ರಾಜ್ಯದ ಜನರ ನೆಮ್ಮದಿ ಕೆಡಿಸಲು ಕೆಲ ಶಕ್ತಿಗಳು ಆಜಾನ್, ಸುಪ್ರಭಾತದಂತಹ ಧರ್ಮ ಸಂಘರ್ಷವನ್ನು ಹುಟ್ಟು ಹಾಕುತ್ತವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಯಚೂರಿನ ಸಿಂಧನೂರಿನಲ್ಲಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ದೇವೇಗೌಡರು ಹಿಂದೂ ದೇವಾಲಯಗಳಲ್ಲಿ ಪ್ರತಿದಿನ ಸುಪ್ರಭಾತ ಹಾಕಲಾಗುತ್ತಿದೆ. ಅದೇ ರೀತಿ ಮುಸಲ್ಮಾನರೂ ಅವರ ಪದ್ಧತಿ ಪ್ರಕಾರ ಅವರ ಧರ್ಮದ ಪ್ರಾರ್ಥನೆ ಮಾಡುತ್ತಾರೆ. ಈವರೆಗೆ ಇಲ್ಲದ ಸಂಘರ್ಷ ಈಗ ಯಾಕೆ ಆರಂಭವಾಗಿದೆ. ಇದಕ್ಕೆಲ್ಲ ಯಾರು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ರಾಜಕೀಯವಾಗಿ ಬಳಸಿಕೊಳ್ಳಲು ಕೆಲವರು ಇಂತಹ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ನಾನು ಇದಕ್ಕೆ ಹೆಚ್ಚಿನ ಮಹತ್ವ ಕೊಡಲ್ಲ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 8 ವರ್ಷ ಆಯಿತು. ಆದರೆ ಈಗ ಈ ಗಲಾಟೆ ಆರಂಭವಾಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು? ಇದರ ಹಿಂದೆ ಏನು ಉದ್ದೇಶವಿದೆ. ವಾಜಪೇಯಿಯವರು ಇದ್ದಾಗ ಇಲ್ಲದ ಗಲಾಟೆ ಈಗ ಆಗಿದೆ. ಜನರನ್ನು ವಿಭಜಿಸುವ ಹುನ್ನಾರವನ್ನು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.