ಹಿರಿಯ ವಿದ್ವಾಂಸ ಹ. ಕ‌. ರಾಜೇಗೌಡರ ನಿಧನಕ್ಕೆ ಚುಂಚನಗಿರಿ ಜಗದ್ಗುರುಗಳ ತೀವ್ರ ಸಂತಾಪ

Team Newsnap
1 Min Read

ಹಿರಿಯ ಜಾನಪದ ವಿದ್ವಾಂಸರೂ, ಸಂಶೋಧಕರೂ, ಸಾಹಿತಿಗಳೂ ಆಗಿದ್ದ ನಾಡಿನ ಹಿರಿಯ ಚೇತನ ಹ.ಕ.ರಾಜೇಗೌಡರು ಇನ್ನಿಲ್ಲ ವಾದುದು ಅತ್ಯಂತ ನೋವಿನ ಸಂಗತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶ ಜಗದ್ಗುರು ನಿರ್ಮಲಾನಂದನಾಥ ಶ್ರೀ ಗಳು ಸಂತಾಪ ಸೂಚಿಸಿದ್ದಾರೆ.

ಶ್ರೀಗಳು ತಮ್ಮ ಸಂತಾಪ ಸಂದೇಶದಲ್ಲಿ ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಅಪರಿಮಿತ ಪಾಂಡಿತ್ಯವನ್ನು ಹೊಂದಿ ಹತ್ತು ಹಲವು ಕೃತಿಗಳನ್ನು ರಚಿಸಿದ್ದ
ರಾಜೇಗೌಡರು ಜಾನಪದವನ್ನು ಅಧ್ಯಯನ ಮಾಡುವ ಯುವಪೀಳಿಗೆಯ ಮಾರ್ಗದರ್ಶಕರಾಗಿದ್ದರು ಎಂದಿದ್ದಾರೆ.‌

ಶ್ರೀ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಗುರು ದೇವತೆಗಳಲ್ಲಿ ಅಪಾರ ಶ್ರದ್ಧಾಭಕ್ತಿಯನ್ನು ಹೊಂದಿದ್ದ ಶ್ರೀಯುತರು ನಮ್ಮ ಸದ್ಗುರುಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಸೇವಾ ಕೈಂಕರ್ಯಕ್ಕೆ ಮಾರುಹೋಗಿದ್ದರು.

ಶ್ರೀ ಕ್ಷೇತ್ರದಲ್ಲಿ ಪದವಿ ಕಾಲೇಜನ್ನು ತೆರೆಯುವಲ್ಲಿ ಅವರ ಕೊಡುಗೆ ಸ್ಮರಣೀಯ. ಕ್ಷೇತ್ರದ ಬಗ್ಗೆ ಜಾನಪದೀಯ ಹಿನ್ನೆಲೆಯ ಸಂಶೋಧನಾತ್ಮಕ ಕೃತಿಯನ್ನೂ ರಚಿಸಿದ್ದರು.

ಪ್ರಸ್ತುತ ಶ್ರೀಮಠದ ವತಿಯಿಂದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಒಳಗೊಂಡಂತೆ ಸ್ಥಾಪಿಸಿರುವ ವಿಕಸನ ಸಂಸ್ಥೆಯ ಮೂಲಕ 108 ಒಕ್ಕಲಿಗ ಸಾಧಕರ ಬಗ್ಗೆ ಕೃತಿಗಳನ್ನು ಪ್ರಕಟಿಸುವ ಕಾರ್ಯದಲ್ಲಿ ಶ್ರೀಯುತರು ವಹಿಸಿದ ಪ್ರಮುಖ ಪಾತ್ರ ಅವಿಸ್ಮರಣೀಯವಾದುದು. ಜೊತೆಗೆ ಒಕ್ಕಲಿಗರ ಸಾಧನೆ ಮತ್ತು ನಾಡಪ್ರಭು ಕೆಂಪೇಗೌಡರ ಇತಿಹಾಸವನ್ನು ರಚಿಸಬೇಕೆಂಬ ಶ್ರೀಮಠದ ಸತ್ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ನಾವು ಕಳೆದ ವಾರವಷ್ಟೇ ಶ್ರೀಯುತರ ನಿವಾಸಕ್ಕೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿ ಬಂದಿದ್ದೆವು.

ಶ್ರೀಯುತರು ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪರಿಮಿತ ಕೊಡುಗೆಯನ್ನು ಪರಿಗಣಿಸಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪ್ರತಿಷ್ಠಿತ ಚುಂಚಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿದಂತಾಗಿ ಸಾಹಿತ್ಯ ಮತ್ತು ಜಾನಪದ ಕ್ಷೇತ್ರಕ್ಕೆ ಭರಿಸಲಾರದ ನಷ್ಟವುಂಟಾಗಿದೆ. ಭಗವಂತನು ಶ್ರೀಯುತರ ನಿಧನದಿಂದ ದುಃಖತಪ್ತರಾಗಿರುವ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು, ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಆಶಿಸುತ್ತೇವೆ.

Share This Article
Leave a comment