ಮೈತ್ರಿ ಸರ್ಕಾರ ಪತನಕ್ಕೆ ಸಿದ್ದು, ರಮೇಶ್ ಕುಮಾರ್ ಹುನ್ನಾರವೇ ಕಾರಣ-ಎಚ್ ಡಿ ಕೆ

Team Newsnap
2 Min Read

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತವಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್‌ಕುಮಾರ ಅವರ ನೇರವಾದ ಪಾತ್ರ ಇದೆ. ಈ ಇಬ್ಬರು ಗ್ರೇಟ್ ಸೆಕ್ಯುಲರ್ ಲೀಡರ್‌ಗಳು ಹುನ್ನಾರ ಮಾಡಿ ಸರ್ಕಾರ ಬೀಳಿಸಿದರು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕೆ, ನಮ್ಮ ಸರ್ಕಾರ ಬಿದ್ದರೆ ಯಡಿಯೂರಪ್ಪ ಸಿಎಂ ಆಗುತ್ತಾರೆ. ಅವರು 6 ತಿಂಗಳಲ್ಲಿ ಹೆಸರು ಕೆಡಿಸಿಕೊಳ್ಳುತ್ತಾರೆ, ಮತ್ತೆ ನಾವೇ ಸಿಎಂ ಆಗ ಬಹುದು ಎಂಬುದು ಇವರ ಗ್ರೇಟ್ ಪ್ಲಾನ್ ಆಗಿತ್ತು. ನಾನು ರೈತರ ಸಾಲ ಮನ್ನಾ ಆಗಿದ್ದರಿಂದ ಸರ್ಕಾರ ಉಳಿಸಿಕೊಳ್ಳಲು ಆಸಕ್ತಿ ಇಲ್ಲದೆ ಬಿದ್ದರೆ ಬೀಳಲಿ ಎಂದು ಸುಮ್ಮನಾದೆ. ಪ್ರಯತ್ನ ಮಾಡಿದ್ದರೆ ಸರ್ಕಾರ ಉಳಿಸಿಕೊಳ್ಳ ಬಹುದಾಗಿತ್ತು ಎಂದು ತಿಳಿಸಿದರು.

ಮೈಸೂರು ಪಾಲಿಕೆ ಚುನಾವಣೆ ಬಳಿಕ ಗ್ರೇಟ್ ಸ್ಪೀಕರ್ ರಮೇಶ್‌ಕುಮಾರ್, ಜೆಡಿಎಸ್ ಬಿಜೆಪಿ ಬೆಂಬಲಿಸುತ್ತಿದ್ದರು, ನಾವು ಇದನ್ನು ಮುಂದುಮಾಡಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎಂದು ಹಬ್ಬಿಸಿ ಅವರನ್ನು ಮುಗಿಸ ಬಹುದಾಗಿತ್ತು ಎಂದು ಹೇಳಿದ್ದಾರೆ. ನಾವು ಬಿಜೆಪಿ ಬೇಡ ಎಂದರೂ ಅವರೇ ನಮ್ಮನ್ನು ಅತ್ತ ತಳ್ಳುತ್ತಿದ್ದಾರೆ ಎಂದು ಆಪಾದನೆ ಮಾಡಿದರು.

ಪಾಪ ಡಿಕೆ ಶಿವಕುಮಾರ್ :

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಪಾಪ ಸಿಎಂ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಅವರು ಸಿಎಂ ಕನಸು ಕಾಣುತ್ತಿದ್ದರೆ, ಇತ್ತ ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಬೋಡ್ ೯ ತಗಲಾಕಿಕೊಂಡು ಓಡಾಡುತ್ತಿದ್ದಾರೆ. ಈ ಇಬ್ಬರು ನಾಯಕರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಡಿಕೆಶಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು.

ಮೈಸೂರಿನಿಂದ ಪ್ರಾರಂಭವಾಗಿದೆ:

ಮೈಸೂರು ನಗರಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಗತ್ಯ ಬಹುಮತ ಇರಲಿಲ್ಲ. ಬಿಜೆಪಿಗಿಂತ ಎರಡು ಮತ ಹೆಚ್ಚಿಗೆ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೆ. ಇದನ್ನು ತಪ್ಪಿಸಲು ಕೆಲವರು ಏನೇನೋ ಮಾಡಿದರು. ಆದರೆ, ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಜೆಡಿಎಸ್ ರಾಜಕೀಯ ಪರ್ವ ಇದೀಗ ಮೈಸೂರಿನಿಂದ ಪ್ರಾರಂಭವಾಗಿದೆ ಎಂದು ಮೈಸೂರು ನಗರ ಪಾಲಿಕೆ ಗೆಲುವನ್ನು ವ್ಯಾಖ್ಯಾನಿಸಿದರು.

ಬಿಜೆಪಿಗೆ ಜೀವಕೊಟ್ಟಿದ್ದೇನೆ ನಾನು:

2006 ರಲ್ಲಿ ಬಿಜೆಪಿಯ ಶಾಸಕರು ಮಂಗನಂತೆ ಸಿಕ್ಕ ಸಿಕ್ಕಕಡೆ ನೆಗೆಯಲು ಸಿದ್ದವಿದ್ದರು. ಯಡಿಯೂರಪ್ಪ ನನ್ನನ್ನು ಮಂತ್ರಿ ಮಾಡಿ ನಿಮ್ಮ ಪಕ್ಷಕ್ಕೆ ಬಂದುಬಿಡುತ್ತೇನೆ ಎಂದು ನನ್ನ ಮನೆಬಾಗಿಲಿಗೆ ಬಂದಿದ್ದರು. ಬಿಜೆಪಿ ಜತೆಗೆ ಮೈತ್ರಿಮಾಡಿಕೊಂಡು ಆಪಕ್ಷ 2006 ರಲ್ಲಿ ಅಧಿಕಾರ ಅನುಭವಿಸಲು ನಾನೇ ಕಾರಣ. ರಾಜ್ಯದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ ಎಂದರು.

ಬಿಜೆಪಿ ವಿರುದ್ಧ ಬಾಯಿಬಿಟ್ಟಿಲ್ಲ:

ನಾನು ಇನ್ನೂ ಬಿಜೆಪಿ ವಿರುದ್ಧ ಬಾಯಿಬಿಟ್ಟಿಲ್ಲ, ನಾನು ಬಾಯಿತೆರೆದರೆ ಏನಾಗುತ್ತದೆ ಎಂದು ಗೊತ್ತಲ್ಲಾ ? ೨೦೦೮ ರಿಂದ ೨೦೧೩ರ ಅವಧಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ನಾನು ಮಾಡಿದ ಹೋರಾಟ ಎಲ್ಲರಿಗೂ ನೆನಪಿದೆ. ಮತ್ತೆ ಆ ಅವಧಿ ಮರುಕಳಿಸುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಎಚ್‌ಡಿಕೆ ಪರೋಕ್ಷ ಎಚ್ಚರಿಕೆ ನೀಡಿದರು.

Share This Article
Leave a comment