ಕಾರ್ಮೆಲ್ ಕಾನ್ವೆಂಟ್ ನ ನಿವೃತ್ತ ದೈಹಿಕ ಶಿಕ್ಷಕ ವಿನ್ಸೆಂಟ್ ಇನ್ನಿಲ್ಲ

Team Newsnap
1 Min Read

ನಗರದ ಕಾರ್ಮೆಲ್ ಕಾನ್ವೆಂಟ್ ನ ನಿವೃತ್ತ ದೈಹಿಕ ಶಿಕ್ಷಕ ವಿನ್ಸೆಂಟ್ ಮಾಸ್ಟರ್ (77) ಕಳೆದ ಮಧ್ಯ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು,ವಯೋಸಹಜ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ವಿನ್ಸೆಂಟ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

ಪತ್ನಿ ಹಾಗೂ ಮೂವರು ಪುತ್ರಿಯರೂ ಸೇರಿದಂತೆ ಅಪಾರ ಬಂಧು – ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯವರಾದ ವಿನ್ಸೆಂಟ್ 1964 ರ ಸುಮಾರಿಗೆ ಮಂಡ್ಯಕ್ಕೆ ಬಂದರು, ಮೊದಲು ಮಂಡ್ಯದ ಸೆಂಟ್ ಜೋಸೆಪ್ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿ ನಂತರ ದಿನಗಳಲ್ಲಿ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಮೂರು ದಶಕಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ತಮ್ಮ ವೃತ್ತಿಯ ಜೊತೆಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದ ವಿನ್ಸೆಂಟ್ ಮಾಸ್ಟರ್ ನಿಧನದಿಂದ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ಕೂಡ ಬಹುದೊಡ್ಡ ನಷ್ಟವೇ ಆಗಿದೆ.

ಮಂಡ್ಯದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಣೆಯ ದನಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಸಿರಿಕಂಠವಾಗಿದ್ದ, ನಿತ್ಯನಿರಂತರ ಆರಕ್ಷಕ ಇಲಾಖೆಯ ಸೇವೆಗೆ ನಿಸ್ವಾರ್ಥ ಸ್ವಯಂಸೇವೆಯ ಟ್ರಾಫಿಕ್ ವಾರ್ಡನ್ ಆಗಿ ತೊಡಗಿಸಿಕೊಂಡಿದ್ದ ಎಲ್ಲರಿಗೆ ಬೇಕಾದ ಸೇವಾಬಂಧುವಾಗಿದ್ದರು. ವಿನ್ಸೆಂಟ್ ಅವರು ಕಾರ್ಮೆಲ್ ಕಾನ್ವೆಂಟ್ ಶಾಲೆಯ ಬೆಳವಣಿಗೆಯ ಮೂಲಬೇರುಗಳಲ್ಲಿ ಒಬ್ಬರಾಗಿದ್ದರೆಂಬುದನ್ನು ಮರೆಯುವಂತಿಲ್ಲ.

ಸಂತಾಪ

ವಿನ್ಸೆಂಟ್ ನಿಧನದಿಂದ ಸಮಾಜಕ್ಕೂ ಅಪಾರ ನಷ್ಟ ಉಂಟಾಗಿದೆ ಎಂದು ಶೋಕಿಸಿರುವ ನಿವೃತ್ತ ಶಿಕ್ಷಕ ಕೊಕ್ಕಡ ವೆಂಕಟರಮಣ ಭಟ್ ಕುಟುಂಬವರ್ಗದವರಿಗೆ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಆತ್ಮಶಕ್ತಿಯನ್ನು ಭಗವಂತನು ಹೆಚ್ಚಿಸಲಿ ಎಂದು ಕೋರಿದ್ದಾರೆ.

Share This Article
Leave a comment