ವ್ಯವಸ್ಥೆಯ ಮಾನಸಿಕ ನೈತಿಕ ಗಟ್ಟಿತನ ಪುನರ್ ಸ್ಥಾಪನೆ ಅಗತ್ಯ

Team Newsnap
2 Min Read

ಅಪಘಾತಗಳ ಸಂದರ್ಭಗಳಲ್ಲಿ ಜನ ಗಾಯಾಳುಗಳಿಗೆ ನೆರವಾಗದೆ ಅಮಾನವೀಯವಾಗಿ ವರ್ತಿಸುವುದು ಆ ಕ್ಷಣದ ಅಲ್ಲಿದ್ದ ಜನರ ಪ್ರತಿಕ್ರಿಯೆ ಮಾತ್ರ ಎಂದು ಭಾವಿಸದಿರಿ. ಆ ಮನಸ್ಥಿತಿಯ ಹಿಂದೆ ವ್ಯವಸ್ಥೆಯ ಕ್ರೌರ್ಯ – ಮೌಲ್ಯಗಳ ಅಧ್ಹಪತನ ತನ್ನ ಪ್ರಭಾವ ಬೀರಿದೆ.

ಸುಪ್ರೀ೦ಕೋರ್ಟಿನ ಆದೇಶ ಜನರಿಗೆ ಅನುಕೂಲವಾಗುವಂತಿದ್ದರೂ ನಮ್ಮ ಪೋಲೀಸರ ವರ್ತನೆ ಇದಕ್ಕೆ ಪೂರಕವಾಗಿಲ್ಲ. ಅವರ ಭಾಷೆ ಮತ್ತು ನಡವಳಿಕೆ ಸಾಮಾನ್ಯರ ಬಗ್ಗೆ ಅಸಹನೀಯವಾಗಿಯೇ ಇದೆ.

ಬ್ಯಾಂಕುಗಳಲ್ಲಿ ಮಾಸಿದ ಹಳೆಯ ಬಟ್ಟೆಯ ಅಥವಾ ಪಂಚೆ ಟವಲ್ ಹಾಕಿದ ಅಮಾಯಕ ಜನರ ಪ್ರಶ್ನೆಗಳಿಗೆ ಅಲ್ಲಿನ ಬಹುತೇಕ ಅಧಿಕಾರಿಗಳು ಉತ್ತರಿಸುವ ರೀತಿ ಅವಮಾನಕರವಾಗಿಯೇ ಇರುತ್ತದೆ.

ಆಸ್ಪತ್ರೆಗಳಲ್ಲಿ ಬಡವರಿಗೆ ನೀಡುವ ಚಿಕಿತ್ಸೆಗಳ ಗುಣಮಟ್ಟದಲ್ಲಿ ಕಣ್ಣಿಗೆ ಕಾಣುವಷ್ಟು ನಿರ್ಲಕ್ಷ್ಯ – ಪಕ್ಷಪಾತವಿರುತ್ತದೆ.

ಮಾಧ್ಯಮಗಳಲ್ಲಿ ದುಷ್ಟತನಕ್ಕೆ ನೀಡುವ ಪ್ರಾಮುಖ್ಯತೆ ಒಳ್ಳೆಯ – ಅತ್ಯುತ್ತಮ ಸಾಧಕರ ಪ್ರಚಾರಕ್ಕೆ ನೀಡುವುದಿಲ್ಲ. ಕಪಟ ಪ್ರದರ್ಶಕ ಮನೋಭಾವನೆಗೇ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಸರ್ಕಾರದ ಯಾವುದೇ ಇಲಾಖೆಯಲ್ಲಿ ಲಂಚವಿಲ್ಲದೆ – ನಿಮ್ಮನ್ನು ಸತಾಯಿಸದೆ ಕೆಲಸವಾಗಿದೆ ಎಂದರೆ ನೀವು ಅದೃಷ್ಟವಂತರೆಂದೇ ಭಾವಿಸಿ
ಅಥವಾ ನೀವು ಪ್ರಭಾವಿಗಳೋ ರಾಜಕಾರಣಿಗಳ ಸಂಬಂದಿಗಳೋ ರೌಡಿಯೋ ಆಗಿರಬೇಕು.
ಇಲ್ಲದಿದ್ದರೆ ನಿಮ್ಮ ಸಂಕಷ್ಟಗಳಿಗೆ ಕೊನೆಯೇ ಇಲ್ಲ.

ಇದು ಕೇವಲ ಉದಾಹರಣೆಗಳಷ್ಟೆ.
ಇಡೀ ವ್ಯವಸ್ಥೆ ಹೀಗೆಯೇ ನಡೆಯುತ್ತದೆ.
ಒಂದು ವೇಳೆ ನೀವು ಶ್ರೀಮಂತರೋ ಬಲಶಾಲಿಗಳೋ ಅತಿ ಧೈರ್ಯವಂತರೋ ಆಗಿದ್ದರೆ ವ್ಯವಸ್ಥೆ ಅಷ್ಟೊಂದು ಕಠೋರವಾಗಿ ವರ್ತಿಸುವುದಿಲ್ಲ. ಅಷ್ಟಕ್ಕೇ ನೀವು ಎಲ್ಲಾ ಸರಿಯಿದೆ ಎಂದು ಭಾವಿಸದಿರಿ.

ಜನಸಂಖ್ಯೆಯ ಅತಿಯಾದ ಒತ್ತಡ, ಮೌಲ್ಯಗಳ ಕುಸಿತ, ವೇಗದ ಮತ್ತು ದುರಾಸೆಯ ಜೀವನಶೈಲಿ, ಬೇಗನೆ ನಿರಾಸೆಗೊಳ್ಳುವ ಮನಸ್ಥಿತಿ ಅದರಿ೦ದಾಗಿಯೇ ಉಂಟಾದ ಉದಾಸೀನತೆ ಜನರನ್ನು ಒತ್ತಡದಲ್ಲಿಟ್ಟಿದೆ.

ಆದ್ದರಿಂದಲೇ ಅಪಘಾತಗಳಂತ ಸಂದರ್ಭಗಳಲ್ಲಿ ಜನರಿಗೆ ಸಹಾಯಕ್ಕಿಂತ ಸೆಲ್ಫಿಯೇ ಮುಖ್ಯವಾಗುತ್ತದೆ.
ಅದರೆ,
ಕೆಲವು ಅಪರೂಪದ ಸಂದರ್ಭಗಳಲ್ಲಿ ಅಪಘಾತದ ಭೀಕರತೆ ಬಹುಶಃ ಅಲ್ಲಿದ್ದ ಜನರು ರಕ್ತ ಮತ್ತು ದೇಹದ ಭಾಗಗಳ ಚೆಲ್ಲಾಪಿಲ್ಲಿಯಿಂದ ಭಯ ಆತಂಕದಿಂದ ಮನಸ್ಸಿದ್ದರೂ ಸಹಾಯಕ್ಕೆ ಬರದಿರುವ ಸಾಧ್ಯತೆಯೂ ಇದೆ.


ನಮ್ಮ ಆತ್ಮೀಯರು ಅಲ್ಲಿದ್ದರೆ ಅವರ ಸಹಾಯ ಖಂಡಿತ ಸಿಗುತ್ತದೆ. ಅಪರಿಚಿತರ ಬಗ್ಗೆ ಮಾತ್ರ ಈ ಧೋರಣೆಯಿದೆ. ಏಕೆಂದರೆ ಟಿವಿಯಲ್ಲಿ ಆ ದೃಶ್ಯ ನೋಡುವಾಗಲೇ ಮೈ ನಡುಗುತ್ತದೆ..
ಇನ್ನು ಸ್ಪಾಟ್ ನಲ್ಲಿ ಇದ್ದರೆ ತಲೆತಿರುಗಿ ಬಿದ್ದರೂ ಆಶ್ಚರ್ಯವಿಲ್ಲ. ಇಲ್ಲಿ ಕುಳಿತುಕೊಂಡು ಹೇಳುವಷ್ಟು ಸುಲಭ ಸ್ಥಿತಿ ಈ ವಿಷಯದಲ್ಲಿ ಕಷ್ಟ.

ಆದ್ದರಿಂದ ಕೇವಲ ಇದೊಂದೆ ವಿಷಯದಲ್ಲಿ ಸುಧಾರಣೆ ಸಾಧ್ಯವಿಲ್ಲ. ಇಡೀ ವ್ಯವಸ್ಥೆಯ ಮಾನಸಿಕ ನೈತಿಕ ಗಟ್ಟಿತನವನ್ನು ಪುನರ್ ರೂಪಿಸಬೇಕಾದ ಅವಶ್ಯಕತೆ ಇದೆ.
ಆ ನಿಟ್ಟಿನಲ್ಲಿ ಕಾರ್ಯೋನ್ನುಖರಾಗೋಣ ಎಂದು ಆಶಿಸುತ್ತಾ ……..

  • ವಿವೇಕಾನಂದ. ಹೆಚ್.ಕೆ.
Share This Article
Leave a comment