳೂರು, ತಿರುಪತಿ, ವಿಜಯವಾಡ ಹಾಗೂ ಇತರೆ ನಗರಗಳಿಗೆ ಹೋಗಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ವಾಣಿಜ್ಯ ಉದ್ದೇಶಗಳಿಗೆ ಸಹ ಸಹಾಯಕವಾಗಲಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು