ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಯಶಸ್ವಿ 2 ವರ್ಷ ಪೂರ್ಣ : ಸಂಭ್ರಮಾಚರಣೆ

Team Newsnap
1 Min Read

ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅಧಿಕಾರ ವಹಿಸಿಕೊಂಡು ಯಶಸ್ವಿಯಾಗಿ 2ನೇ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ನಗರದಲ್ಲಿ ಸಾರ್ವಜನಿಕರಿಗೆ ಎನ್-95 ಮಾಸ್ಕ್ ಹಾಗೂ ಸಿಹಿ ವಿತರಿಸಿದರು.


ಬಿಜೆಪಿ ಮುಖಂಡ ಸಿ.ಟಿ. ಮಂಜುನಾಥ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಳೀನ್‌ಕುಮಾರ್ ಕಟೀಲು ಅವರು ಕೋವಿಡ್‌ನಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ರಾಜ್ಯವನ್ನು 18 ಬಾರಿ ಸುತ್ತಾಡಿರುವ ಕಟೀಲ್ ಅವರು, ಬಿಜೆಪಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸರಳತೆಯಿಂದಲೇ ಜನರ ಮನಸ್ಸನ್ನು ಗೆದ್ದಿರುವ ಅವರು, ಸಂಸದ, ರಾಜ್ಯಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರೂ ಹಮ್ಮು-ಬಿಮ್ಮು ತೋರದೆ ಸಾಮಾನ್ಯ ಕಾರ‌್ಯಕರ್ತನಂತೆ ಬೆರೆಯುವ ಗುಣ ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಂಘಟನೆಯ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯತೆಯನ್ನು ಸಾಧಿಸುವ ಜವಾಬ್ದಾರಿಯನ್ನೂ ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವವರಿಂದಲೂ ಪಕ್ಷದ ಕಾರ‌್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ್ದಾರೆ. ಹೊಸ ಹೊಸ ಕಾರ‌್ಯಕ್ರಮಗಳನ್ನು ಸಂಘಟನೆಗೆ ಅಳವಡಿಸಿಕೊಂಡು ಹೊಸಬರನ್ನು ಸೇರಿಸಿಕೊಂಡು ಮುನ್ನುಗುತ್ತಿದ್ದಾರೆ ಎಂದು ಬಣ್ಣಿಸಿದರು.

ಈ ಎರಡೂ ವರ್ಷದ ಅವಧಿಯಲ್ಲಿ ತಮ್ಮ ವಿರುದ್ಧ ಟೀಕೆ-ಟಿಪ್ಪಣಿಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ಕೆಲಸದ ಮೂಲಕ ಸೂಕ್ತ ಉತ್ತರಗಳನ್ನು ನೀಡಿದ್ದಾರೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ, ಮುಖಂಡರಾದ ಶಂಕರ್, ನಾಗರಾಜು, ಮಹೇಶ್ ಇತರರು ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ಮಾಸ್ಕ್ , ಸಿಹಿ ವಿತರಿಸಿದರು.

Share This Article
Leave a comment