ಗ್ರಾಮ ಪಂಚಾಯತಿ ವಾರ್ಡ್ ಸಭೆಯೊಂದು ಪ್ರೇಮಿಗಳಿಬ್ಬರಿಗೆ ಮದುವೆ ಮಂಟಪವಾದ ಘಟನೆಗೆ ಸಾಕ್ಷಿಯಾಗಿದೆ.
ಮೈಸೂರಿನ ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಪ್ರೇಮಿಗಳಿಬ್ಬರನ್ನು ಹರದನಹಳ್ಳಿ ಪಿಡಿಓ ಮಹದೇವಸ್ವಾಮಿ ಒಂದು ಮಾಡಿದ್ದಾರೆ.
ಕುಟುಂಬಗಳ ನಡುವಿನ ಕಲಹದಿಂದ ನೊಂದಿದ್ದ ಪ್ರೇಮಿಗಳಿಬ್ಬರಿಗೆ ಮಹದೇವಸ್ವಾಮಿ ಪರಿಹಾರ ಸೂಚಿಸಿ ಹೊಸ ಬದುಕಿಗೆ ದಾರಿ ತೋರಿಸಿ ಕೊಟ್ಟಿದ್ದಾರೆ.
ಹರದನಹಳ್ಳಿ ಯಲ್ಲಿ ವಾರ್ಡ್ಗಳ ಕುಂದುಕೊರತೆಗಳನ್ನು ಬಗೆಹರಿಸಲು ವಾರ್ಡ್ ಸಭೆಯನ್ನು ಕರೆಯಲಾಗಿತ್ತು. ಆದರೆ, ಈ ಸಭೆ ಪ್ರೇಮಿಗಳ ಪಾಲಿನ ಮದುವೆ ಮಂಟಪವಾಗಿ ಬದಲಾಗಿತ್ತು.
ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರೂ ಕುಟುಂಬಸ್ಥರ ವಿರೋಧದಿಂದ ಪ್ರೇಮಿಗಳು ದೂರಾಗಿದ್ದರು. ಈ ವಿಚಾರ ಕುರಿತು ಸಭೆಯಲ್ಲಿ ಎದ್ದ ಗದ್ದಲ ತಿಳಿದು ಬಂದ ಪಿಡಿಓ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ.
ಸಭೆಯಲ್ಲಿ ಪ್ರೇಮಿಗಳಾದ ಬಸವರಾಜು ಹಾಗೂ ಸುಚಿತ್ರ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಪ್ರೇಮಿಗಳ ಎರಡೂ ಕುಟುಂಬದವರು ಮದುವೆಗೆ ವಿರೋಧಿಸಿದ್ದರು. ಈ ಮಧ್ಯೆ ಗ್ರಾಮದ ಮುಖಂಡರು ದಂಡ ಕಟ್ಟಿಸಿಕೊಂಡು ಮದುವೆ ಮಾಡಿಸಲು ಮುಂದಾಗಿದ್ದರು.
ಆದರೆ ಈ ವಿಷಯ ತಿಳಿದ ಪಿಡಿಓ, ತಿಳಿಹೇಳಿ ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಸಿದ್ದಾರೆ.
ಜೊತೆಗೆ ಪ್ರೇಮಿಗಳ ಪೋಷಕರನ್ನೂ ಸಹ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ.