ನಾಗಮಂಗಲ : ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ- ಮೊಮ್ಮಕ್ಕಳು ಸೇರಿ ತಾತನ ದುರಂತ ಸಾವು

Team Newsnap
1 Min Read

ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟು ಪುಟ್ಟ ಮಕ್ಕಳ ತಾಯಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಗುಡ್ಡೇನಹಳ್ಳಿ ಕ್ರಾಸ್ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

ತಾಲೂಕಿನ ಹೊಣಕೆರೆ ಗ್ರಾಮದ ಜೆಡಿಎಸ್ ಮುಖಂಡ ಆನಂದಕುಮಾರ್ 62 ಹಾಗೂ ಮೊಮ್ಮಕ್ಕಳಾದ ಆರಾಧ್ಯ 10 ಹಾಗೂ ಗೌರವ್ 5 ಮೃತ ದುರ್ದೈವಿ ಗಳು.

ಈ ಘಟನೆಯಲ್ಲಿ ಆನಂದಕುಮಾರ ಸೊಸೆ ಮೋನಿಕಾ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನೆ ಹೇಗಾಯಿತು ?

ರಾಷ್ಟ್ರೀಯ ಹೆದ್ದಾರಿಯ ಗುಡ್ಡೇನಹಳ್ಳಿ ಸಮೀಪದ ತೋಟದ ಮನೆಯಿಂದ ಸ್ವಗ್ರಾಮ ಹೊಣಕೆರೆ ಗೆ ತಮ್ಮ ಇಬ್ಬರು ಮೊಮ್ಮಕ್ಕಳು ಹಾಗೂ ಸೊಸೆಯೊಂದಿಗೆ ಹೋಂಡಾ ಆಕ್ಟಿವಾ ಸ್ಕೂಟರ್ನಲ್ಲಿ ಶನಿವಾರ ರಾತ್ರಿ 8.30 ರಲ್ಲಿ ತೆರಳುತ್ತಿದ್ದ ವೇಳೆ ರಸ್ತೆಬದಿಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಆನಂದ್ ಕುಮಾರ್ ಚಾಲನೆ ಮಾಡುತ್ತಿದ್ದ ಸ್ಕೂಟರ್ ಲಾರಿ ಮುಂಭಾಗಕ್ಕೆ ಅಪ್ಪಳಿಸಿ ಸಿಲುಕಿಕೊಂಡ ಪರಿಣಾಮ 10 ವರ್ಷದ ಮೊಮ್ಮಗಳು ಆರಾಧ್ಯ ಸ್ಥಳದಲ್ಲೇ ಜೀವ ಬಿಟ್ಟರೆ ಐದುವರ್ಷದ ಮೊಮ್ಮಗ ಗೌರವ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದಾನೆ.

ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಆನಂದ್ ಕುಮಾರ್ ಮತ್ತು ಸೊಸೆ ಮೋನಿಕಾಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆಂದು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆನಂದ್ ಕುಮಾರ್ ಮೃತ ಪಟ್ಟಿದ್ದಾರೆ.

ಸೊಸೆ ಮೋನಿಕಾ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ತಹಶೀಲ್ದಾರ್ ಕುಂಜಿ ಅಹಮದ್ ಡಿವೈಎಸ್ಪಿ ನವೀನ್ ಕುಮಾರ್ ಸಿಪಿಐ ಸುಧಾಕರ್ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸತೀಶ್ ಪರಿಶೀಲನೆ ನಡೆಸಿದ ನಂತರ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

Share This Article
Leave a comment