ಸಚಿವ ಕೆ. ಸಿ. ನಾರಾಯಣ ಗೌಡ ಕಾಂಗ್ರೆಸ್ಗೆ ಸೇರ್ಪಡೆಯಾದರೆ ಅದರ ಪರಿಣಾಮ ಪಕ್ಷದ ಮೇಲೆ ಯಾವ ರೀತಿಯಲ್ಲಿ ಬೀರುತ್ತದೆ ಎಂಬುದರ ಬಗ್ಗೆ ಚರ್ಚಿಸಲು ಕಾಂಗ್ರೆಸ್ನ ಎಲ್ಲಾ ಸ್ಥಳೀಯ ನಾಯಕರೂ ಒಮ್ಮತದಿಂದ ಹೈಕಮಾಂಡ್ ಗಮನಕ್ಕೆ ತರಲು ತೆರಳುವುದಾಗಿ ಮಾಜಿ ಶಾಸಕ ಕೆ. ಬಿ. ಚಂದ್ರಶೇಖರ್ ಹೇಳಿದರು.
ಇದನ್ನು ಓದಿ :ಮಂಡ್ಯದ KRS ಜಲಾಶಯದ ಒಳಹರಿವು ಹೆಚ್ಚಳ
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಹೋಬಳಿ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಷ್ಟ – ಸುಖಗಳಿಗೆ ಸ್ಥಳೀಯ ನಾಯಕತ್ವ ಸ್ಪಂದಿಸಿ ಕೆಲಸ ಮಾಡುತ್ತಿದೆ. ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನು ಹರಿಸಿದರೂ ಕೂಡಾ 40 ಸಾವಿರಕ್ಕೂ ಅಧಿಕ ಮತಗಳು ಕಾಂಗ್ರೆಸ್ಗೆ ಬಂದಿವೆ. ಇಂತಹ ನಿಷ್ಠಾವಂತ ಮತದಾರರನ್ನು ಹೊಂದಿರುವ ಕಾಂಗ್ರೆಸ್ ಶಕ್ತಿಹೀನವಾಗಲು ಸಾಧ್ಯವೇ ಇಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ತಾಲೂಕಿನಲ್ಲಿಯೂ ಕೂಡಾ ಅಭಿವೃದ್ಧಿಯ ಪರ್ವ ಮಾಡುತ್ತೇವೆಂದು ಘೋಷಿಸಿಕೊಂಡಿದ್ದ ಬಿಜೆಪಿ ಮಾತಿಗೆ ತಪ್ಪಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದರು ‘
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್ ಮಾತನಾಡಿ. ಪಕ್ಷದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ಪಕ್ಷದ ಪ್ರಮುಖ ಹುದ್ದೆಗಳನ್ನು ನೀಡುವ ಕೆಲಸವನ್ನು ಮಾಡೋಣ’ ಎಂದಾಗ ಎಲ್ಲರೂ ಒಮ್ಮತದ ಅನುಮೋದನೆಯನ್ನು ನೀಡಿದರು.
ಮಾಜಿ ಶಾಸಕ ಬಿ. ಪ್ರಕಾಶ್ ಮಾತನಾಡಿ, ‘ದಿನೇಶ್ ಗೂಳೀಗೌಡರ ಗೆಲುವಿನ ಅನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ವೃದ್ದಿಸಿದೆ. ಗೂಳೀಗೌಡರ ಗೆಲುವಿಗೆ ಶ್ರಮಿಸಿದಂತೆ ಪಕ್ಷದ ಕಾರ್ಯಕರ್ತರು ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಮಧು ಮಾದೇಗೌಡರ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.
ನಗರ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ. ನಾಗೇಂದ್ರ ಕುಮಾರ್, ಪಕ್ಷದ ಮುಖಂಡರಾದ ಎಂ. ಡಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಚೇತನಾ ಮಹೇಶ್, ಮಾದಾಪುರ ರಾಮ ಕೃಷ್ಣೇಗೌಡ, ಬೂಕನಕೆರೆ ವೆಂಕಟೇಶ್, ತಾ. ಪಂ. ಮಾಜಿ ಸದಸ್ಯರುಗಳಾದ ಶಾಮಣ್ಣ, ಸಣ್ಣ ನಿಂಗೇಗೌಡ, ಮಾಧವ ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿವಾಕರ್, ಶಿವಣ್ಣ, ರಾಜಯ್ಯ, ವೆಂಕಟಪ್ಪ, ಪುರಸಭಾ ಸದಸ್ಯರಾದ ಡಿ. ಪ್ರೇಂ ಕುಮಾರ್, ಕೆ. ಬಿ. ಮಹೇಶ್, ಸಲ್ಲು ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದು ಅಭಿಪ್ರಾಯ ಮಂಡಿಸಿದರು.