ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಗಲಭೆ, ಹಿಂಸಾಚಾರ ಖಂಡಿಸಿ ,ಘಟನೆ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ವಿಷಾದಿಸಿದರು.
ಬಜೆಟ್ ಅಧಿವೇಶನಕ್ಕೂ ಮುನ್ನ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಗಳು, ಗಣರಾಜ್ಯೋತ್ಸವದಂತಹ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಯಿತು. ಸಂವಿಧಾನದಲ್ಲಿ ಎಲ್ಲರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಲಾಗಿದೆ. ಹಾಗೆಯೇ ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ಅನುಸರಿಸಬೇಕೆಂದು ಅದೇ ಸಂವಿಧಾನ ನಮಗೆಲ್ಲ ತಿಳಿಸಿಕೊಟ್ಟಿದೆ ಎಂದು ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆಯಿಂದಾಗ ಗಲಭೆಯನ್ನು ಖಂಡಿಸಿದರು.
ಕರೊನಾ ವಿರುದ್ಧ ಹೋರಾಟದಲ್ಲಿ ನಾವು ಅನೇಕ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಕರೊನಾ ಸಮಯದಲ್ಲೇ ಮಾಜಿ ರಾಷ್ಟ್ರಪತಿ ಪ್ರಣಾಬ್ ಮುಖರ್ಜಿ ತೀರಿಕೊಂಡರು. ಕೋವಿಡ್ನಿಂದ 6 ಸಂಸದರು ನಮ್ಮನ್ನು ಬಿಟ್ಟು ಹೋದರು. ಆ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆಂದರು.
ನಮ್ಮ ಸರ್ಕಾರ ಸರಿಯಾದ ಸಮಯಕ್ಕೆ ತೆಗೆದುಕೊಂಡ ನಿರ್ಧಾರಗಳಿಂದ ಲಕ್ಷಾಂತರ ನಾಗರಿಕರ ಜೀವವನ್ನು ಉಳಿಸಿರುವುದರ ಬಗ್ಗೆ ನನಗೆ ಸಮಾಧಾನವಿದೆ. ಇಂದು ಕರೊನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಇಳಿಮುಖವಾಗುತ್ತದೆ. ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಭಾರತ, ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನ ನಡೆಸಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಾನವಕುಲದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಭಾರತ ಬೇರೆ ದೇಶಗಳ ಲಕ್ಷಾಂತರ ಲಸಿಕೆಗಳನ್ನು ಒದಗಿಸಿದೆ ಎಂದು ಹೆಮ್ಮೆಪಟ್ಟರು.