ಬಲಪಂಥ – ಎಡಪಂಥ – ಮಧ್ಯ ಪಂಥ – ಮಾನವೀಯ ಪಂಥ

Team Newsnap
4 Min Read

ಸಿದ್ದಾಂತಗಳ ಆಚೆ ನಿಜ ಮನುಷ್ಯರ ಹುಡುಕುತ್ತಾ……

ಹೌದು, ನಾನು ಬಲಪಂಥೀಯ,

ಈ ದೇಶದ ಸಂಸ್ಕೃತಿ – ಮೌಲ್ಯಗಳನ್ನು, ಇಲ್ಲಿನ ಜನರ ಮುಗ್ಧತೆ – ಮಾನವೀಯ ಗುಣಗಳನ್ನು ಬಹುವಾಗಿ ಇಷ್ಟಪಡುತ್ತೇನೆ. ಈ ನೆಲದ ಮಣ್ಣಿನ ಶ್ರೇಷ್ಠತೆಯನ್ನು ಪಾರಂಪರಿಕ ಕೌಟುಂಬಿಕ ಜೀವನ ಶೈಲಿಯನ್ನು ಮೆಚ್ಚುತ್ತೇನೆ. ಅದಕ್ಕಾಗಿ ಹೆಮ್ಮೆ ಇದೆ.

ಹೌದು, ನಾನು ಎಡಪಂಥೀಯ,

ಇಲ್ಲಿನ ಅಮಾನವೀಯ ರಾಕ್ಷಸ ಸ್ವರೂಪದ ಶೋಷಣೆಯ ಮೂಲವಾದ ಸಾಮಾಜಿಕ ಅಸಮಾನತೆಯನ್ನು ದ್ವೇಷಿಸುತ್ತೇನೆ. ಕಪಟ ಆಧ್ಯಾತ್ಮ, ಕಠೋರ ಸಂಪ್ರದಾಯಗಳು, ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿಯಂತ್ರಣವನ್ನು ಖಂಡಿಸುತ್ತೇನೆ. ಅದಕ್ಕೆ ನನಗೆ ಇಲ್ಲಿನ ವ್ಯವಸ್ಥೆಯ ಬಗೆಗೆ ಕೋಪವಿದೆ.

ಹೌದು, ನಾನು ಮಧ್ಯ ( ನಡು ) ಪಂಥೀಯ,

ಬಲ ಮತ್ತು ಎಡಗಳ ದಾಸನಾಗದೆ ತಮ್ಮದೇ ಶ್ರೇಷ್ಠ ಎಂದು ಮೂಡನಾಗದೆ ಎರಡೂ ಪಂಥಗಳ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ಅನುಭವ ಮತ್ತು ಆಧುನಿಕತೆಯ ನೆರಳಲ್ಲಿ ಹೊಸದೊಂದು ಜೀವನ ಶೈಲಿ ರೂಪಿಸಿಕೊಳ್ಳುವ ಪ್ರಯತ್ನದಲ್ಲಿರುವವನು.

ಇಲ್ಲ, ನಾನು ಇದಾವುದೂ ಅಲ್ಲ, ಮಾನವೀಯ ಮೌಲ್ಯಗಳ ಹುಡುಕಾಟಗಾರ……..

ಸೃಷ್ಟಿಯ ಒಂದು ಸಹಜ ಸ್ವಾಭಾವಿಕ ಸರಳ ಜೀವಿ. ನನ್ನ ಮೆದುಳಿನ ಗ್ರಹಿಕೆಯಿಂದ ಉಂಟಾದ ತರಂಗಗಳು ಮನಸ್ಸಿಗೆ ರವಾನಿಸುವ ಸಂದೇಶಗಳಿಗೆ ಅನುಗುಣವಾಗಿ ದೇಹದ ಅಂಗಾಗಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ಜೀವಕೋಶಗಳ ರಾಶಿ ನಾನು.
ಅದಷ್ಟೇ ಸತ್ಯ. ಉಳಿದದ್ದು ಎಂದಿನಂತೆ ನಿಮ್ಮ ಮೆದುಳು ಗ್ರಹಿಸಿ ಮನಸ್ಸಿಗೆ ಕಳಿಸುವ ತರಂಗಗಳ ಆಧಾರಲ್ಲಿ ನಿಮ್ಮ ಪ್ರತಿಕ್ರಿಯೆ…..

ಇದುವೇ ಜೀವಿ – ಜೀವನ – ಸಮಾಜ
ಈ ದೇಶ – ಭಾಷೆ – ಧರ್ಮ – ಜಾತಿ – ಪಂಥ ಎಲ್ಲವೂ ಕಲ್ಪನೆ.
ಸಾವು ಮಾತ್ರ ಖಚಿತ. ನೀವು ಯಾರೇ ಆಗಿದ್ದರೂ….

ಏಕೆಂದರೆ ಒಮ್ಮೆ ಆಳವಾಗಿ – ಮುಕ್ತವಾಗಿ – ವಿಶಾಲವಾಗಿ – ಶುದ್ದವಾಗಿ ಯೋಚಿಸಿ ನೋಡಿ……….

ಸೈದ್ದಾಂತಿಕ ನಿಲುವುಗಳು……

ಒಂದು ವೇಳೆ………

ದಲಿತರು ಬ್ರಾಹ್ಮಣರನ್ನು ಶೋಷಿಸಿದರೆ ನಮ್ಮ ಬೆಂಬಲ ಬ್ರಾಹ್ಮಣರ ಪರವಾಗಿ. ಆದರೆ ಈಗಲೂ ದಲಿತರೇ ಶೋಷಿತರು……

ಮಹಿಳೆಯರು ಪುರುಷರನ್ನು ಶೋಷಿಸಿದರೆ ನಮ್ಮ ಬೆಂಬಲ ಪುರುಷರ ಪರವಾಗಿ. ಆದರೆ ಈಗಲೂ ಮಹಿಳೆಯರೇ ಶೋಷಿತರು…..

ಹಳ್ಳಿಯ ಜನ ನಗರದ ಜನರನ್ನು ಶೋಷಿಸಿದರೆ ನಮ್ಮ ಬೆಂಬಲ ನಗರದ ಜನರ ಪರವಾಗಿ. ಆದರೆ ಈಗಲೂ ಹಳ್ಳಿಯವರೇ ಶೋಷಿತರು…..

ಬಡವರು ಶ್ರೀಮಂತರನ್ನು ಶೋಷಿಸಿದರೆ ನಮ್ಮ ಬೆಂಬಲ ಶ್ರೀಮಂತರ ಪರವಾಗಿ, ಆದರೆ ಈಗಲೂ ಬಡವರೇ ಶೋಷಿತರು…….

ಗ್ರಾಹಕರು ವ್ಯಾಪಾರಿಗಳನ್ನು ಶೋಷಿಸಿದರೆ ನಮ್ಮ ಬೆಂಬಲ ವ್ಯಾಪಾರಿಗಳ ಪರವಾಗಿ, ಆದರೆ ಈಗಲೂ ಗ್ರಾಹಕರೇ ಶೋಷಿತರು……

ಕಾರ್ಮಿಕರು ಮಾಲೀಕರನ್ನು ಶೋಷಿಸಿದರೆ ನಮ್ಮ ಬೆಂಬಲ ಮಾಲೀಕರಿಗೆ. ಆದರೆ ಈಗಲೂ ಕಾರ್ಮಿಕರೇ ಶೋಷಿತರು……

ರೈತರು ದಲ್ಲಾಳಿಗಳನ್ನು ಶೋಷಿಸಿದರೆ ನಮ್ಮ ಬೆಂಬಲ ದಲ್ಲಾಳಿಗಳ ಪರವಾಗಿ, ಆದರೆ ಈಗಲೂ ರೈತರೇ ಶೋಷಿತರು……

ಇದರ ಅರ್ಥ ನಾವು ಸದಾ ಜಾಗೃತವಾಗಿರಾಗಿರಬೇಕಿರುವುದು ಮತ್ತು ಹೋರಾಟ ಮಾಡಬೇಕಿರುವುದು ಶೋಷಿತರ ಪರವಾಗಿಯೇ ಹೊರತು ಯಾವುದೇ ಸಿದ್ದಾಂತ, ಧರ್ಮ, ಜಾತಿ, ಭಾಷೆ, ಲಿಂಗದ ಪರವಾಗಿಯಲ್ಲ.

ಭಾರತ ಒಂದು ಸಂಕೀರ್ಣ ಸಮಾಜವನ್ನು ಹೊಂದಿದೆ. ಇಲ್ಲಿ ಶೋಷಣೆ ಎಂಬುದು ಮುಖ್ಯವಾಗಬೇಕೆ ಹೊರತು ವೈಯಕ್ತಿಕ ನಂಬಿಕೆ ಅಥವಾ ಸೈದ್ದಾಂತಿಕ ನಿಲುವುಗಳಲ್ಲ. ಸೈದ್ಧಾಂತಿಕತೆ ಎಂಬುದೇ ಶೋಷಿತರ ಪರವಾದ ನಿಲುವುಗಳು ಎಂದು ಭಾವಿಸಬಹುದು. ಏಕೆಂದರೆ ಬಲಿಷ್ಠರಿಗೆ ಯಾವುದೇ ಹೆಚ್ಚಿನ ಸಹಾಯ ಬೇಕಾಗಿರುವುದಿಲ್ಲ. ದುರ್ಬಲರು ಯಾವಾಗಲೂ ಸಹಾಯದ ನಿರೀಕ್ಷೆಯಲ್ಲಿರುತ್ತಾರೆ ಮತ್ತು ವ್ಯವಸ್ಥೆ ಸಹ ಅವರನ್ನು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುತ್ತದೆ‌‌.

ನಾವು ಯಾವುದೋ ಒಂದು ಸಿದ್ದಾಂತದ ಬೆಂಬಲಿಗರು ಅಥವಾ ಅದರ ಪರವಾದ ವಿಚಾರಗಳನ್ನು ಇಷ್ಟ ಪಡುವವರಾಗಿದ್ದರೆ ಇನ್ನೊಂದು ಭಿನ್ನ ನಿಲುವಿನ ಸಿದ್ದಾಂತವನ್ನು ಅವಶ್ಯಕವಾಗಿ ವಿರೋಧಿಸುತ್ತಾ, ತನ್ನ ವಿಚಾರ ಸರಣಿಗಳ ಅನುಯಾಯಿಗಳು ಮಾಡುವ ತಪ್ಪುಗಳನ್ನು ಗುರುತಿಸಲಾರದಷ್ಟು ಮೋಹಕ್ಕೆ ಒಳಗಾಗುವ‌ ಸಾಧ್ಯತೆಯೇ ಹೆಚ್ಚು.

ಬೇಕಾದರೆ ಗಮನಿಸಿ ನೋಡಿ, ಒಂದು ಧರ್ಮದ ಅಥವಾ ಪಕ್ಷದ ಜನರು ತಮ್ಮ ಪಕ್ಷದ ಅಥವಾ ಧರ್ಮದ ನೇರ ತಪ್ಪುಗಳನ್ನು ಸಹ ಗುರುತಿಸಲಾರದಷ್ಟು ಮೂರ್ಖರಾಗಿರುತ್ತಾರೆ ಮತ್ತು ‌‌ಅದನ್ನು ಅಸಹ್ಯವಾಗಿ ಸಮರ್ಥಿಸುತ್ತಾರೆ.

ತೀವ್ರ ಬಲಪಂಥ ಮತ್ತು ಎಡಪಂಥ ಜನರಲ್ಲಿ ಇದನ್ನು ಗುರುತಿಸಬಹುದು. ಆದ್ದರಿಂದಲೇ ನಮ್ಮ ಸೈದ್ದಾಂತಿಕ ನಿಲುವುಗಳು ನ್ಯಾಯದ ಪರ, ಸತ್ಯದ ಪರ,‌ ಜನರ ಪರ, ದೇಶದ ಪರ ಇರಬೇಕು. ಇಲ್ಲದಿದ್ದರೆ ಸೈದ್ದಾಂತಿಕತೆ ನಮ್ಮನ್ನೇ ಆಪೋಷಣೆ ತೆಗೆದುಕೊಳ್ಳುತ್ತದೆ.

ಮಹಿಳಾ ಪರ ನಿಲುವುಗಳನ್ನು ತೆಗೆದುಕೊಳ್ಳವಾಗ ಅವರು ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳುವ ಬಗ್ಗೆಯೂ ಮಾತನಾಡಬೇಕು, ಧರ್ಮದ ಪರ ಮಾತನಾಡುವಾಗ ಅದರಿಂದಾಗುವ ಅನಾಹುತಗಳ ಬಗ್ಗೆಯೂ ಜಾಗೃತೆ ವಹಿಸಬೇಕು.

ಯಾವುದೇ ಸೈದ್ದಾಂತಿಕ ನಿಲುವುಗಳ ಮೂಲ ಆಶಯಗಳು ಪ್ರಾಯೋಗಿಕವಾಗಿ ಮತ್ತು ವಾಸ್ತವದ ನೆಲೆಯಲ್ಲಿ ಜಾರಿಯಾಗುವಾಗ ಅದು ಅಪಾಯಕಾರಿಯಾಗಬಹುದು. ಆಗ ಅದನ್ನು ಗುರುತಿಸಿ ಖಂಡಿಸುವ ನೇರ ಮತ್ತು ದಿಟ್ಟ ಸ್ವಭಾವ ನಮ್ಮದಾಗಿರಬೇಕು. ಗುಲಾಮಿತನ, ಭಕ್ತಗಣದ ರೀತಿ ಎಲ್ಲವೂ ಸರಿ ಎಂದು ಮೂಡರಾಗಬಾರದು.

ನಮ್ಮ ಧ್ವನಿ ಸಿದ್ದಾಂತಗಳ ಆಚೆ ಶೋಷಿತರ ಪರವಾಗಿರಲಿ, ನೋಂದವರ ಪರವಾಗಿರಲಿ, ಅವರು ಯಾವುದೇ ಜಾತಿ ಧರ್ಮ ಪಕ್ಷಗಳವರಾಗಿರಲಿ ಎಂದು ಆಶಿಸುತ್ತಾ,
ಜೊತೆಗೆ ಇದೇ ನಿಲುವುಗಳು ಅವಕಾಶವಾದಿತನವಾಗಿ ರೂಪಾಂತರವಾಗದಂತೆ ಎಚ್ಚರಿಕೆಯೂ ಇರಲಿ, ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ತಿರುಗಿಸಿಕೊಳ್ಳುವ ಡೋಂಗಿ ಸೈದ್ಧಾಂತಿಕವಾದಿಯೂ ಆಗದಿರಲಿ ಎಂದು ನೆನಪಿಸುತ್ತಾ.

  • ವಿವೇಕಾನಂದ. ಹೆಚ್.ಕೆ.
Share This Article
Leave a comment