ಕೆಂಪುಕೋಟೆ ಗಲಭೆ ರೈತರ ಹೆಸರಿಗೆ ಕಳಂಕ ತರಲು ಸಮಾಜಘಾತುಕ ವ್ಯಕ್ತಿಗಳು ನಡೆಸಿದ ಷಡ್ಯಂತ್ರ: ಕುರುಬೂರು ಶಾಂತಕುಮಾರ್

Team Newsnap
1 Min Read

ದೆಹಲಿ‌ಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ಘಟನೆ ಕುರಿತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆಯಾಗಬೇಕು. ರೈತರ ಹೆಸರಿಗೆ ಕಳಂಕ ತರಲು ಸಮಾಜಘಾತುಕ ವ್ಯಕ್ತಿಗಳು ನಡೆಸಿದ ಷಡ್ಯಂತ್ರವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ಹೊರಹಾಕಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 60 ದಿನಗಳಿಂದ ನಡೆಯುತ್ತಿರುವ ಶಾಂತಿಯುತ ಪ್ರತಿಭಟನಾ ರೈತರ ಹೆಸರಿಗೆ ಮಸಿ ಬಳಿಯಲು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ದುರಾದೃಷ್ಠಕರ ಎಂದರು.

ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ದೀಪಕ್ ಸಿಧು. ಅದನ್ನು ಆತನೆ ಒಪ್ಪಿಕೊಂಡಿದ್ದಾನೆ. ಅಲ್ಲದೇ ಬಾವುಟ ಹಾರಿಸಿದ್ದು ನಾನೆ ಎಂದು ದೀಪಕ್ ಸಿಧು ಒಪ್ಪಿಕೊಂಡಿದ್ದಾನೆ. ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಮೊಕದ್ದಮೆ ದಾಖಲಿಸಿ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಿರಂತರ

ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರೆಯುವಲ್ಲಿ ಯಾವುದೇ ಅನುಮಾನವಿಲ್ಲ. ಗಲಭೆಯಿಂದ ಹೋರಾಟಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ರೈತರನ್ನು ಮನೆಯಲ್ಲಿ ಕೂಡಿಹಾಕಿ ಕಾಯ್ದೆ ತಂದಿದ್ದಾರೆ. 145 ರೈತರು ಚಳುವಳಿ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ. ನಾಟಕೀಯವಾಗಿ 11 ಸಭೆ ನಡೆಸಿದ್ದಾರೆ ಎಂದು ಕಿಡಿಕಾರಿದರು.

ಇದೇ 30 ರಂದು ಉಪವಾಸ ನಿರಸನ

ಕೇಂದ್ರ ಸರ್ಕಾರದ ಈ ನಡುವಳಿಕೆ ಇಡೀ ರೈತ ಕುಲವನ್ನೇ ನಾಶ ಮಾಡುವ ಸಂಚು. ಇದೇ ಜ.30ರಂದು ಉಪವಾಸ ನಿರಸನ ದಿನ ನಡೆಸಲು ತೀರ್ಮಾನಿಸಿದ್ದೇವೆ. ದೆಹಲಿಯ ಎಲ್ಲಾ ಗಡಿ ಭಾಗಗಳಲ್ಲಿ ಉಪವಾಸ ನಿರಸನ ದಿನ ಆಚರಣೆ ಮಾಡುತ್ತೇವೆ. ತಂಡ ತಂಡವಾಗಿ ಚಳುವಳಿಗೆ ಹೋಗಲು ಚಿಂತನೆ ನಡೆಸಿದ್ದೇವೆ ಎಂದು ಕುರುಬೂರು ಶಾಂತ ಕುಮಾರ್ ಎಂದು ಮಾಹಿತಿ ನೀಡಿದರು. ‌

Share This Article
Leave a comment