ನಮ್ಮ ಬೆಂಗಳೂರು ನಮ್ಮ ಹೆಮ್ಮೆ- ಸೂರು ಕೊಟ್ಟ ಊರಿಗೆ ಋಣವಾಗಿರೋಣ – ಚಿತ್ರಸಾಹಿತಿ ಕವಿರಾಜ್

Team Newsnap
2 Min Read

ನಾಲ್ಕು ದಿನದ ಸಂಕಷ್ಟಕ್ಕೆ ವರುಷಗಳಿಂದ ಪೊರೆದ ಮಾತೃ ಹೃದಯಿ ಬೆಂಗಳೂರಿಗೆ ಬೈದರೇ, ಗೇಲಿ ಮಾಡಿದರೆ ಉದ್ಧಾರ ಆಗ್ತಿರೇನ್ರೋ..’ ಎಂದು ನಿರ್ದೇಶಕ, ಗೀತ ಸಾಹಿತಿ ಕವಿರಾಜ್ ಪ್ರಶ್ನೆ ಮಾಡಿದ್ದಾರೆ.

ಕವಿರಾಜ್ ತಮ್ಮ ಫೇಸ್‌ಬುಕ್ ಪೋಸ್ಟ್‌ ನಲ್ಲಿ ಹೊರ ರಾಜ್ಯದವರು ಸಾಮಾಜಿಕ ಜಾಲ ತಾಣದಲ್ಲಿ ಬೆಂಗಳೂರಿನ ಮಳೆಯ ಬಗ್ಗೆ ಹಾಗೂ ಅದರಿಂದಾದ ಈಗಿನ ಅವಾಂತರ ಬಗ್ಗೆ ಟ್ರೋಲ್ ಮಾಡುತ್ತಿರುವ ಕನ್ನಡ ವಿರೋಧಿಗಳಿಗೆ ನೀಡಿದ ಪ್ರತ್ಯುತ್ತರ ಮುಟ್ಟಿ ನೋಡಿಕೊಳ್ಳುವಂತಿದೆ.

ಕವಿರಾಜ್ ಅವರ ಫೇಸ್‌ಬುಕ್ ಪೋಸ್ಟ್‌ ಇಲ್ಲಿದೆ :

ಮರೆತಿರಬೇಕು..ಒಮ್ಮೆ ಜ್ಞಾಪಿಸುತ್ತೇನೆ.

ಊರು ಬಿಟ್ಟಾಗಿಂದ ತಿಂದ ಒಂದೊಂದು ಕಾಳು ಅನ್ನದ ದುಡಿಮೆಗೆ ದಾರಿಯಾಗಿದ್ದು ಈ ಊರು

ಊರಲ್ಲಿ ಕೆಲಸಕ್ಕೆ ಬಾರದವರು ಎನಿಸಿಕೊಳ್ಳುತ್ತಿದ್ದವರಿಗೆ ಕೆಲಸ ಕೊಟ್ಟಿದ್ದು ಈ ಊರು

ಅಪ್ಪ- ಅಮ್ಮನ ದುಡ್ಡಲ್ಲಿ ಟಿಕೇಟ್ ಕೊಂಡು ಬಸ್ಸು , ರೈಲು ಹತ್ತಿ ಬಂದವರಿಗೆ ಸ್ವಂತ ಕಾರಲ್ಲಿ ಊರಿಗೆ ಹೋಗಿ ಬರುವಂತೆ ಮಾಡಿದ್ದು ಈ ಊರು

ಹುಟ್ಟಿದ ಊರಲ್ಲಿ ಮನೆ ಕಟ್ಟಿಸಲು ದುಡ್ಡು ಕೊಟ್ಟಿದ್ದು ಈ ಊರು

ಅಕ್ಕ ತಂಗಿಯರ ಮದುವೆ ಖರ್ಚಿಗೆ
ಹಣ ಹುಟ್ಟಿಸಿದ್ದು ಈ ಊರು

ಅಪ್ಪ ಅಮ್ಮನ ಚಿಕಿತ್ಸೆಯ ಬಿಲ್ ಭರಿಸೋ ತಾಕತ್ತು ಕೊಟ್ಟಿದ್ದು ಈ ಊರು

ಆ ಜಾತಿ ಈ ಧರ್ಮ ಆ ರಾಜ್ಯ ಈ ಭಾಷೆ ಅಂತಾ ಭೇದ ಮಾಡದೇ ಎಲ್ಲರನ್ನು ಒಂದೇ ಕಟ್ಟಡಗಳಲ್ಲಿ ಒಂದಾಗಿ ಬಾಳುವಂತೆ ಮಾಡಿದ್ದು ಈ ಊರು

ಬೇರೆ ನಗರಗಳು ಧಗೇಲಿ ಬೇಯುತ್ತಿರುವಾಗ ಏಸಿ ವೆದರ್ ಅಲ್ಲಿ ನಮ್ಮನ್ನು ತಣ್ಣಗಿಟ್ಟಿದ್ದು
ಈ ಊರು

ಎಲ್ಲೆಲ್ಲಿಂದಲೋ ಉದ್ಯೋಗ ಅರಸಿ ಹೊಟ್ಟೆ ಪಾಡಿಗಾಗಿ ಬಂದಿಳಿದವರು ನಾಲ್ಕಾರು ಫ್ಲಾಟ್ ಕೊಂಡು , ವೀಕೆಂಡ್ ಮೋಜು ಮಸ್ತಿ ಮಾಡಿಕೊಂಡು ಇಲ್ಲಿನ ಭಾಷೆ ,ಸಂಸ್ಕ್ರತಿ ಗೌರವಿಸದಿದ್ದರು ಹೋಗಲೀ ಬಿಡು ಅಂತಾ
ಬಿಂದಾಸಾಗಿರಲು ಅನುವು ಮಾಡಿಕೊಟ್ಟಿದ್ದು ಈ ಊರು

ಕೋಟ್ಯಾಂತರ ಜನರಿಗೆ ಬದುಕು ಕಟ್ಟಿ ಕೊಟ್ಟ ವಿಶಾಲ ಹೃದಯಿ , ಅವಕಾಶಗಳ ಆಗರ ನಮ್ಮ ಬೆಂಗಳೂರು

ನಾಲ್ಕು ದಿನದ ಮಳೆಗೆ ರಸ್ತೆ ,ಮನೆಗಳಿಗೆ ನೀರು ನುಗ್ಗಿ ಅವಾಂತರಗಳಾದರೆ ಒಂದು ಹಂತಕ್ಕೆ ಆಡಳಿತದ ಅಸಮರ್ಪಕ ನಿರ್ವಹಣೆಯನ್ನು ಟೀಕಿಸಬಹುದಾದರೂ, ಇಂತಾ ಜಡಿಮಳೆಯ ಪ್ರಕೃತಿ ವಿಕೋಪಕ್ಕೆ ಅಮೇರಿಕ , ಯೂರೋಪ್ ಅಂತಾ ದೇಶಗಳ ಸುಸಜ್ಜಿತ ನಗರಗಳು ಸಿಕ್ಕು ಒದ್ದಾಡಿರುವುದನ್ನು ಗಮನಿಸಬೇಕು.

ಏನೇ ಆದರೂ ನಾಲ್ಕು ದಿನದ ಸಂಕಷ್ಟಕ್ಕೆ ವರುಷಗಳಿಂದ ಪೊರೆದ ಮಾತೃ ಹೃದಯಿ ಬೆಂಗಳೂರಿಗೆ ಬೈದರೇ, ಗೇಲಿ ಮಾಡಿದರೆ ಉದ್ಧಾರ ಆಗ್ತಿರ್ರೇನ್ರೋ

ನಮ್ಮ ಬೆಂಗಳೂರು❤️ ನಮ್ಮ ಹೆಮ್ಮೆ❤️
ಇಷ್ಟ ಆಗ್ದೇ ಇರೋರು ದಯಮಾಡಿ
ಗಂಟು ಮೂಟೆ ಕಟ್ಟಿ ಹೊರಡಿ .
ಮತ್ತೆ ಈ ಕಡೆ ಮುಖ ಹಾಕ್ಬೇಡಿ.
ಉಳಿದವರು ನೆಮ್ಮದಿಯಿಂದ ಇರ್ತೀವಿ.

  • ಕವಿರಾಜ್
Share This Article
Leave a comment