ತಾನು ಫೇಲ್ ಆಗಲು ಪ್ರಿನ್ಸಿಪಾಲ್ ರೇ ಕಾರಣ : ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿ!!

Team Newsnap
1 Min Read

ಉತ್ತರ ಪತ್ರಿಕೆಯ ಉತ್ತರಗಳನ್ನು ಹೊಡೆದು ಹಾಕಿ ತಾನು ಫೇಲ್ ಆಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಬಿಎಸ್‍ಸಿ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಪ್ರಿನ್ಸಿಪಾಲರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್‍ಸಿ ನರ್ಸಿಂಗ್ ಓದುತ್ತಿದ್ದ ಚನ್ನಯ್ಯ ಪ್ರಿನ್ಸಿಪಾಲರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಚನ್ನಯ್ಯ ರ್ಯಾಂಕ್ ವಿದ್ಯಾರ್ಥಿ. ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಫೇಲ್ ಆಗಿದ್ದ.

ಫೇಲ್ ಆಗಿದ್ದರ ಬಗ್ಗೆ ಅನುಮಾನಗೊಂಡು ಉತ್ತರ ಪತ್ರಿಕೆ ಪ್ರತಿ ತರಿಸಿ ನೋಡಿದಾಗ, ವಿದ್ಯಾರ್ಥಿ ಚನ್ನಯ್ಯ ಬರೆದಿರುವ ಹಲವು ಸರಿ ಉತ್ತರಗಳನ್ನು ಪೆನ್‍ನಲ್ಲಿ ಗೀಚಿ ಹೊಡೆದು ಹಾಕಲಾಗಿದೆ. ಇದರಿಂದಾಗಿ ನಾನು ಫೇಲ್ ಆಗಿದ್ದೇನೆ ಎಂದು ದೂರಿದ್ದಾನೆ.

ತನ್ನನ್ನು ಫೇಲ್ ಮಾಡಿರುವುದರಲ್ಲಿ ಕಾಲೇಜಿನ ಪ್ರಾಂಶುಪಾಲರ ಕೈವಾಡವಿದೆ ಎಂದು ಆರೋಪಿಸಿರುವ ವಿದ್ಯಾರ್ಥಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ತರಿಸಿ ಹೋರಾಟಕ್ಕಿಳಿದಿದ್ದಾನೆ.

ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಶೋಭ ದೇವಮಾನೆ ವಿರುದ್ಧ ದೂರು ದಾಖಲಾಗಿದೆ.

Share This Article
Leave a comment