ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಗಂಭೀರ ತನಿಖೆ ನಡೆಯುತ್ತಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.
ಘಟನಾ ಸ್ಥಳದಲ್ಲಿ ಎಲ್ಲ ರೀತಿಯ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೈಸೂರಿನಲ್ಲಿ ಇಂದು ಸಂಜೆ ಗೃಹಸಚಿವ ಆರಗ ಜ್ಞಾನೇಂದ್ರ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದ ಸೂದ್ ಮಾಹಿತಿ ನೀಡಿದರು.
ಘಟನೆ ಬಗ್ಗೆ ಆರೋಪಿಗಳ ಬಗ್ಗೆ ಸುಳಿವು ದೊರೆತರೂ ಈಗಿನ ಸ್ಥಿತಿಯಲ್ಲಿ ಅದನ್ನು ಹೇಳುವ ಹಾಗಿಲ್ಲ ಎಂದು ಡಿಜಿಪಿ ಸ್ಪಷ್ಟಪಡಿಸಿದರು. ಸಂತ್ರಸ್ತೆಯ ಮಾನಸಿಕ ಸ್ಥಿತಿ ಸರಿಯಿಲ್ಲ. ಹುಷಾರಾದ ನಂತರ ಮಾಹಿತಿ ನೀಡುವುದಾಗಿ ಆಕೆ ತಿಳಿಸಿದ್ದಾರೆ ಎಂದರು.
ಶೂಟೌಟ್ ಪ್ರಕರಣದಲ್ಲಿ ಆರು ಮಂದಿ ಬಂಧನ: ಇತ್ತೀಚೆಗೆ ಮೈಸೂರಿನ ವಿದ್ಯಾರಣ್ಯಪುರಂನ ಆಭರಣದ ಅಂಗಡಿಯ ದರೋಡೆ ಮತ್ತು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು, ಮುಂಬೈ, ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ, ರಾಜಾಸ್ತಾನದಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 8 ಮಂದಿ ಭಾಗಿಯಾಗಿದ್ದಾರೆ. ಕೃತ್ಯದ ಪ್ಲಾನ್ ಮಾಡಿದ ಇಬ್ಬರು ಸೇರಿದ್ದಾರೆ. ಇವರಲ್ಲಿ ಒಬ್ಬರು ಮೈಸೂರು ಮತ್ತೊಬ್ಬ ಬೆಂಗಳೂರಿನವ ಎಂದು ಸೂದ್ ವಿವರಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮೈಸೂರಿನಲ್ಲಿ ನಡೆದ ಈ ಎರಡು ಘಟನೆಗಳು ದುರದೃಷ್ಟಕರ. ದರೋಡೆ ಪ್ರಕರಣ ಪತ್ತೆ ಹಚ್ಚಿದಂತೆ ಅತ್ಯಾಚಾರ ಪ್ರಕರಣವನ್ನೂ ಪೊಲೀಸರು ಸದ್ಯದಲ್ಲೇ ಇತ್ಯರ್ಥಪಡಿಸುತ್ತಾರೆ. ಭರವಸೆ ಇಡೋಣ ಎಂದರು.
ಆರೋಪಿಗಳನ್ನು ಪತ್ತೆ ಹಚ್ಚಿ ಜನರಲ್ಲಿ ವಿಶ್ವಾಸ ಮೂಡಿಸಬೇಕೆಂದು ನಾನು ಮತ್ತು ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದೆವು ಎಂದರು. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು