ಪುತ್ರನ ರಾಜಕೀಯ ಭವಿಷ್ಯ ಗಟ್ಟಿ ಮಾಡಲು ಮಂಡ್ಯದಲ್ಲಿ ಮನೆ ನಿರ್ಮಿಸಲು ಮುಂದಾದ ಸಂಸದೆ

Team Newsnap
2 Min Read
Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಇದೊಂದು ರಾಜಕೀಯ ಚಾಣಾಕ್ಷ ನಡೆ. ಅಂಬರೀಶ್ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಮನೆ ಮಾಡಿದ್ದರು. ವಾಸ ಮಾಡಿದ್ದೇ ಅಪರೂಪ. ಸುಮಲತಾ ಕೂಡ ಮನೆ ಮಾಡಿದ್ದರು. ನಂತರ ಖಾಲಿ ಮಾಡಿ ಬೆಂಗಳೂರು ಸೇರಿದರು.

ದಳಪತಿ ಕುಮಾರಸ್ವಾಮಿ ಮಗ ನಿಖಿಲ್, ತಮ್ಮ ರಾಜಕೀಯ ಭವಿಷ್ಯ ಗಟ್ಟಿ ಮಾಡಲು ಮಂಡ್ಯದಲ್ಲಿ ಫಾರ್ಮ್ ಹೌಸ್ ಮಾಡಿ , ಮಂಡ್ಯದ ಹುಡುಗಿಯನ್ನೇ ಮದುವೆಯಾಗುವು ದಾಗಿ ಚುನಾವಣೆ ವೇಳೆ ಪ್ರಚಾರ ಭಾಷಣ ಮಾಡಿದ್ದರು. ಆದರೆ ಆ ಮಾತುಗಳೆಲ್ಲವೂ ಚುನಾವಣೆ ಸೀಮಿತವಾಗಿದ್ದವು. ಮಂಡ್ಯದಲ್ಲಿ ಮನೆ ಮಾಡಲಿಲ್ಲ. ಮಂಡ್ಯ ಹುಡುಗಿಯನ್ನು ಮದುವೆಯಾಗದ ನಿಖಿಲ್ , ನಾನು ಸೋತಲ್ಲೇ ಗೆದ್ದು ತೋರಿಸುವೆ ಎಂದು ಆಗಾಗ ಹೇಳುತ್ತಾರೆ.

ಈಗ ಕಳೆದ ಚುನಾವಣೆಯಲ್ಲಿ ಹೇಳಿದಂತೆ ಸಂಸದೆ ಸುಮಲತಾ.
ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ 30 ಗುಂಟೆ ಜಾಗದಲ್ಲಿ ಸುಮಲತಾ ಸ್ವಂತ ಮನೆ ನಿರ್ಮಾಣಕ್ಕೆ ಪ್ಲಾನ್ ಮಾಡಿ ಬುಧವಾರ ಮನೆಗೆ ಭೂಮಿ ಪೂಜೆ ಮಾಡಲಿದ್ದಾರೆ. ತಮ್ಮ ಆಪ್ತ ವಲಯದಲ್ಲಿರುವ ಹನಕೆರೆ ಶಶಿಗೆ ಸೇರಿದ ಜಾಗವನ್ನೇ ಖರೀದಿ ಮಾಡಿದ್ದಾರೆ.

8 ತಿಂಗಳಲ್ಲಿ ಮನೆ ನಿರ್ಮಿಸಿ ವಿಧಾನಸಭೆ ಚುನಾವಣೆ ತಯಾರಿ ಆರಂಭಿಸುವ ಲೆಕ್ಕಾಚಾರ ನಡೆದಿದೆ. ಸುಮಲತಾ ನಿವಾಸದ ಭೂಮಿ ಪೂಜೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳೂ ಶುರುವಾಗಿವೆ.

ಮನೆ ನಿರ್ಮಾಣದ ಹಿಂದಿನ‌ ಲೆಕ್ಕಚಾರಗಳು ಏನು?

ಹನಕೆರೆ ಬಳಿ ಸ್ವಂತ ಮನೆ ನಿರ್ಮಾಣ ಮಾಡುವ ಹಿಂದೆ ಸಂಸದೆ ಸುಮಲತಾರ ರಾಜಕೀಯ ತಂತ್ರಗಾರಿಕೆ, ಸಾಕಷ್ಟು ಲೆಕ್ಕಾಚಾರ ಅಡಗಿದೆ ಎಂಬುದು ಸಾರ್ವಜನಿಕ ವಲಯದ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ಜನರೆದರು ಸುಮಲತಾ ತಾವು ಮಂಡ್ಯದಲ್ಲಿ ಇರುವುದಾಗಿ ಹೇಳಿದ್ದರು. ಅದರಂತೆಯೇ ಎರಡು ವರ್ಷಗಳ ತರುವಾಯ ಮನೆ ನಿರ್ಮಿಸಿ, ಜನರ ಮನಗೆಲ್ಲಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆ ಗೆ ಸ್ಪರ್ಧೆ ಮಾಡಲು ಈ ಮನೆ ನಿರ್ಮಾಣ ಗಟ್ಟಿ ಅಡಿಪಾಯ ಹಾಕಿದಂತಾಗುತ್ತದೆ ಎಂಬುದು ಲೆಕ್ಕಾಚಾರ.

ಪುತ್ರನ ರಾಜಕೀಯ ಭವಿಷ್ಯ ರೂಪಿಸುವ ಈ ಮನೆ ?

ಮಗ ಅಭಿಷೇಕ್ ನನ್ನು ಅಂಬರೀಶ್ ನೆಲೆಗಟ್ಟಿನಲ್ಲೇ ರಾಜಕೀಯ ಭವಿಷ್ಯ ವನ್ನು ಭದ್ರಪಡಿಸುವುದು ಈ ಮನೆ ನಿರ್ಮಾಣದ ಹಿಂದಿನ ಲೆಕ್ಕಾಚಾರವೂ ಇರಬಹುದು.

ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಅಭಿಷೇಕ್‌ ಕಣಕ್ಕಿಸಲು ಸುಮಲತಾ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟೂರು ಕೂಡ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮ.
ಹೀಗಾಗಿ ಮದ್ದೂರು ಕ್ಷೇತ್ರದಿಂದಲೇ ಮಗನ ಸ್ಪರ್ಧೆಗೆ ಈಗಿನಿಂದಲೇ ಸಿದ್ಧತೆ ಮಾಡುತ್ತಿರುವುದು ಸುಸ್ಪಷ್ಟ.

ಮಗನ ರಾಜಕೀಯ ಭವಿಷ್ಯಕ್ಕೆ ಸಹಕಾರಿಯಾಗಲೆಂದೇ ಹನಕೆರೆ ಬಳಿ ಸ್ವಂತ ಮನೆ ನಿರ್ಮಾಣ.
ಮಂಡ್ಯ ಹಾಗೂ ಮದ್ದೂರು ಮಧ್ಯೆದಲ್ಲಿ ಹನಕೆರೆ ಗ್ರಾಮ. ಮಂಡ್ಯ, ಮದ್ದೂರು ಎರಡಕ್ಕೂ ಹತ್ತಿರವಾಗುವ ರೀತಿಯಲ್ಲಿ ಯೋಜನೆ ರೂಪಿಸಿದ್ದಾರೆ.

ಒಟ್ಟಾರೆ ಸಂಸದೆ ಸುಮಲತಾ ಅವರ ಮನೆ ನಿರ್ಮಾಣದ ಹಿಂದೆ ಅಡಗಿರುವ ಲೆಕ್ಕಾಚಾರಗಳು, ತಂತ್ರಗಳು ಮಾತ್ರ ಸಾಕಷ್ಟು ಚರ್ಚೆಗೆ ಅನುವು ಮಾಡಿಕೊಟ್ಟಿವೆ.

Share This Article
Leave a comment