ಪಿಎಸ್ಐ (PSI)ನೇಮಕಾತಿ ಅಕ್ರಮ ಪೊಲೀಸ್ ಅಧಿಕಾರಿಗಳ ಬುಡಕ್ಕೆ ಬಂದಿದೆ. ಕಲಬುರಗಿಯಲ್ಲಿ ಕೆಎಸ್ಆರ್ಪಿ ಕಮಾಂಡೆಂಟ್ ಆಗಿರುವ ವೈಜನಾಥ್ ರೇವೂರ್ರನ್ನು ಸಿಐಡಿ ಬಂಧಿಸಿದೆ, 7 ದಿನ ಕಸ್ಟಡಿಗೆ ತೆಗೆದುಕೊಂಡಿದೆ.
ಅಕ್ರಮ ನೇಮಕಾತಿಯ ಕಿಂಗ್ಪಿನ್ ಆರ್ಡಿಪಾಟೀಲ್ ಜೊತೆ ವೈಜನಾಥ್ ರೇವೂರ್ ಶಾಮೀಲಾಗಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.
ಸಿಐಡಿ ಅಧಿಕಾರಿಗಳು ಬಂಧಿಸಿರುವ ವೈಜನಾಥ್ ರೇವೂರ್ ನ ಪತ್ನಿ ಜೈಲರ್ ಸುನಂದಾ ವೈಜನಾಥ್ ರೇವೂರ್ ಕಲಬುರಗಿಯ ಸೆಂಟ್ರಲ್ ಜೈಲ್ನಲ್ಲಿ ಜೈಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಆರೋಪಿ ಪತಿಯನ್ನೇ ಜೈಲಿಗೆ ತಳ್ಳಬೇಕಾದ ಪರಿಸ್ಥಿತಿ ಜೈಲರ್ ಪತ್ನಿಗೆ ಬಂದಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆಯ ಕೇಂದ್ರ ಬಿಂದುವಾಗಿರುವ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಎಂ.ಎಸ್ ಇರಾನಿ ಕಾಲೇಜಿನಲ್ಲಿ ಪರೀಕ್ಷೆಯ ದಿನ ಕರ್ತವ್ಯ ನಿರ್ವಹಿಸಿ ಅಕ್ರಮ ತಡೆಗಟ್ಟುವಲ್ಲಿ ವಿಫಲರಾದ ಹತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.
ಮತ್ತೊಂದೆಡೆ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿರುವ ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ ಮತ್ತು ಬೆರಳಚ್ಚು ವಿಭಾಗದ ಇನ್ಸ್ ಪೆಕ್ಟರ್ ಆನಂದ್ ಮೇತ್ರಿ ಇಬ್ಬರನ್ನೂ ಅಮಾನತು ಮಾಡಿ ಗೃಹ ಇಲಾಖೆ ಆದೇಶಿಸಿದೆ.